ಡ್ಯಾಮ್ ಒಡೆಯಲು ಏಡಿಗಳೇ ಕಾರಣವೆಂದಿದ್ದ ಸಚಿವರ ಮನೆ ಮುಂದೆ ಏಡಿ ಸುರಿದು ಪ್ರತಿಭಟನೆ

Public TV
2 Min Read

ಮುಂಬೈ: ಭಾರೀ ಮಳೆಗೆ ಮಹಾರಾಷ್ಟ್ರದ ರತ್ನಗಿರಿಯ ಕಿರು ಅಣೆಕಟ್ಟು ಒಡೆದ ಘಟನೆಗೆ ಏಡಿಗಳೇ ಕಾರಣವೆಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದ ಅಲ್ಲಿನ ಜಲಸಂಪನ್ಮೂಲ ಸಚಿವ ತಾನಾಜಿ ಸಾವಂತ್ ಅವರ ಮನೆ ಮುಂದೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‍ಸಿಪಿ) ಕಾರ್ಯಕರ್ತರು ಏಡಿ ಸುರಿದು ಪ್ರತಿಭಟನೆ ನಡೆಸಿದ್ದಾರೆ.

ಡ್ಯಾಮ್ ಒಡೆದು ಸುಮಾರು 19 ಮಂದಿಯನ್ನು ಬಲಿಯಾಗಿ, 25ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಆದರೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಬದಲು ಉಡಾಫೆಯಿಂದ ಉತ್ತರಿಸಿದ ಸಚಿವರಿಗೆ ಉತ್ತರ ನೀಡಲು ಎನ್‍ಸಿಪಿ ಕಾರ್ಯಕರ್ತರು ನೂರಾರು ಜೀವಂತ ಏಡಿಗಳನ್ನೇ ಹಿಡಿದು ಚೀಲ, ಬಾಕ್ಸ್ ಗಳಲ್ಲಿ ತುಂಬಿಕೊಂಡು ಕಾರ್ಯಕರ್ತರು ತುಂಬಿಕೊಂಡು ಬಂದಿದ್ದರು. ಬಳಿಕ ಆ ಏಡಿಗಳನ್ನು ಸಾವಂತ್ ಅವರ ಮನೆಯ ಎದುರು ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಜುಲೈ 2ರಂದು ಟಿವ್ರೆ ಕಿಂಡಿ ಡ್ಯಾಮ್ ಒಡೆದು ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. ಡ್ಯಾಮ್ ಸುತ್ತಮುತ್ತಲ ಗ್ರಾಮದಲ್ಲಿ ಹಲವು ಮನೆಗಳು ನೀರಿನಲ್ಲಿ ತೇಲಿ ಹೋಗಿದ್ದವು. ಅಲ್ಲದೆ 19 ಮಂದಿ ಜೀವ ಕಳೆದುಕೊಂಡಿದ್ದರು. ಈ ಘಟನೆ ನಡೆಯುವ ಮುಂಚೆಯೇ ಅಣೆಕಟ್ಟೆ ಬಿರುಕು ಬಿಟ್ಟಿತ್ತು. ಈ ಬಗ್ಗೆ ನಾವು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೆವು. ಈ ಸ್ಥಿತಿ ಬರುವ ಮುಂಚೆಯೇ ಅಣೆಕಟ್ಟಿನ ದುರಸ್ಥಿ ಕಾರ್ಯ ಮಾಡಿದ್ದರೆ ಹಲವು ಜೀವಗಳು ಉಳಿಯುತ್ತಿದ್ದವು ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಮಹಾರಾಷ್ಟ್ರ ಸಿಎಂ ತನಿಖೆ ನಡೆಸಲು ಆದೇಶಿಸಿದ್ದು, ಅಣೆಕಟ್ಟಿನ ಬಗ್ಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾವುದು. ಜಿಲ್ಲಾಡಳಿತವನ್ನು ಸಂಪರ್ಕಿಸಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಹಾಗೂ ಜನರ ಸುರಕ್ಷತೆ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದಿದ್ದರು. ಆದರೆ ಈ ನಡುವೆ ಸ್ಥಳಕ್ಕೆ ಪರಿಶೀಲನೆಗೆ ಬಂದಿದ್ದ ಸಚಿವ ಸಾವಂತ್, ಡ್ಯಾಮ್‍ನಲ್ಲಿ ಏಡಿಗಳು ಇರುವುದೇ ಈ ಅನಾಹುತಕ್ಕೆ ಕಾರಣ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

ಆ ನಂತರ ಕಳೆದ ವಾರ ಎನ್‍ಸಿಪಿ ನಾಯಕ ಜಿತೇಂದ್ರ ಅವಾದ್ ಅವರು ಏಡಿಯೊಂದನ್ನು ಕೈಯಲ್ಲಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ಹೋಗಿ, ಇದನ್ನು ಬಂಧಿಸಿ ಎಂದಿದ್ದರು. ಅಲ್ಲದೆ ರಾಜ್ಯದಲ್ಲಿ ನಾಚಿಕೆಯಿಲ್ಲದ ಬಿಜೆಪಿ ನೇತೃತ್ವದ ಸರ್ಕಾರ ಇದೆ. ಸಚಿವ ಸಾವಂತ್ ಡ್ಯಾಮ್ ಗುತ್ತಿಗೆದಾರರನ್ನು ರಕ್ಷಿಸಲು ಈ ರೀತಿ ಉಡಾಫೆ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.

ಇನ್ನೊಂದೆಡೆ ಕೊಲ್ಲಾಪುರದಲ್ಲಿ ಎನ್‍ಸಿಪಿ ಯುವ ಘಟಕದ ನಾಯಕ, ಏಡಿಗಳ ಮೇಲೆ ಕೊಲೆ ದೂರು ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *