ಕ್ಯಾಬ್ ಚಾಲಕನನ್ನು ತುಂಡು ತುಂಡಾಗಿ ಕತ್ತರಿಸಿ ಕಾರಿನೊಂದಿಗೆ ಪರಾರಿಯಾದ ದಂಪತಿ!

Public TV
1 Min Read

ನವದೆಹಲಿ: ಪ್ರಯಾಣಿಕರ ಸೋಗಿನಲ್ಲಿ ಬಂದ ದಂಪತಿ ಉಬರ್ ಕ್ಯಾಬ್ ಚಾಲಕನನ್ನು ದರೋಡೆ ಮಾಡಿ ಆತನನ್ನು ತುಂಡು ತುಂಡಾಗಿ ಕತ್ತರಿಸಿ ಬಳಿಕ ಚರಂಡಿಯಲ್ಲಿ ಮೃತದೇಹವನ್ನು ಎಸೆದು ಕಾರಿನೊಂದಿಗೆ ಪರಾರಿಯಾದ ಅಮಾನವೀಯ ಘಟನೆ ನವದೆಹಲಿಯಲ್ಲಿ ನಡೆದಿದೆ.

ದೆಹಲಿಯ ಪೂರ್ವ ಭಾಗದ ಶಾಖಾಪುರ ಪ್ರದೇಶದ ಕ್ಯಾಬ್ ಚಾಲಕ ರಾಮ್ ಗೋವಿಂದ್ ಮೃತ ದುರ್ದೈವಿ. ಆರೋಪಿಗಳನ್ನು ಫಾರ್ಹತ್ ಅಲಿ(34) ಹಾಗೂ ಆತನ ಪತ್ನಿ ಸೀಮ ಶರ್ಮಾ(30) ಎಂದು ಗುರುತಿಸಲಾಗಿದೆ. ಮೂಲತಃ ಉತ್ತರ ಪ್ರದೇಶದವರಾಗಿರುವ ದಂಪತಿ ನವದೆಹಲಿಯಲ್ಲಿ ವಾಸವಾಗಿದ್ದರು. ದಂಪತಿ ಜನವರಿ 29ರಂದು ಎಂಜಿ ರೋಡ್‍ನಿಂದ ಘಾಜಿಯಾಬಾದ್‍ಗೆ ಉಬರ್ ಕ್ಯಾಬ್ ಬುಕ್ ಮಾಡಿದ್ದರು.

ರಾಮ್ ಗೋವಿಂದ್ ದಂಪತಿ ಬುಕ್ ಮಾಡಿದ ಕ್ಯಾಬ್‍ಗೆ ಚಾಲಕನಾಗಿ ಬಂದಿದ್ದನು. ಕ್ಯಾಬ್‍ನಲ್ಲಿ ಪ್ರಯಾಣಿಸುತ್ತಿರುವಾಗ ದಾರಿ ಮಧ್ಯೆ ದಂಪತಿ ದರೋಡೆ ಮಾಡಲು ಪ್ಲಾನ್ ಮಾಡಿದ್ದಾರೆ. ಬಳಿಕ ಚಾಲಕನನ್ನು ಟೀ ಕುಡಿಸುವ ನೆಪದಲ್ಲಿ ಮನೆಗೆ ಕರೆದೊಯ್ದು ಆತನ ಬಳಿ ಇದ್ದ ಹಣವನ್ನು ದರೋಡೆ ಮಾಡಿದ್ದಾರೆ. ನಂತರ ಆತನನ್ನು ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ಕಟ್ಟಿ ನೋಯ್ಡಾ ಬಳಿ ಇರುವ ಚರಂಡಿಯಲ್ಲಿ ಮೃತದೇಹವನ್ನು ಎಸೆದು ಕಾರಿನ ಜೊತೆಗೆ ಪರಾರಿಯಾಗಿದ್ದಾರೆ.

ಕೆಲಸಕ್ಕೆ ಹೋದ ಕ್ಯಾಬ್ ಚಾಲಕ ಮನೆಗೆ ಬಾರದೇ ಇದ್ದಾಗ, ಆತನ ಪತ್ನಿ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಚಾಲಕ ಮೃತಪಟ್ಟ ಸಂಗತಿ ಬೆಳಕಿಗೆ ಬಂದಿದೆ. ಪೊಲೀಸರು ರಾಮ್ ಗೋವಿಂದ್ ಓಡಿಸುತ್ತಿದ್ದ ಕಾರಿನ ಜಿಪಿಆರ್‍ಎಸ್ ಅನ್ನು ಟ್ರಾಕ್ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕಾರು ಹಾಗೂ ಅವರ ಬಳಿ ಇದ್ದ ಮೋಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *