ವಿದೇಶಕ್ಕೆ ಶೂಟಿಂಗ್‌ಗೆ ತೆರಳಲು ಅನುಮತಿ ಕೋರಿ ದರ್ಶನ್ ಅರ್ಜಿ – ಮೇ 30ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

By
1 Min Read

ಬೆಂಗಳೂರು: ಸಿನಿಮಾ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ಅನುಮತಿ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಆದೇಶವನ್ನು ಕೋರ್ಟ್ ಮೇ 30 ಕ್ಕೆ ಕಾಯ್ದಿರಿಸಿದೆ.

ಇಂದು ಅರ್ಜಿ ವಿಚಾರಣೆ ನಡೆಸಿದ 64ನೇ ಸಿಸಿಎಚ್ ಕೋರ್ಟ್ ವಾದ-ಪ್ರತಿವಾದ ಆಲಿಸಿ ಮೇ 30ಕ್ಕೆ ಆದೇಶ ಕಾಯ್ದಿರಿಸಿದೆ. ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ದುಬೈ ಮತ್ತು ಯೂರೋಪ್‌ಗೆ ತೆರಳಲು ಜೂನ್ 1ರಿಂದ ಜೂನ್ 25ರ ವರೆಗೆ ಅವಕಾಶಕ್ಕಾಗಿ ದರ್ಶನ್ ಮನವಿ ಸಲ್ಲಿಸಿದ್ದರು. ದರ್ಶನ್ ಅರ್ಜಿಗೆ ಎಸ್‌ಎಸ್‌ಪಿ ಆಕ್ಷೇಪಣೆ ಸಲ್ಲಿಸಿದ್ದರು.

ಸಿಆರ್‌ಪಿಸಿ ಸೆಕ್ಷನ್ 439(1) (b) ಅಡಿ ದರ್ಶನ್ ಅರ್ಜಿ ಸಲ್ಲಿಸಿದ್ದರು. ಡೆವಿಲ್ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು.

ದರ್ಶನ್ ವಿದೇಶಕ್ಕೆ ತೆರಳಿದರೆ ವಾಪಸ್ ಭಾರತಕ್ಕೆ ಬರುವುದು ಅನುಮಾನ. ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ವಿದೇಶಕ್ಕೆ ತೆರಳುವುದಕ್ಕೆ ಅನುಮತಿ ನೀಡದಂತೆ ಎಸ್‌ಪಿಪಿ ಕೋರ್ಟ್ ಮುಂದೆ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆದೇಶವನ್ನು ಮೇ 30ಕ್ಕೆ ಕಾಯ್ದಿರಿಸಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪವನ್ನು ದರ್ಶನ್ ಎದುರಿಸುತ್ತಿದ್ದಾರೆ. ಹಲವು ತಿಂಗಳುಗಳ ಜೈಲುವಾಸದ ಬಳಿಕ ದರ್ಶನ್‌ಗೆ ಕೋರ್ಟ್ ಜಾಮೀನು ನೀಡಿದೆ.

Share This Article