ಬೆಂಗ್ಳೂರಲ್ಲಿ 4 ತಿಂಗಳ ಹಿಂದೆಯಷ್ಟೇ ಮದ್ವೆಯಾದ ದಂಪತಿ ಆತ್ಮಹತ್ಯೆ

Public TV
1 Min Read

ಬೆಂಗಳೂರು: ಕೊರೊನಾದಿಂದ ದೇಶಾದ್ಯಂತ ಮೂರನೇ ಬಾರಿ ಲಾಕ್‍ಡೌನ್ ಮುಂದುವರಿದಿದೆ. ಈ ನಡುವೆ ಸಿಲಿಕಾನ್ ಸಿಟಿಯಲ್ಲಿ ನವ ವಿವಾಹಿತ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ರಾಹುಲ್ (30) ಮತ್ತು ರಾಣಿ (26) ಆತ್ಮಹತ್ಯೆಗೆ ಶರಣಾದ ದಂಪತಿ. ಬೆಂಗಳೂರಿನ ಶ್ರೀರಾಮಪುರದ ದಯಾನಂದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಾಡಿಗೆ ಮನೆಯ ಎರಡನೇ ಮಹಡಿಯ ರೂಮಿನಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ರಾಹುಲ್ ಮತ್ತು ರಾಣಿ ಬಿಹಾರ ಮೂಲದ ದಂಪತಿಯಾಗಿದ್ದು, ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ರಾಣಿ ಶವ ಪತ್ತೆಯಾಗಿದ್ದು, ರಾಹುಲ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದಂಪತಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ಸಂಜೆ ಮನೆ ಮಾಲೀಕ ವಿದ್ಯುತ್ ಬಿಲ್ ನೀಡಲು ಮನೆಗೆ ಹೋಗಿದ್ದಾರೆ. ಆಗ ಎಷ್ಟೇ ಬಾಗಿಲು ಬಡಿದರೂ ದಂಪತಿ ಬಾಗಿಲನ್ನು ತೆರೆಯಲಿಲ್ಲ. ಕೊನೆಗೆ ಅನುಮಾನಗೊಂಡ ಮಾಲೀಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಶ್ರೀರಾಮಪುರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆದರೆ ದಂಪತಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *