ಹಾಸನ| ಅನಾರೋಗ್ಯದಿಂದ ಸಿಆರ್‌ಪಿಎಫ್‌ ಯೋಧ ಸಾವು – ವೈದ್ಯರ ನಿರ್ಲಕ್ಷ್ಯಕ್ಕೆ ಬಲಿ ಎಂದ ಕುಟುಂಬ

Public TV
1 Min Read

ಹಾಸನ: ಅನಾರೋಗ್ಯದಿಂದ ಸಿಆರ್‌ಪಿಎಫ್‌ ಯೋಧ (CRPF Soldier) ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ, ಹೊಳೆನರಸೀಪುರ (Holenarasipur) ಪಟ್ಟಣದಲ್ಲಿ ನಡೆದಿದೆ.

ರವಿಶಂಕರ್.ಎಂ.ಆರ್‌. (39) ಮೃತ ಯೋಧ. ವೈದ್ಯರ ನಿರ್ಲಕ್ಷ್ಯದಿಂದಲೇ ಯೋಧ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದ ಯೋಧ ರವಿಶಂಕರ್ ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿಯಿತ್ತು. ಅರಸೀಕೆರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಯೋಧನ ವರದಿ ಸಂಗ್ರಹ ಒಂದು ವಾರದ ಹಿಂದೆ ಹೊಳೆನರಸೀಪುರಕ್ಕೆ ರವಿಶಂಕರ್ ಬಂದಿದ್ದರು. ಇದನ್ನೂ ಓದಿ: ಅಸಭ್ಯ ವರ್ತನೆ, ಟಿವಿಗಾಗಿ ಕಿರಿಕಿರಿ – ದರ್ಶನ್‌ಗೆ ಜೈಲರ್ ವಾರ್ನಿಂಗ್

ಇಂದು ಕರ್ತವ್ಯಕ್ಕೆ ತೆರಳಬೇಕಿದ್ದ ರವಿಶಂಕರ್‌ ಅವರಿಗೆ ಶುಕ್ರವಾರ ಜ್ವರ, ಸುಸ್ತು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಗೆ (Hospital) ತೆರಳಿದ್ದು ವೈದ್ಯರು ಸರಿಯಾಗಿ ತಪಾಸಣೆ ಮಾಡದೇ ಕೇವಲ ಮಾತ್ರೆ ನೀಡಿ ಕಳುಹಿಸಿದ್ದರು.

ಮನೆಗೆ ತೆರಳುತ್ತಿದ್ದಂತೆ ಯೋಧ ರವಿಶಂಕರ್.ಎಂ.ಆರ್. ಸಾವನ್ನಪ್ಪಿದ್ದಾರೆ. ಸರಿಯಾದ ಚಿಕಿತ್ಸೆ ನೀಡದೇ ವೈದ್ಯರು ನಿರ್ಲಕ್ಷ್ಯ ತೋರಿದ್ದು, ರವಿಶಂಕರ್ ಸಾವಿಗೆ ವೈದ್ಯನೇ ನೇರ ಕಾರಣ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ.

ತಾಲ್ಲೂಕು ಆಸ್ಪತ್ರೆಯ ಶವಾಗಾರದಲ್ಲಿ ಮೃತ ಯೋಧನ ಶವವನ್ನು ಇರಿಸಲಾಗಿದೆ. ರವಿಶಂಕರ್ ಮೂಲತಃ ಸಾಲಿಗ್ರಾಮ ತಾಲ್ಲೂಕಿನ, ಮೂಡಲಬಿಡು ಗ್ರಾಮದವರಾಗಿದ್ದು ಪತ್ನಿ ನಂದಿನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಜನಸಂಖ್ಯೆ ಇಳಿಕೆ, ಆರ್ಥಿಕ ಸಂಕಷ್ಟ – ಚೀನಾದಲ್ಲಿ ನಿವೃತ್ತಿ ವಯಸ್ಸು ಏರಿಕೆ

ಆಸ್ಪತ್ರೆ ಬಳಿ ರವಿಶಂಕರ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article