ಕಟುಕರು ಮುಂಗಾಲುಗಳನ್ನು ಕಡಿದ್ರೂ ಕರುವಿಗೆ ಜನ್ಮ ನೀಡಿ ಪ್ರಾಣತೆತ್ತ ಗೋಮಾತೆ!

Public TV
1 Min Read

– ಮಂಗಳೂರಿನಲ್ಲೊಂದು ಮನಕಲಕುವ ಘಟನೆ

ಮಂಗಳೂರು: ತಾಯಿ ಪ್ರೀತಿಗೆ ಎಂದೂ ಬೆಲೆ ಕಟ್ಟಲು ಸಾಧ್ಯ ಇಲ್ಲ ಅನ್ನುವುದಕ್ಕೆ ಈ ಗೋವಿನ ಕಥೆಯೇ ನಿದರ್ಶನ. ತಾನು ಸತ್ತರೂ ತನ್ನ ಹೊಟ್ಟೆಯಲ್ಲಿರುವ ಕಂದಮ್ಮ ಸಾಯಬಾರದೆಂದು ಕರುವಿಗೆ ಜನ್ಮ ನೀಡಿದೆ.

ಆಗ ಅದು ಆರು ತಿಂಗಳ ಗರ್ಭಿಣಿಯಾಗಿದ್ದ ಗೋವು. ತನ್ನ ಪಾಡಿಗೆ ಅಡ್ಡಾಡುತ್ತ, ಕಂದನ ಆಗಮನದ ನಿರೀಕ್ಷೆಯಲ್ಲಿರುವಾಗಲೇ ಕಟುಕರು ರಾತ್ರೋರಾತ್ರಿ ಹೊತ್ತೊಯ್ದಿದ್ದರು. ಅಲ್ಲದೆ ವಾಹನಕ್ಕೆ ತುಂಬುವಾಗಲೇ ಗೋವಿನ ಎರಡು ಕಾಲನ್ನು ಕಡಿದು ಹಾಕಿದ್ದರು. ಆದರೆ ತಾನು ಸತ್ತರೂ ತನ್ನ ಹೊಟ್ಟೆಯಲ್ಲಿರುವ ಕಂದಮ್ಮ ಸಾಯಬಾರದೆಂದು ಆಕೆ ಕಳ್ಳರ ಕೈಯಿಂದ ಬಿಡಿಸಿ ವಾಹನದಿಂದ ಹೊರಕ್ಕೆ ನೆಗೆದು ಪ್ರಾಣ ಕಾಪಾಡಿಕೊಂಡಿದ್ದಳು ಗೋಮಾತೆ.

ಹೀಗೆ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋವನ್ನು ಮಂಗಳೂರಿನ ಶಕ್ತಿನಗರದ ಆನಿಮಲ್ ಕೇರ್ ಟ್ರಸ್ಟ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ತನ್ನ ಮುಂಗಾಲುಗಳನ್ನು ಕಳೆದುಕೊಂಡ ಗೋಮಾತೆ ಮತ್ತೆ ಮೂರು ತಿಂಗಳು ನಿಲ್ಲಲೂ ಆಗದೆ, ಮಲಗಲೂ ಆಗದೆ ಕಷ್ಟ ಪಟ್ಟು ಕೊನೆಗೂ ಗಂಡು ಕರುವಿಗೆ ಜನ್ಮ ನೀಡಿದ್ದಾಳೆ. ದುರಂತ ಏನಂದರೆ ತಾನು ಸತ್ತು ಕರುವನ್ನು ಬದುಕಿಸಿದ ಆ ಗೋವು ಕರುವಿಗೆ ಜನ್ಮ ನೀಡಿದ ಹತ್ತೇ ದಿನದಲ್ಲಿ ಸಾವನ್ನಪ್ಪಿದೆ. ಹೀಗಾಗಿ ಹತ್ತು ದಿನದಲ್ಲಿ ಕರು ತಬ್ಬಲಿಯಾಗಿದೆ.

ಈ ಪುಣ್ಯಕೋಟಿಗೆ ಟ್ರಸ್ಟ್ ಸಿಬ್ಬಂದಿ ರಾಧೆ ಎಂದು ಹೆಸರಿಟ್ಟಿದ್ದರೆ. ತಬ್ಬಲಿ ಗಂಡು ಕರುವಿಗೆ ಚೋಟಾ ಭೀಮ್ ಎಂದು ಹೆಸರಿಟ್ಟಿದ್ದಾರೆ. ಚೋಟಾ ಭೀಮ್ ಈಗ ತಾಯಿ ಇಲ್ಲದ ತಬ್ಬಲಿಯಾಗಿದ್ದು, ಟ್ರಸ್ಟ್ ಸಿಬ್ಬಂದಿ ಬಾಟಲಿ ಹಾಲುಣಿಸಿ ಸಾಕುತ್ತಿದ್ದಾರೆ. ತನ್ನ ಮಗುವನ್ನು ಉಳಿಸಲು ಮೂರು ತಿಂಗಳು ಸಾವು ಬದುಕಿನ ನಡುವೆ ಹೋರಾಡಿ ಕರು ಜನನವಾದ ಕೂಡಲೇ ಮರಣ ಹೊಂದಿದ ರಾಧೆಯ ತಾಯಿ ಪ್ರೇಮಕ್ಕೆ ಟ್ರಸ್ಟ್ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *