ಮರಳು ಫಿಲ್ಟರ್ ಗುಂಡಿಗೆ ಬಿದ್ದ ಹಸು – ಕೊನೆಗೆ ಜೆಸಿಬಿಯಿಂದ ಮೇಲಕ್ಕೆ ಎತ್ತಿದ್ರು

Public TV
1 Min Read

– ಸತತ ನಾಲ್ಕು ಗಂಟೆಗಳ ಜೆಸಿಬಿ ಕಾರ್ಯಾಚರಣೆ

ರಾಮನಗರ: ಆಹಾರ ಅರಸಿ ಬಂದ ಹಸುವೊಂದು ಮರಳು ಫಿಲ್ಟರ್ ಗಾಗಿ ನಿರ್ಮಿಸಿದ್ದ ಗುಂಡಿಗೆ ಬಿದ್ದು, ಹೊರಬರಲಾರದೆ ಪರದಾಡಿದೆ.

ರಾಮನಗರ ತಾಲೂಕಿನ ಬಿಡದಿ ಸಮೀಪದ ಬಿ ಬನ್ನಿಕುಪ್ಪೆ ಬಳಿ ಘಟನೆ ನಡೆದಿದ್ದು, ಬಿಡದಿ ಸಮೀಪದ ಕುರುಬರ ಕರೇನಹಳ್ಳಿ ಗ್ರಾಮದ ಪುಟ್ಟರಾಜು ಎಂಬುವವರ ಹಸು ಮರಳು ಫಿಲ್ಟರ್ ಗುಂಡಿಗೆ ಬಿದ್ದು ಒದ್ದಾಡಿದೆ.

ಸೋಮವಾರ ಹಸು ಮೇಯಿಸಲು ಹೊಡೆದುಕೊಂಡು ಹೋಗಿದ್ದ ವೇಳೆ ಆಹಾರ ಹುಡುಕುತ್ತ ಸಾಗಿ ಕೆಸರು ತುಂಬಿದ್ದ ಮರಳು ಹೊಂಡದಲ್ಲಿ ಬಿದ್ದಿದೆ. ಬಿದ್ದ ನಂತರ ಹೊರಗೆ ಬರಲಾಗದೇ ಕೆಸರಿನಲ್ಲೇ ಒದ್ದಾಡಿದೆ. ಮೇಯುತ್ತಿದ್ದ ಹಸು ಇಷ್ಟೊತ್ತಾದರೂ ಕಾಣುತ್ತಿಲ್ಲವಲ್ಲ ಎಂದು ಮಾಲೀಕ ಪುಟ್ಟರಾಜು ಹಸು ಹುಡುಕಿದ್ದಾರೆ.

ಈ ವೇಳೆ ಕೆಸರಿನ ಹೊಂಡದಲ್ಲಿ ಹಸು ಬಿದ್ದಿರುವುದು ಕಂಡು ಬಂದಿದೆ. ನಂತರ ಸ್ಥಳೀಯರ ಸಹಾಯದಿಂದ ಹೊರಗೆ ಎಳೆಯಲು ಪ್ರಯತ್ನಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ನಂತರ ಸ್ಥಳಕ್ಕೆ ಜೆಸಿಬಿಯನ್ನು ಕರೆಸಿ ಹಸುವಿಗೆ ಹಗ್ಗ, ಟೇಪ್ ಹಗ್ಗ ಕಟ್ಟಿ ಮೇಲೆತ್ತಿದ್ದಾರೆ. ಸತತ ನಾಲ್ಕು ಗಂಟೆಗಳ ಕಾಲ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಹಸುವನ್ನು ಹೊರಗೆ ಕರೆತಂದಿದ್ದಾರೆ.

ಮರಳಿನ ಗುಂಡಿಯಲ್ಲಿ ಪೂರ್ತಿ ಕೆಸರು ತುಂಬಿದ್ದರಿಂದ ಹಸು ಮೇಲೇಳಲು ಸಾಧ್ಯವಾಗಿಲ್ಲ. ಅಲ್ಲದೆ ಹಗ್ಗ ಕಟ್ಟಿ ಎಳೆದರೂ ಸಹ ಹಸುವಿಗೆ ಕಾಲೂರಲು ಸಾಧ್ಯವಾಗಿಲ್ಲ. ಕೆಸರು ಹೆಚ್ಚಿದ್ದಿದ್ದರಿಂದ ಕಾಲು ಜಾರುತಿತ್ತು. ಗುಂಡಿ ಸುತ್ತಲೂ ಹೆಚ್ಚು ಕೆಸರು ತುಂಬಿದ್ದರಿಂದ ಸ್ಥಳೀಯರು ಹಗ್ಗ ಕಟ್ಟಿ ಎಳೆಯಲು ಸಹ ಸಾಧ್ಯವಾಗಿಲ್ಲ. ಹೀಗಾಗಿ ಜೆಸಿಬಿ ಮೂಲಕ ಹಸುವನ್ನು ಮೇಲೆತ್ತಲಾಗಿದೆ. ಜೆಸಿಬಿ ಸಹ ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿದ್ದು, ನಂತರ ಹಸುವನ್ನು ಮೇಲೆತ್ತಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *