ಅಡ್ಡ ಮತದಾನ: ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರಿಗೆ JDS ನಿರ್ಧಾರ

Public TV
1 Min Read

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಜೆಡಿಎಸ್ ಶಾಸಕರು ಮತ್ತು ಅಡ್ಡ ಮತದಾನ ಮಾಡಿಸಿದ ಕಾಂಗ್ರೆಸ್, ಬಿಜೆಪಿ ಪಕ್ಷದ ವಿರುದ್ಧ ಜೆಡಿಎಸ್ ಪಕ್ಷದ ಸದಸ್ಯರು ಇಂದು ಪ್ರತಿಭಟನೆ ನಡೆಸಿದರು.

ಫ್ರೀಡಂ ಪಾರ್ಕ್‍ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತು ಪರಾಜಿತ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ವೇಳೆ 420 ಶ್ರೀನಿವಾಸರು ಅಂತ ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು. ಚಪ್ಪಲಿ ತೋರಿಸಿ ಕಿಡಿಕಾರಿದರು. ಇದೇ ವೇಳೆ ಇಬ್ಬರು ಶಾಸಕರನ್ನು ಉಚ್ಚಾಟನೆ ಮಾಡಲು ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್‌ಗೆ ದೂರು ನೀಡಲು ಜೆಡಿಎಸ್ ನಿರ್ಧಾರ ಮಾಡಿತು. ಇದನ್ನೂ ಓದಿ:  ಕೋವಿಡ್ ಸಮಸ್ಯೆ – ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು 

ಪ್ರತಿಭಟನೆಯಲ್ಲಿ ಮಾತನಾಡಿದ ಇಬ್ರಾಹಿಂ, ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಮತ ಹಾಕಿಸಿದ್ದಾರೆ. ತಾಕತ್ ಇದ್ದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸುರ್ಜೆವಾಲ ಇಬ್ಬರನ್ನು ಕಿತ್ತು ಹಾಕಿ ಎಂದು ಸವಾಲ್ ಹಾಕಿದರು.

ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಡೀಲ್ ಮಾಡಿಕೊಂಡು ಕನ್ನಡಿಗರನ್ನು ಸೋಲಿಸಿದ್ದಾರೆ. ನಿಮಗೆ ಮಾನ ಮರ್ಯಾದೆ ಇದೆಯಾ. ನೀವು ಪತಿವ್ರತೆಯರಾ ಎಂದು ವ್ಯಂಗ್ಯವಾಡಿದರು.

ಪರಾಜಿತ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮಾತನಾಡಿ, ಕಾಂಗ್ರೆಸ್‍ನಿಂದಲೇ ಕಾಂಗ್ರೆಸ್ ದೇಶದಲ್ಲಿ ಮುಕ್ತವಾಗ್ತಿದೆ. ನನ್ನ ಸೋಲಿಗೆ ಸಿದ್ದರಾಮಯ್ಯ ಕಾರಣ. ಮನವಿ ಮಾಡಿದರು ಕಾಂಗ್ರೆಸ್ ನಾಯಕರು ಎರಡನೇ ಪ್ರಾಶಸ್ತ್ಯ ಮತಗಳನ್ನು ಕೊಟ್ಟಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಖಾಸಗಿ ಶಾಲಾ-ಕಾಲೇಜುಗಳಿಗೆ ನಮ್ಮ ಶಾಲೆಗಳು ಸ್ಪರ್ಧಿಸುವಂತೆ ಕೆಲಸ ಮಾಡುತ್ತೇವೆ: ಶ್ರೀರಾಮುಲು 

ಪರಿಷತ್ ಸದಸ್ಯ ಶರವಣ ಮಾತನಾಡಿ, ಸಿದ್ದರಾಮಯ್ಯ ಡೀಲ್ ರಾಜ, ಡೀಲ್ ರಾಮಯ್ಯ. ಸಿದ್ದರಾಮಯ್ಯ ಸುಳ್ಳು ರಾಮಯ್ಯ. ಮಾತಾಡೋದು ಆಚಾರ ಮಾಡೋದು ಬದನೆಕಾಯಿ. ಈಗ ಬಿಜೆಪಿ ಬಿ ಟೀಂ ಸಿದ್ದರಾಮಯ್ಯ ಅಂತ ಗೊತ್ತಾಗಿದೆ. ಎಷ್ಟು ಸೂಟ್ ಕೇಸ್ ಸಿದ್ದರಾಮಯ್ಯ ಅವರಿಗೆ ಬಂದಿದೆ ಹೇಳಬೇಕು. ಜಾತ್ಯತೀತ ಪಕ್ಷ ಎಂದು ಕಾಂಗ್ರೆಸ್‍ಗೆ ಹೇಳೋಕೆ ನೈತಿಕತೆ ಇಲ್ಲ ಆಕ್ರೋಶ ಹೊರಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *