ನೀರು ಕುಡಿಯಲೆಂದು ಇಳಿದ ಎಮ್ಮೆಯ ಕಾಲನ್ನೇ ಕಿತ್ತ ಮೊಸಳೆ!

Public TV
1 Min Read

ರಾಯಚೂರು: ಕೃಷ್ಣಾ ನದಿಯಲ್ಲಿ ನೀರು ಕುಡಿಯಲು ಇಳಿದ ಎಮ್ಮೆಯ ಮೇಲೆ ಮೊಸಳೆ ದಾಳಿ ಮಾಡಿ ಒಂದು ಕಾಲನ್ನೇ ಕಿತ್ತುಕೊಂಡಿರುವ ಹೃದಯವಿದ್ರಾವಕ ಘಟನೆ ರಾಯಚೂರಿನ ದೇವಸುಗೂರು ಬಳಿ ನಡೆದಿದೆ.

ದೇವಸುಗೂರು ಗ್ರಾಮದ ಶೀನಪ್ಪ ಎಂಬವರ ಎಮ್ಮೆ, ಮೊಸಳೆ ದಾಳಿಯಿಂದ ಕಾಲು ಕಳೆದುಕೊಂಡಿದೆ. ಆರ್ ಟಿಪಿಎಸ್‍ಗಾಗಿ ಸಂಗ್ರಹಿಸಿರುವ ನೀರನ್ನು ದೇವಸುಗೂರು ಗ್ರಾಮಕ್ಕೆ ಕುಡಿಯಲು ಬಿಡಲಾಗುತ್ತದೆ. ಆ ನೀರಿನಲ್ಲಿ ಸೇರಿಕೊಂಡಿರುವ ಬೃಹದಾಕಾರದ ಮೊಸಳೆ ಎಮ್ಮೆಯ ಮೇಲೆ ದಾಳಿ ಮಾಡಿದೆ.

ಎಮ್ಮೆ ಮೇಲೆ ಮೊಸಳೆ ದಾಳಿ ಮಾಡುತ್ತಿರುವ ದೃಶ್ಯವನ್ನು ದನಗಾಯಿಗಳು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಎಮ್ಮೆಯ ನರಳಾಟ ಮನಕಲಕುವಂತಿದೆ. ಕೃಷ್ಣಾ ನದಿಯಲ್ಲಿ ಸಾಕಷ್ಟು ಮೊಸಳೆಗಳು ಮೊದಲಿನಿಂದಲೂ ಇದ್ದರೂ, ಬೇಸಿಗೆ ಸಮಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ.

ಪ್ರಾಣ ಉಳಿಸಿಕೊಳ್ಳಲು ಎಮ್ಮೆ ನದಿ ದಡಕ್ಕೆ ಓಡಿ ಬಂದು ಉಳಿದ ಎಮ್ಮೆಗಳ ಜೊತೆ ಸೇರಿಕೊಳ್ಳುವ ದೃಶ್ಯ ಹೃದಯ ಹಿಂಡುವಂತಿದೆ. ಘಟನೆ ಬಳಿಕ ದನಗಾಯಿಗಳು ನದಿ ಹತ್ತಿರ ಜಾನುವಾರುಗಳನ್ನ ಕರೆದೊಯ್ಯಲು ಹೆದರುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *