ಭ್ರಷ್ಟಾಚಾರ ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದ್ರೆ ಭ್ರಷ್ಟಾಚಾರ: ಅಮಿತ್ ಶಾ

Public TV
2 Min Read

ಮೈಸೂರು: ಭ್ರಷ್ಟಾಚಾರ ಅಂದರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದರೆ ಭ್ರಷ್ಟಾಚಾರ. ಭ್ರಷ್ಟಾಚಾರ ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪರಿವರ್ತನಾ ಯಾತ್ರೆಯಲ್ಲಿ ಭಾಷಣ ಮಾಡಿದ ಅವರು, ಜನರೇ ನಿಮ್ಮ ಬಳಿ 70 ಲಕ್ಷದ ವಾಚ್ ಇದೆಯಾ? ಸಮಾಜವಾದಿ ಸಿದ್ದರಾಮಯ್ಯ ಕೈಯಲ್ಲಿ 70 ಲಕ್ಷದ ವಾಚಿದೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಅರ್ಕಾವತಿ ಡಿ ನೋಟಿಫಿಕೇಷನ್, ಗಣಿ ವಿಚಾರದಲ್ಲಿ ಭ್ರಷ್ಟಾಚಾರ ದೊಡ್ಡದಾಗಿದೆ ಎಂದು ಟೀಕಿಸಿದರು.

ಸಿಎಂ ಆಪ್ತ ಗೋವಿಂದರಾಜು ಡೈರಿ ದೆಹಲಿ ತಲುಪಿದ ಮೇಲೆ ಸಿದ್ದರಾಮಯ್ಯ ನಿದ್ದೆ ಹಾರಿ ಹೋಗಿದೆ. ಬಡವರಿಗೆ ಕೊಡುವ ಹಾಸಿಗೆ, ಕೇಂದ್ರ ಕೊಡುವ ಅಕ್ಕಿಯಲ್ಲಿ ಹಣ ತಿನ್ನುವ ಸಚಿವರು ಇದ್ದಾರೆ. ಎರಡು ದಿನ ಹೇಳುವಷ್ಟು ಭ್ರಷ್ಟಾಚಾರದ ಮಾಹಿತಿ ನನ್ನ ಬಳಿ ಇದೆ ಎಂದರು.

ಕರ್ನಾಟಕ ಬಂದ್ ನಡುವೆ ಇಷ್ಟು ಜನ ಬಂದಿದ್ದಕ್ಕೆ ನಿಮಗೆ ಕೃತಜ್ಞತೆಗಳು. ಕಾಂಗ್ರೆಸ್ ತನ್ನ ತುರ್ತು ಪರಿಸ್ಥಿತಿಯ ಸಂಸ್ಕೃತಿ ಬಿಟ್ಟಿಲ್ಲ. ನಾನು ಕಾಂಗ್ರೆಸ್ ಗೆ ಸವಾಲು ಹಾಕುತ್ತೇನೆ. ಬಿಜೆಪಿ ಯನ್ನು ಇಲ್ಲಿ ಸೋಲಿಸುವುದಕ್ಕೆ ಕಾಂಗ್ರೆಸ್ ಗೆ ಆಗಲ್ಲ. ಚಾಮುಂಡೇಶ್ವರಿ ದೇವಿ ಮಹಿಷಾಸುರನ ಮರ್ದನ ಮಾಡಿದ ಭೂಮಿ ಇದು. ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ಸರಕಾರವನ್ನು ಈ ನಾಡಿನ ಜನ ಕಿತ್ತೊಗೆಯುತ್ತಾರೆ ಎಂಬ ವಿಶ್ವಾಸ ನನಗಿದೆ. ಇದು ಸರ್ಕಾರ ಬದಲಾಯಿಸಲು ನಡೆದ ಪರಿವರ್ತನಾ ಯಾತ್ರೆ ಅಲ್ಲ. ಇದು ನಾಡಿನ ಅಭಿವೃದ್ಧಿಗಾಗಿ ನಡೆದ ಯಾತ್ರೆ. ರಾಜ್ಯದ ಅಭಿವೃದ್ಧಿಗೆ ಅನೇಕರು ದುಡಿದಿದ್ದಾರೆ. ಅವರನ್ನು ಬಿಟ್ಟು ಟಿಪ್ಪು ಜಯಂತಿಯನ್ನು ಸರ್ಕಾರ ಆಚರಿಸಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಂಘಟನೆಯ ಕಾರ್ಯಕರ್ತರ ಕೊಲೆ ಆಗಿದೆ. ಇದು ಸರ್ಕಾರದ ತಾರತಮ್ಯದಿಂದ ನಡೆದಿರುವುದು. ಎಸ್‍ಡಿಪಿ ಮೇಲಿನ ಎಲ್ಲಾ ಕೇಸ್ ಸರ್ಕಾರ ವಾಪಸ್ ಪಡೆದಿದೆ. ಹಾಗದರೆ ಸಿದ್ದರಾಮಯ್ಯ ಅವರೇ ನೀವು ಎಸ್‍ಡಿಪಿಐ ಸಂಘಟನೆ ಬೆಂಬಲಿಸುತ್ತೀರಾ? ಗಣೇಶ ಚರ್ತುರ್ಥಿ ಮೆರವಣಿಗೆಗೆ ನೀವು ಅವಕಾಶ ಕೊಡಲ್ಲ. ಆದರೆ, ಬೇರೆ ಮೆರವಣಿಗೆಗೆ ಅವಕಾಶ ಕೊಡುತ್ತೀರಾ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು.

ಕರ್ನಾಟಕ ಬಂದ್ ಅಮಿತ್ ಶಾ ಯಾತ್ರೆಗೂ ತಟ್ಟಿತ್ತು. ಕೊನೆ ಕ್ಷಣದಲ್ಲಿ ಅಮಿತ್ ಶಾ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿತ್ತು. ಅಮಿತ್ ಶಾ ಮೈಸೂರಿಗೆ ಆಗಮಿಸಿ ವಿಮಾನ ನಿಲ್ದಾಣದಿಂದ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಬೇಕಿತ್ತು. ನಂತರ ಸುತ್ತೂರು ಮಠಕ್ಕೂ ಭೇಟಿ ನೀಡಿ ಅಂತಿಮವಾಗಿ ಮಹಾರಾಜ ಕಾಲೇಜು ಮೈದಾನದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಆದ್ರೆ ಕಾರ್ಯಕ್ರಮದ ಪಟ್ಟಿಯನ್ನ ಪರಿಷ್ಕೃತಗೊಳಿಸಿದ್ದು, ವಿಮಾನ ನಿಲ್ದಾಣದಿಂದ ನೇರವಾಗಿ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿ ಭಾಷಣ ಮಾಡಿದರು.

ಆರಂಭದಲ್ಲಿ ಬಂದ್ ನಿಂದಾಗಿ ಪರಿವರ್ತನಾ ಯಾತ್ರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಕರ್ತರು ಬಂದಿರಲಿಲ್ಲ. ಆದರೆ ಶಾ ವೇದಿಕೆಗೆ ಆಗಮಿಸಿದ ಮೇಲೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ ಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಸಿ.ಟಿ.ರವಿ, ಅರವಿಂದ ಲಿಂಬಾವಳಿ ಸೇರಿದಂತೆ ಇತರೆ ಬಿಜೆಪಿ ನಾಯಕರು ಹೂ ಗುಚ್ಛ ನೀಡಿ ಸ್ವಾಗತ ಕೋರಿದ್ರು.

Share This Article
Leave a Comment

Leave a Reply

Your email address will not be published. Required fields are marked *