ನಿಶ್ಚಿತಾರ್ಥದ ಬಳಿಕ ಮಗಳು ಎಸ್ಕೇಪ್ – ಚಿಕ್ಕಬಳ್ಳಾಪುರದಲ್ಲಿ ತಂದೆ, ತಾಯಿ ಆತ್ಮಹತ್ಯೆ

Public TV
1 Min Read

ಚಿಕ್ಕಬಳ್ಳಾಪುರ: ಮದುವೆ ನಿಶ್ಚಯವಾಗಿದ್ದ ಮಗಳು ಪ್ರಿಯಕರನೊಂದಿಗೆ ಪರಾರಿಯಾಗಿದ್ದು, ಇದರಿಂದ ನೊಂದ ಯುವತಿಯ ಪೋಷಕರು ಆತ್ಮಹತ್ಯೆಗೆ ಶರಣಾದ ಘಟನೆ ಗೌರಿಬಿದನೂರು ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ 37 ವರ್ಷದ ಚೌಡಮ್ಮ ಹಾಗೂ 43 ವರ್ಷದ ಚೌಡಪ್ಪ ಮೃತ ದಂಪತಿ. ದಂಪತಿಯ ಕಿರಿಯ ಪುತ್ರಿ ಮಧುಶ್ರೀಗೆ ಮದುವೆ ನಿಶ್ಚಯವಾಗಿದ್ದು, ಆದರೆ ಮದುವೆಗೂ ಮುನ್ನವೇ ಆಕೆ ತನ್ನ ಪ್ರಿಯಕರನ ಜೊತೆ ಓಡಿಹೋಗಿದ್ದಾಳೆ. ಈ ಹಿಂದೆ ಮೊದಲ ಮಗಳು ಕೂಡ ಓಡಿಹೋಗಿ ಪ್ರಿಕರನನ್ನು ಮದುವೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ನೊಂದ ಅಪ್ಪ- ಅಮ್ಮ ನೇಣಿಗೆ ಶರಣಾಗಿದ್ದಾರೆ.

ಮಗಳು ಮಧುಶ್ರೀ ಮದುವೆಗೆ ಬೇಕಾದ ಸಕಲ ಸಿದ್ಧತೆಗಳಲ್ಲಿ ದಂಪತಿ ತೊಡಗಿಕೊಂಡಿದ್ದರು. ಆದರೆ ಕಳೆದೆರಡು ದಿನಗಳಿಂದ ಮಗಳು ಮಧುಶ್ರೀ ಕಾಣೆಯಾಗಿದ್ದು, ಪ್ರೀತಿಸಿದ ಯುವಕನ ಜೊತೆ ಪರಾರಿಯಾಗಿ ವಿವಾಹವಾಗಿರುವ ವಿಷಯ ತಿಳಿದು ಮನನೊಂದಿದ್ದರು.

ಕಳೆದ 3 ವರ್ಷಗಳ ಹಿಂದೆಯೂ ಸಹ ಮೊದಲ ಮಗಳು ಅನುಶ್ರೀ ಸಹ ಪ್ರೀತಿಸಿದ ಯುವಕನ ಜೊತೆ ಪರಾರಿಯಾಗಿ ಮದುವೆಯಾಗಿದ್ದಳು. ಮೂಲತಃ ನೇಕಾರ ವೃತ್ತಿಯಲ್ಲಿ ತೊಡಗಿಕೊಂಡು ಬೆಂಗಳೂರಿನ ಯಲಹಂಕದಲ್ಲಿ ವಾಸವಾಗಿದ್ದ ದಂಪತಿ ಶನಿವಾರ ಸ್ವಗ್ರಾಮ ಬೇವಿನಹಳ್ಳಿಗೆ ಆಗಮಿಸಿದ್ದಾರೆ. ಮಕ್ಕಳ ಈ ನಿರ್ಧಾರದಿಂದ ಅವಮಾನ ಆಗಿದೆ ಎಂದು ಮನನೊಂದಿದ್ದ ದಂಪತಿ ಗ್ರಾಮದ ಹೊರವಲಯದ ಜಮೀನಿನಲ್ಲಿನ ಹುಣಸೆ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಂದು ಬೆಳಗ್ಗೆ ಗ್ರಾಮಸ್ಥರು ಮೃತದೇಹ ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದು, ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *