ಭಾರತದಲ್ಲಿ ಕೊರೊನಾ ಜ್ವರಕ್ಕೆ ಇಬ್ಬರು ಸಾವನ್ನಪ್ಪಿರುವ ವರದಿ – ಬೆಂಗ್ಳೂರಲ್ಲಿ ನರ್ಸರಿ ಶಾಲೆಗಳಿಗೆ ರಜೆ

Public TV
1 Min Read

ಬೆಂಗಳೂರು: ಚೀನಾದಲ್ಲಿ ಮರಣ ಮೃದಂಗ ಬಾರಿಸಿದ್ದ ಕೊರೊನಾ ವೈರಸ್ ಇದೀಗ ಭಾರತದಲ್ಲಿ ಮರಣ ಮೃದಂಗ ಆರಂಭಿಸಿತೇ ಎನ್ನುವ ಆತಂಕ ಜನರಲ್ಲಿ ಶುರುವಾಗಿದೆ.

ಕೊರೊನಾ ಜ್ವರದ ಹಿನ್ನೆಲೆಯಲ್ಲಿ ಭಾರತದಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತ್ತು ಲಡಾಕ್‍ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಕೊರೊನಾ ಜ್ವರ ಶಂಕೆ ಹಿನ್ನೆಲೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಇದನ್ನೂ ಓದಿ: ಬೆಂಗ್ಳೂರಿನ ಎಲ್‍ಕೆಜಿ, ಯುಕೆಜಿ ಶಾಲೆಗಳಿಗೆ ರಜೆ ಘೋಷಣೆ

ದುಬೈನಿಂದ ಮರಳಿದ್ದ ಪಶ್ಚಿಮ ಬಂಗಾಳದ ವ್ಯಕ್ತಿ ಸಾವನ್ನಪ್ಪಿರುವುದು. ಮುರ್ಷಿದಾಬಾದ್ ಜಿಲ್ಲೆಯ ಆ ವ್ಯಕ್ತಿಗೆ ಡಯಾಬಿಟಿಸ್ ಕೂಡ ಇತ್ತು. ಇರಾನ್‍ನಿಂದ ಮರಳಿದ್ದ ಲಡಾಕ್ ವ್ಯಕ್ತಿಗೂ ಕೊರೊನಾ ಚಿಕಿತ್ಸೆ ನೀಡಲಾಗುತ್ತಿತ್ತು. ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಇಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಭಾರತದಲ್ಲಿ ಇದು ಮೊದಲ ಕೊರೊನಾ ಶಂಕಿತರ ಸಾವಿನ ಪ್ರಕರಣ ಎನ್ನಲಾಗಿದೆ.

ಇದುವರೆಗೂ ಜಗತ್ತಿನಾದ್ಯಂತ ಕೊರೊನಾ ಸಾವಿನ ಸಂಖ್ಯೆ 3,556ಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್‍ಕೆಜಿ, ಯುಕೆಜಿ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಆರೋಗ್ಯ ಆಯುಕ್ತರ ಸಲಹೆ ಮೇರೆಗೆ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ ಯುಕೆಜಿ, ಎಲ್‍ಕೆಜಿ ಶಾಲೆಗಳಿಗೆ ಇಂದಿನಿಂದ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಹೈದರಾಬಾದ್ ಮೂಲದ ಬೆಂಗಳೂರು ಟೆಕ್ಕಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಮೇಲೆ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಜೊತೆಗೆ ಕರೆ ಮಾಡಿ ಕೊರೊನಾ ವೈರಸ್ ಬಗ್ಗೆ ಮಾಹಿತಿ ಪಡೆಯುವವರ ಸಂಖ್ಯೆಯೂ ಜಾಸ್ತಿಯಾಗಿತ್ತು. ವಿದೇಶದಿಂದ ಬಂದ ನೂರಾರು ಮಂದಿಯ ಕೊರೊನಾ ವೈರಸ್ ಸೊಂಕು ಪರೀಕ್ಷೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *