ಸಾರ್ವಜನಿಕರಿಗಾಗಿ ಹಾಕಿದ ಬೋರ್ ಸ್ವಂತಕ್ಕೆ ಬಳಸಿಕೊಂಡ ಪಾಲಿಕೆ ಸದಸ್ಯೆ

Public TV
1 Min Read

– ಕಾರ್ಪೋರೇಟರ್ ವಿರುದ್ಧ ಸಾರ್ವಜನಿಕರು ಆಕ್ರೋಶ

ಬೆಂಗಳೂರು: ಸಾರ್ವಜನಿಕರ ಬಳಕೆಗೆ ಅಂತಾ ಕಾರ್ಪೋರೇಟರೇ ಹಾಕಿಸಿದ ಬೋರ್ ನಿಂದ ಸ್ವಲ್ಪ ದಿನಾ ಏನೋ ಸಾರ್ವಜನಿಕರಿಗೆ ನೀರು ಬಿಟ್ಟರು. ಕ್ರಮೇಣ ತಮ್ಮದೇ ಒಡೆತನದ ಕಾಂಪ್ಲೆಕ್ಸ್‍ಗೆ ನೀರು ಬಿಟ್ಟುಕೊಂಡು ಅಂಧ ದರ್ಬಾರ್ ಮಾಡುತ್ತಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.

ಬೆಂಗಳೂರಿನ ರಾಮಸ್ವಾಮಿಪಾಳ್ಯ ವಾರ್ಡ್ ನ ಚಿನ್ನಪ್ಪ ಗಾರ್ಡನ್ ಮುಖ್ಯ ರಸ್ತೆಯ ಎಡಭಾಗಕ್ಕೆ ಕಾಂಪ್ಲೆಕ್ಸ್, ಮುಂದುಗಡೆ ಮುಖ್ಯ ರಸ್ತೆ ಇದೆ. ಅದರ ಮಧ್ಯದಲ್ಲಿಯೇ ಬೋರ್ ವೆಲ್ ವೊಂದಿದೆ. ಕಳೆದ ಮೂರು ತಿಂಗಳ ಹಿಂದೆ ಸ್ಥಳೀಯ ಕಾರ್ಪೋರೇಟರ್ ನೇತ್ರಾವತಿ ಕೃಷ್ಣೇಗೌಡ ಅವರು ಸಾರ್ವಜನಿಕರ ಉಪಯೋಗಕ್ಕೆ ಈ ಬೋರ್ ವೆಲ್ ಅನ್ನು ಹಾಕಿಸಿದ್ದಾರೆ. ಆದ್ರೆ ಸ್ವಲ್ಪ ದಿನಗಳ ಕಾಲ ಅಲ್ಲಿನ ಸ್ಲಂ ನಿವಾಸಿಗಳಿಗೆ ನೀರು ಬಿಟ್ಟ ಕಾರ್ಪೋರೇಟರ್, ಬಳಿಕ ತಮ್ಮ ಒಡೆತನದ ದಿವ್ಯಶ್ರೀ ಕಾಂಪ್ಲೆಕ್ಸ್‍ಗೆ ಬಳಸಿಕೊಳ್ತಿದ್ದಾರೆ. ಹೀಗಾಗಿ ಕಾರ್ಪೋರೇಟರ್ ಮಾಡ್ತಿರುವ ಅನ್ಯಾಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಕಾರ್ಪೋರೇಟರ್ ಪತಿ ಕೃಷ್ಣೇಗೌಡ ಸಾರ್ವಜನಿಕರ ಆರೋಪ ತಳ್ಳಿ ಹಾಕಿದ್ದಾರೆ. ನಾವು ಸ್ವಂತ ದುಡ್ಡಿಂದ ಹಾಕಿಸಿದ ಬೋರ್‍ವೆಲ್ ನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟಿದ್ದೀವಿ. ಯಾರೋ ಸುಮ್ನೆ ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಅಂತಿದ್ದಾರೆ. ಆದ್ರೆ ಪಬ್ಲಿಕ್ ಟಿವಿ ಕ್ಯಾಮರಾದಲ್ಲಿ ಕಾಂಪ್ಲೆಕ್ಸ್ ಕಡೆ ಲೈನ್ ಕನೆಕ್ಷನ್ ಕೊಟ್ಟಿರೋ ವಿಡಿಯೋ ಇದೆ ಅಂದರೆ, ಹಾಗೇನು ಇಲ್ಲ ಸರಿಯಾಗಿ ಇದೆ. ಯಾರೋ ಆಗದೇ ಇರೋರು ಸುಳ್ಳು ಮಾಹಿತಿ ನೀಡಿದ್ದಾರೆ ಅಂತ ಹೇಳಿದ್ದಾರೆ.

ಒಟ್ಟಾರೆ ಸಾರ್ವಜನಿಕರಿಗೆ ಅಂತಾ ಹಾಕಿಸಿದ ಬೋರ್‍ವೆಲ್ ಬಾರ್, ಹೋಟೆಲ್‍ಗಳಿಗೆ ಅನುಕೂಲ ಆಗ್ತಿದೆ. ಇಷ್ಟೆಲ್ಲಾ ಆದ್ರೂ ಯಾವುದೇ ಜಲಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ತಿರುಗಿ ನೋಡದಿರುವುದು ವಿಪರ್ಯಾಸವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *