ನಾರಾಯಣಗೌಡ, ಚಲುವರಾಯಸ್ವಾಮಿಯವರಿಂದ ಹೇಳಿಸಿಕೊಳ್ಳುವಷ್ಟು ದೇವೇಗೌಡರು ಧೃತಿಗೆಟ್ಟಿಲ್ಲ- ಪುಟ್ಟರಾಜು

Public TV
1 Min Read

ಮಂಡ್ಯ: ನಾರಾಯಣಗೌಡರಿಂದ ವಾಗ್ದಾಳಿ ಮಾಡಿಸಿಕೊಳ್ಳುವಷ್ಟು ದೇವೇಗೌಡರು ಧೃತಿಗೆಟ್ಟಿಲ್ಲ. ಅವರಿಂದ ಹೇಳಿಸಿಕೊಳ್ಳುವಷ್ಟರ ಮಟ್ಟಿಗೆ ನಾವಿನ್ನೂ ಬಂದಿಲ್ಲ. ಅಲ್ಲದೆ ಜೆಡಿಎಸ್ ಬಗ್ಗೆ ಮಾತನಾಡುವ ಚಲುವರಾಯಸ್ವಾಮಿ ಯಾವ ಪಕ್ಷ ಎಂದು ಹೇಳಬೇಕು ಎಂದು ಮಾಜಿ ಸಚಿವ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರು.

ಜಿಲ್ಲೆಯ ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲುವರಾಯಸ್ವಾಮಿ ಅವರು ಯಾವ ಪಕ್ಷ ಎಂದು ಹೇಳಬೇಕು. ಹಗಲು ಸಿದ್ದರಾಮಯ್ಯ ಅವರ ಪಕ್ಕ ಕುಳಿತುಕೊಂಡು ಯಡಿಯೂರಪ್ಪ ಅವರನ್ನು ಬೈಯುತ್ತಾರೆ. ರಾತ್ರಿ ಯಡಿಯೂರಪ್ಪ ಅವರ ಜೊತೆ ಕೂತು ಊಟ ಮಾಡುತ್ತಾರೆ. ಚಲುವರಾಯಸ್ವಾಮಿ ಮೊದಲು ಯಾವ ಪಕ್ಷ ಎಂದು ಗುರುತಿಸಿಕೊಳ್ಳಬೇಕು ಹರಿಹಾಯ್ದಿದ್ದಾರೆ.

ದೇವೇಗೌಡರು ಮತ್ತು ಅವರ ಮಕ್ಕಳ ಮೇಲೆ ದ್ವೇಷ ಮಾಡಿದವರು ಮನೆಗೆ ಹೋಗಿದ್ದಾರೆ. ಚಲುವರಾಯಸ್ವಾಮಿ ಬಾಳೆ ಎಲೆ ಆಗಬೇಕೇ ಹೊರತು, ಎಂಜಲು ಎಲೆ ಆಗಬಾರದು. ರಾಜಕೀಯವಾಗಿ ಬೆಳೆಯಬೇಕೆಂದರೆ ಬೆಳೆಯಲಿ. ನನ್ನ ರಾಜಕೀಯ ಇತಿಹಾಸದಲ್ಲಿ ನಾನು ಕುದುರೆಯ ಮೇಲೆ ಇದ್ದೇನೆ. ಜನರೊಟ್ಟಿಗೆ ನಿಂತು ಕೆಲಸ ಮಾಡುತ್ತೀದ್ದೇನೆ. ನಾನು ಮೊದಲಿನಿಂದ ಹೇಗೆ ಇದ್ದೇನೋ ಈಗಲೂ ಹಾಗೇ ಇದ್ದೇನೆ ಎಂದು ಕುಟುಕಿದರು.

ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರನ್ನು ಬೇರೆ ಮಾಡಲು ಚಲುವರಾಯಸ್ವಾಮಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈಗ ಸರಿಯಾಗಿ ನೆಲೆ ಇಲ್ಲವಲ್ಲ, ಹೀಗಾಗಿ ಅವರ ಬೇಳೆ ಬೇಯಿಸಿಕೊಳ್ಳಬೇಕಿದೆ. ಹೀಗಾಗಿ ಏನೆನೋ ಮಾತನಾಡುತ್ತಿದ್ದಾರೆ. ಡಿಕೆಶಿ- ಕುಮಾರಸ್ವಾಮಿ ಸಂಬಂಧವನ್ನು ಬೇರ್ಪಡಿಸುವ ಹುನ್ನಾರವನ್ನು ಚಲುವರಾಯಸ್ವಾಮಿ ಮಾಡುತ್ತಿದ್ದಾರೆ. ಚಲುವರಾಯಸ್ವಾಮಿ ಚುನಾವಣೆಯಲ್ಲಿ ಸೋತ ಬಳಿಕ ಗುರುತಿಸಿಕೊಳ್ಳಲು ಇಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದು ದೂರಿದರು.

ಮಂಡ್ಯದ ಮೈ ಷುಗರ್ ಸಕ್ಕರೆ ಕಾರ್ಖಾನೆ ಆರಂಭಿಸಬೇಕು. ಕಾರ್ಖಾನೆ ಆರಂಭವಾಗದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕಾರ್ಖಾನೆ ಒಂದು ವಾರದಲ್ಲಿ ಆರಂಭವಾಗಬೇಕು. ಇಲ್ಲವಾದಲ್ಲಿ ದಸರಾ ನಡೆಯಲು ಬಿಡುವುದಿಲ್ಲ ಎಂದು ತಿಳಿಸಿದರು. ಇದೇ ವೇಳೆ ನಿಖಿಲ್ ಸೋಲಿನ ಜವಾಬ್ದಾರಿಯನ್ನು ನಾನು ಹೊತ್ತುಕೊಂಡಿದ್ದೇನೆ ಎಂದು ಈಗಾಲೇ ಹೇಳಿದ್ದೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *