ಸೇನೆಯ ನಾಯಿಯಿಂದ ಭೂಕುಸಿತದ ಅವಶೇಷಗಳಲ್ಲಿ ಸಿಲುಕಿದ್ದ ವ್ಯಕ್ತಿ ಪಾರು

Public TV
1 Min Read

ಶ್ರೀನಗರ: ಭೂಕುಸಿತದ ಅವಶೇಷಗಳಲ್ಲಿ ಸಿಕ್ಕು ರಾತ್ರಿಯಿಡೀ ಸಾವು ಬದುಕಿನ ಮಧ್ಯೆ ಹೋರಾಡಿದ್ದ ವ್ಯಕ್ತಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದಿದೆ.

ಲುಧ್ವಾಲ್ ಗ್ರಾಮದ ಮೂಲದ ಪ್ರದೀಪ್ ಕುಮಾರ್ ಸಾವನ್ನು ಗೆದ್ದಿದ್ದಾರೆ. ಮಂಗಳವಾರ ರಾತ್ರಿಯೇ ಪ್ರದೀಪ್ ಕುಮಾರ್ ಭೂಕುಸಿತದ ಅವಶೇಷಗಳಲ್ಲಿ ಸಿಲುಕಿದ್ದರು. ಸಿಆರ್‌ಪಿಎಫ್‌ನ 72 ಬೆಟಾಲಿಯನ್ ತಂಡವು ಪ್ರದೀಪ್ ಕುಮಾರ್ ಅವರನ್ನು ಬುಧವಾರ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ.

ಮೆಹಾದ್ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ಮಂಗಳವಾರ ರಾತ್ರಿ ಭೂಕುಸಿತ ಉಂಟಾಗಿತ್ತು. ಈ ವೇಳೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹೋಗುತ್ತಿದ್ದ ಪ್ರದೀಪ್ ಕುಮಾರ್ ಭೂಕುಸಿತದ ಅವಶೇಷಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಕತ್ತು ಹೊರತುಪಡಿಸಿದ ಪ್ರದೀಪ್ ಕುಮಾರ್ ಅವರ ಇಡೀ ದೇಹವು ಮಣ್ಣು ಹಾಗೂ ಕಲ್ಲಿನ ರಾಶಿಯಲ್ಲಿ ಸಿಕ್ಕಿಕೊಂಡಿತ್ತು. ರಾತ್ರಿ ಯಾರೂ ಸಹಾಯಕ್ಕೆ ಬಾರದೇ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು.

ಸಿಆರ್‌ಪಿಎಫ್‌ನ 72 ಬೆಟಾಲಿಯನ್ ತಂಡವು ಬುಧವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿತ್ತು. ಭೂಕುಸಿತ ಪ್ರದೇಶಕ್ಕೆ ಸಮೀಪವಿರುವ 147 ಮೈಲಿಗಲ್ಲು ತಲುಪಿದಾಗ, ಸಿಆರ್ ಪಿಎಫ್‍ನ ನಾಯಿ ಅಜಾಕ್ಸಿ ಭೂಕುಸಿತದ ಅವಶೇಷಗಳಲ್ಲಿ ಯಾರೋ ಸಿಕ್ಕಿಕೊಂಡಿದ್ದಾರೆ ಎನ್ನುವ ಸೂಚನೆ ನೀಡಿತ್ತು. ತಕ್ಷಣವೇ ಯೋಧರು ಶೋಧ ಕಾರ್ಯ ಆರಂಭಿಸಿ ಪ್ರದೀಪ್ ಅವರನ್ನು ಪತ್ತೆ ಹಚ್ಚಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಪ್ರದೀಪ್ ಕುಮಾರ್ ಸುತ್ತಲಿನ ಮಣ್ಣು, ಕಲ್ಲುಗಳನ್ನು ಅಗೆದು ರಕ್ಷಣೆ ಮಾಡಿದ್ದಾರೆ. ಪ್ರದೀಪ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಆರ್ ಪಿಎಫ್‍ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *