4 ವರ್ಷದ ಪ್ರೀತಿ, ಒಂದೂವರೆ ತಿಂಗಳು ವರನ ಮನೆಯಲ್ಲೇ ಕ್ವಾರಂಟೈನ್, ಬಳಿಕ ಮದುವೆ!

Public TV
2 Min Read

ಕೋಝಿಕ್ಕೋಡ್: ಮದುವೆ ಮಾಡಿಕೊಳ್ಳಲು ವರನ ಊರಿಗೆ ಬಂದ ವಧು ಹಾಗೂ ಆಕೆಯ ಸಂಬಂಧಿಕರು ವರನ ಮನೆಯಲ್ಲೇ ಒಂದೂವರೆ ತಿಂಗಳ ಕಾಲ ಕ್ವಾರಂಟೈನ್‍ಗೆ ಒಳಗಾಗಿ, ಕೊನೆಗೂ ಮದುವೆಯಾಗಿದ್ದಾರೆ. ಈ ವಿಚಿತ್ರ ಸನ್ನಿವೇಶಕ್ಕೆ ಕೇರಳ ಸಾಕ್ಷಿಯಾಗಿದೆ. ಕಳೆದ ಶುಕ್ರವಾರ ಈ ಮದುವೆ ಕೇರಳ ಸರ್ಕಾರದ ಕೋವಿಡ್-19 ನಿಯಮಾವಳಿಗಳ ಪ್ರಕಾರವೇ ನೆರವೇರಿದೆ.

ಕುಂಡುಪರಂಬ್ ಉಜ್ವಲ್ ಕೃಷ್ಣ ನಿವಾಸದ ರಾಜನ್ ಪುತ್ತನ್‍ಪುರ – ಅನಿತಾ ರಾಜನ್ ಎಂಬವರ ಪುತ್ರ ಉಜ್ವಲ್ ರಾಜ್ ಹಾಗೂ ಮುಂಬೈ ನಿವಾಸಿ ಹೇತಲ್ ಮೋದಿ ವಿವಾಹ ಶುಕ್ರವಾರ ಸರಳವಾಗಿ ನಡೆಯಿತು.

ಲವ್, ಕ್ವಾರಂಟೈನ್, ಮದುವೆ!: ಇವರಿಬ್ಬರೂ 4 ವರ್ಷದಿಂದ ಪ್ರೀತಿಸುತ್ತಿದ್ದರು. ಆಸ್ಟ್ರೇಲಿಯಾದ ಖಾಸಗಿ ಕಂಪೆನಿಯೊಂದರಲ್ಲಿ ಉಜ್ವಲ್ ಕೆಲಸ ಮಾಡುತ್ತಿದ್ದರೆ, ವಧು ಮುಂಬೈನ ಖಾಸಗಿ ಕಂಪೆನಿಯಲ್ಲಿ ಐಟಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಳೆ. 2015-16ರಲ್ಲಿ ಲಂಡನ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಇವರಿಬ್ಬರಿಗೂ ಲವ್ ಆಗಿದೆ.

ಈ ಹಿಂದೆಯೇ ನಿಗದಿಯಾಗಿರುವಂತೆ ಏಪ್ರಿಲ್ 5ರಂದು ಹಿಲ್ ಟಾಪ್ ಆಡಿಟೋರಿಯಂನಲ್ಲಿ ವಿವಾಹ ನಡೆಯಬೇಕಿತ್ತು. ಜೊತೆಗೆ 1 ಸಾವಿರಕ್ಕೂ ಹೆಚ್ಚು ಜನರಿಗೆ ಆಹ್ವಾನವೂ ಹೋಗಿತ್ತು. ಮದುವೆಗೆ ಇನ್ನೇನು ಒಂದು ವಾರ ಬಾಕಿ ಇರುವಾಗ ಆಸ್ಟ್ರೇಲಿಯಾದಿಂದ ಕೇರಳಕ್ಕೆ ಬರಲು ಉಜ್ವಲ್ ಪ್ಲ್ಯಾನ್ ಮಾಡಿದ್ದರು. ಹೀಗಿದ್ದಾಗಲೇ ಕೇರಳದಲ್ಲಿ ಕೊರೋನಾ ಸೋಂಕು ವ್ಯಾಪಿಸಲು ಆರಂಭವಾಗಿತ್ತು. ಹೀಗಾಗಿ ಊರಿಗೆ ಬಂದರೆ ಕ್ವಾರಂಟೈನ್‍ನಲ್ಲಿರಲೇಬೇಕು ಎನ್ನುವುದನ್ನು ಮನಗಂಡು ಮಾರ್ಚ್ 17ಕ್ಕೇ ಉಜ್ವಲ್ ಕೇರಳದಲ್ಲಿರೋ ತಮ್ಮ ಮನೆ ಸೇರಿದ್ರು. ನಿಯಮಗಳ ಪ್ರಕಾರ ಈ ಮಾಹಿತಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿ ಹೋಮ್ ಕ್ವಾರಂಟೈನ್ ಶುರುವಾಯ್ತು.

ವಧುವಿಗೆ ವರನ ಮನೆಯಲ್ಲೇ ಕ್ವಾರಂಟೈನ್!: ಇದೇ ವೇಳೆ ಮುಂಬೈಯಿಂದ ಬರುವ ವಧು ಕೂಡಾ 14 ದಿನ ಕ್ವಾರಂಟೈನ್‍ಗೆ ಒಳಗಾಗಲೇಬೇಕು ಬೇಕು ಎಂದು ಅಧಿಕಾರಿಗಳು ಹೇಳಿದ್ರು. ಹೀಗಾಗಿ ಮದುವೆಗೆ ಹಿಂದಿನ ದಿನ ಕ್ವಾರಂಟೈನ್ ಮುಗಿಯೋ ರೀತಿಯಲ್ಲಿ ಹೇತಲ್ ಮೋದಿ ಹಾಗೂ ತಾಯಿ ಚೇತನಾ ತಮ್ಮ ಪ್ರಯಾಣ ಬದಲಾಯಿಸಿದರು. ಅದರಂತೆ ಮಾರ್ಚ್ 23ರಂದು ಹೇತಲ್ ಮೋದಿ ಹಾಗೂ ಆಕೆಯ ತಾಯಿ ಚೇತನಾ ಮೋದಿ ಕೋಝಿಕ್ಕೋಡ್‍ಗೆ ತಲುಪಿದರು. ಇವರು ಕೂಡಾ ಉಜ್ವಲ್ ಮನೆಯಲ್ಲಿಯೇ ಕ್ವಾರಂಟೈನ್ ವಾಸಕ್ಕೊಳಗಾದರು. ಆದರೆ ಮಾರ್ಚ್ 24ರಂದು ದೇಶಾದ್ಯಂತ ಕೇಂದ್ರದ ಮೋದಿ ನೇತೃತ್ವದ ಸರ್ಕಾರದಿಂದ ಲಾಕ್‍ಡೌನ್ ಘೋಷಣೆಯಾಯಿತು.

ಕ್ವಾರಂಟೈನ್‍ನಲ್ಲಿದ್ದ ಎಲ್ಲಾ ದಿನಗಳಲ್ಲೂ ಕೇರಳದ ಅಧಿಕಾರಿಗಳು ಫೋನ್ ಮಾಡಿ ಇವರ ಯೋಗ ಕ್ಷೇಮ ವಿಚಾರಿಸುತ್ತಿದ್ದರು. ಈ ನಡುವೆಯೇ ವಿದೇಶದಿಂದ ಬಂದವರು 14 ದಿನಗಳ ಬದಲು 28 ದಿನಗಳ ಕಡ್ಡಾಯ ಕ್ವಾರಂಟೈನ್‍ನಲ್ಲಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿತು. ಅದರಂತೆ 28 ದಿನಗಳ ಕ್ವಾರಂಟೈನ್ ಕೂಡಾ ಮುಗಿಯಿತು. ಈ ವೇಳೆಗಾಗಲೇ ಲಾಕ್‍ಡೌನ್ ಸಡಿಲಿಕೆ ಶುರುವಾಗಿತ್ತು. ಇನ್ನು ಮದುವೆ ವಿಳಂಬ ಮಾಡೋದು ಬೇಡ ಎಂದು ಕೇವಲ 15 ಜನರ ಸಮ್ಮುಖದಲ್ಲಿ ಉಜ್ವಲ್ – ಹೇತಲ್ ಮೋದಿ ಮದ್ವೆಯಾದರು.

ಲಾಕ್‍ಡೌನ್ ಕಾಲದಲ್ಲಿ ಕೇರಳದ ಆಹಾರ ವಧು ಹಾಗೂ ಆಕೆಯ ಅಮ್ಮನಿಗೆ ಇಷ್ಟದ ಖಾದ್ಯಗಳಾಗಿ ಬದಲಾಯಿತು. ಹಲಸಿನ ಕಾಯಿ ಹಾಗೂ ಹಲಸಿನ ಹಣ್ಣಿನಿಂದ ಮಾಡಿದ ತಿಂಡಿಗಳು, ಮರಗೆಣಸಿನ ತಿನಿಸುಗಳು ಇವರಿಗೆ ಪ್ರಿಯವಾದವು.

ಮದುವೆಗೂ ಮುಂಚೆ ಉತ್ತರಭಾರತ ಶೈಲಿಯಲ್ಲಿ ಅರಿಶಿಣ, ಮದರಂಗಿ ಶಾಸ್ತ್ರವೂ ನಡೆಯಿತು. ಇದರಲ್ಲಿ ಕೇವಲ 6 ಮಂದಿ ಮಾತ್ರ ಭಾಗವಹಿಸಿದ್ದರು. ಮದುವೆಗೆ ಬರಲು ಸಾಧ್ಯವಾಗದವರಿಗೆ ಝೂಮ್ ಲಿಂಕ್ ಐಡಿ ಹಾಗೂ ಪಾಸ್ ವರ್ಡ್ ನೀಡಿ ಅವರಿದ್ದಲ್ಲೇ ಮದುವೆ ನೋಡುವ ವ್ಯವಸ್ಥೆಯನ್ನೂ ಉಜ್ವಲ್ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *