‘ನಿಮ್ಮ ಪ್ರೀತಿ ಎಂದಿಗೂ ಕಡಿಮೆಯಾಗಲ್ಲ’: ಧೋನಿಯನ್ನ ಕಳುಹಿಸಿಕೊಟ್ಟ ಸಿಎಸ್‍ಕೆ ಅಭಿಮಾನಿಗಳು

Public TV
1 Min Read

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಏಪ್ರಿಲ್ 15ಕ್ಕೆ ಮುಂದೂಡಿದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ರಾಂಚಿಗೆ ಮರಳಿದ್ದಾರೆ.

ಎಂ.ಎಸ್.ಧೋನಿ ಅವರು ಸಿಎಸ್‍ಕೆ ಸಿಬ್ಬಂದಿ ಮತ್ತು ಅಭಿಮಾನಿಗಳನ್ನು ಭೇಟಿಯಾಗುವ ವಿಡಿಯೋವನ್ನು ಫ್ರ್ಯಾಂಚೈಸ್ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದೆ. ಧೋನಿ ಮೈದಾನದಿಂದ ಹೊರ ಬರುವಾಗ ತಮ್ಮ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದರು. ಈ ಕುರಿತು ಪ್ರತಿಕ್ರಿಯಿಸಿದ ನೆಟ್ಟಿಗರು ಧೋನಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

‘ಧೋನಿ ಅವರ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ’ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮತ್ತೊಬ್ಬರು ರಿಟ್ವೀಟ್ ಮಾಡಿ, ‘ದಯವಿಟ್ಟು ಜನರು ಧೋನಿ ಅವರ ಕೈಯನ್ನು ಕುಲುಕುವುದನ್ನು ತಪ್ಪಿಸಿ’ ಎಂದು ಕೊರೊನಾ ಭೀತಿಯನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಹಿನ್ನೆಲೆಯಲ್ಲಿ ಸಿಎಸ್‍ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾರ್ಚ್ 3ರಂದು ಚೆನ್ನೈಗೆ ಆಗಮಿಸಿ, ಅಭ್ಯಾಸ ಆರಂಭಿಸಿದ್ದರು. ಜೊತೆಗೆ ತಂಡದ ಅನುಭವಿ ಆಟಗಾರ ಸುರೇಶ್ ರೈನಾ ಸೇರಿದಂತೆ ಕೆಲ ಆಟಗಾರರು ಈಗಾಗಲೇ ಚೆನ್ನೈನ ಚಿದಂಬರಂ ಮೈದಾನದಲ್ಲಿ ಕ್ರಿಕೆಟ್ ಅಭ್ಯಾಸ ನಡೆಸಿದ್ದರು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಹೀಗಾಗಿ ಧೋನಿ ಭಾನುವಾರ ತವರಿಗೆ ಮರಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *