ಗುಜರಾತ್‍ನಲ್ಲಿ ಇಂದು ಮೊದಲ ಹಂತದ ಮತದಾನ – ತವರು ರಾಜ್ಯದಲ್ಲಿ ಮೋದಿ, ಶಾ ಜೋಡಿಗೆ ಅಗ್ನಿ ಪರೀಕ್ಷೆ

Public TV
3 Min Read

ಗಾಂಧಿನಗರ: ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭೆಗೆ (Gujarat Assembly Election) ಇಂದು ಮೊದಲ ಹಂತದ ಮತದಾನ ನಡೆಯಲಿದೆ. ಅಬ್ಬರದ ಪ್ರಚಾರದ ಬಳಿಕ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, 89 ಕ್ಷೇತ್ರಗಳಲ್ಲಿ 788 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮೋದಿ ತವರು ರಾಜ್ಯದಲ್ಲಿ ಈ ಬಾರಿ ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ತವರು ರಾಜ್ಯ ಗುಜರಾತ್‍ನ 19 ಜಿಲ್ಲೆಗಳ 89 ಸ್ಥಾನಗಳಿಗೆ ಮತದಾನ ನಡೆಯಲಿದೆ. ಗುಜರಾತ್‍ನ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‍ನ ವಿಧಾನಸಭಾ ಕ್ಷೇತ್ರಗಳ 14,382 ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಇದನ್ನೂ ಓದಿ: ಮತ್ತೆ ಪುಂಡಾಟ ಮೆರೆದ ಮರಾಠಿಗರು – ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ

ಕಚ್, ಸುರೇಂದ್ರನಗರ, ರಾಜ್‍ಕೋಟ್, ಮೊರ್ಬಿ, ಜಾಮ್‍ನಗರ್, ದ್ವಾರಕಾ, ಜುನಾಗಢ್, ಪೋರಬಂದರ್, ಅಮ್ರೇಲಿ, ಗಿರ್ ಸೋಮನಾಥ್, ಬೋಟಾಡ್, ಭಾವನಗರ, ಭರೂಚ್, ನರ್ಮದಾ, ಡ್ಯಾಂಗ್ಸ್, ತಾಪಿ, ಸೂರತ್, ನವಸಾರಿ ಮತ್ತು ವಲ್ಸಾದ್ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಸಾಂಪ್ರದಾಯಿಕವಾಗಿ ಎದುರಾಳಿಗಳಾದ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಜೊತೆಗೆ ಈ ಬಾರಿ ಆಪ್ (AAP) ಕೂಡಾ ಸೇರ್ಪಡೆಯಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆಪ್ ಸಿಎಂ ಅಭ್ಯರ್ಥಿ ಇಸುದಾನ್ ಗಡ್ವಿ, ಗುಜರಾತ್ ಮಾಜಿ ಸಿಎಂ ಪುರುಷೋತ್ತಮ ಸೋಲಂಕಿ, ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಮೊದಲ ಹಂತದಲ್ಲಿ ಅದೃಷ್ಟ ಪರೀಕ್ಷೆ ಎದುರಿಸಲಿದ್ದಾರೆ.

ಮೊದಲ ಹಂತದಲ್ಲಿ ಬಿಜೆಪಿ 9 ಕಾಂಗ್ರೆಸ್ 6 ಮತ್ತು ಎಎಪಿ ಐದು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೊದಲ ಹಂತದಲ್ಲಿ ಕಣದಲ್ಲಿರುವ ಒಟ್ಟು 788 ಅಭ್ಯರ್ಥಿಗಳಲ್ಲಿ 718 ಪುರುಷರು ಮತ್ತು 70 ಮಹಿಳೆಯರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಮೊದಲ ಹಂತದಲ್ಲಿ 57 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಭಾರತೀಯ ಬುಡಕಟ್ಟು ಪಕ್ಷದ 14 ಅಭ್ಯರ್ಥಿಗಳು, 339 ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್‌ ಸೇವನೆ ಆರೋಪ – NCB ಅಧಿಕಾರಿಗಳಿಂದ 3 ಯುವತಿಯರು ವಶಕ್ಕೆ

ಗುಜರಾತ್‍ನಲ್ಲಿ ಆಡಳಿತಾರೂಢ ಬಿಜೆಪಿಗೆ ಸುಮಾರು ಮೂರು ದಶಕಗಳ ಆಡಳಿತ ವಿರೋಧಿ ಅಲೆಯಿದೆ. ಈ ಮಧ್ಯೆ ಗುಜರಾತ್ ರಾಜಕೀಯದಲ್ಲಿ ಆಮ್ ಆದ್ಮಿ ಪಕ್ಷದ ತ್ವರಿತ ಬೆಳವಣಿಗೆ ಬಿಜೆಪಿಗೆ ದಿಗಿಲು ಹುಟ್ಟಿಸಿದೆ. ಪಂಜಾಬ್‍ನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಅಕಾಲಿಯಂತಹ ಹಳೆಯ ಪಕ್ಷಗಳು ಆಮ್ ಆದ್ಮಿಪಕ್ಷದ ಮುಂದೆ ಮಂಡಿಯೂರಿವೆ. ದೆಹಲಿ ಮತ್ತು ಪಂಜಾಬ್ ಮಾದರಿಯಲ್ಲಿ ಗುಜರಾತ್‍ನ ಜನರಿಗೆ ಅಗ್ಗದ ವಿದ್ಯುತ್ ಮತ್ತು ನೀರನ್ನು ನೀಡುವ ಭರವಸೆಯನ್ನು ನೀಡಿದೆ. ಕಳೆದ ಒಂದು ವರ್ಷದಿಂದ ಆಮ್ ಆದ್ಮಿ ಪಕ್ಷದ ಇಬ್ಬರು ನಾಯಕರಾದ ಕೇಜ್ರಿವಾಲ್ ಹಾಗೂ ಮನಿಶ್ ಸಿಸೋಡಿಯಾ ಗುಜರಾತ್‌ನಲ್ಲಿ ನಿರಂತರ ಪ್ರವಾಸ ಮಾಡಿದ್ದು, ಮೂರು ದಶಕದಿಂದ ಬಿಜೆಪಿ ಮಣಿಸಲು ಸಾಧ್ಯವಾಗದ ಕಾಂಗ್ರೆಸ್‍ಗೆ ಸೆಡ್ಡು ಹೊಡೆದಿದ್ದಾರೆ. ಬಿಜೆಪಿ ಸೋಲಿಸಲು ನಾವೇ ಸಮರ್ಥ ಎನ್ನುವ ಸಂದೇಶ ರವಾನಿಸಿದ್ದಾರೆ. ವಿರೋಧ ಪಕ್ಷವಾಗಿರುವ ಕಾಂಗ್ರೆಸ್‍ಗೂ ಇರುವ ವಿರೋಧಿ ಅಲೆಯನ್ನೇ ಎಎಪಿ ನಾಯಕರು ಹೊಸ ಅವಕಾಶ ಎನ್ನುವಂತೆ ಬಳಸಿಕೊಳ್ಳುತ್ತಿದ್ದಾರೆ.

ಆಮ್ ಆದ್ಮಿ ಪಕ್ಷವು ಇಲ್ಲಿಯವರೆಗೆ ಎರಡು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಆಮ್ ಆದ್ಮಿ ಪಕ್ಷ ಸಾಧಿಸಿರುವ ಎರಡು ಪ್ರಮುಖ ಯಶಸ್ಸುಗಳು ಕಾಂಗ್ರೆಸ್ ವಿರುದ್ಧವೇ ಆಗಿದೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸೋಲಿಸಿ ಅಧಿಕಾರ ಹಿಡಿದಿದೆ. ಈ ಎರಡು ರಾಜ್ಯಗಳಲ್ಲಿ ಬಿಜೆಪಿ ಬಹಳಷ್ಟು ದುರ್ಬಲವಾಗಿತ್ತು. ಆದರೆ ಗುಜರಾತ್‍ನಲ್ಲಿ ಎಎಪಿಗೆ ಸುಲಭವಾಗಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಬಿಜೆಪಿಯನ್ನು ಆಡಳಿತದಿಂದ ಕೆಳಗಿಳಿಸಿದ ಇತಿಹಾಸ ಆಮ್ ಆದ್ಮಿ ಪಕ್ಷಕ್ಕೆ ಇಲ್ಲ. ಅದಾಗ್ಯೂ ಆಪ್ ಈ ಪ್ರಯತ್ನದಲ್ಲಿದ್ದು, ಇಂದು ಗೆಲುವು ಯಾರತ್ತ ಎನ್ನುವುದಕ್ಕೆ ಸಣ್ಣ ಸುಳಿವು ಸಿಗಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *