ಪಾದರಾಯನಪುರ ಪುಂಡರಿಂದ್ಲೇ ಅವಾಂತರ- ಮಾತ್ರೆ ತಗೊಂಡು ಜ್ವರ ಮುಚ್ಚಿಟ್ಟಿದ್ರಾ?

Public TV
2 Min Read

ಬೆಂಗಳೂರು: ಪಾದರಾಯನಪುರದ ಪುಂಡರು ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಗಲಭೆ ಎಬ್ಬಿಸಿದ್ದ 124 ಮಂದಿಯಲ್ಲಿ ಐವರಿಗೆ ಕೊರೊನಾ ಸೋಂಕು ಹಬ್ಬಿದೆ. ಇವರು ಕಾಲಿಟ್ಟಿದ್ದ ರಾಮನಗರ ಜಿಲ್ಲೆಗೂ ಕೊರೊನಾ ಸೋಂಕು ಹಬ್ಬುವ ಭೀತಿ ಎದುರಾಗಿದೆ. ಗ್ರೀನ್‍ಝೋನ್‍ನಿಂದ ರಾಮನಗರವನ್ನು ಹೊರಗಿಡಲಾಗಿದ್ದು, ಈಗ ಹಾಟ್‍ಸ್ಪಾಟ್ ಆಗುವ ಆತಂಕ ಉಂಟಾಗಿದೆ.

ಪಾದರಾಯನಪುರದ ಪುಂಡರಲ್ಲಿ ಐವರಿಗೆ ಕೊರೊನಾ ಹೇಗೆ ಬಂತು ಅನ್ನೋದು ಈಗ ಆರೋಗ್ಯ ಇಲಾಖೆಗೆ ಸವಾಲಾಗಿದೆ. ಈ ಪುಂಡರು ಕೊರೊನಾ ಸೋಂಕಿತರ ಪ್ರಾಥಮಿಕ ಅಥವಾ ಸೆಕೆಂಡರಿ ಸಂಪರ್ಕದಲ್ಲಿದ್ದ ಬಗ್ಗೆ ಮಾಹಿತಿ ಇಲ್ಲ. ಸದ್ಯಕ್ಕೆ ಇವರಿಗೆ ಕೊರೊನಾ ಹಬ್ಬಿದ್ದು ಹೇಗೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಪತ್ತೆ ಮಾಡುತ್ತಿದೆ.

ಜ್ವರ ಮುಚ್ಚಿಟ್ಟಿದ್ರಾ ಪುಂಡರು?
ಅಂದಹಾಗೆ ಪಾದರಾಯನಪುರದಲ್ಲಿ ಪೊಲೀಸರು, ವೈದ್ಯರು, ಆಶಾ ಕಾರ್ಯಕರ್ತೆಯರ ಮೇಲೆ ದಾಳಿ ನಡೆಸಿ ಬ್ಯಾರಿಕೇಡ್, ಪೆಂಡಾಲ್‍ಗಳನ್ನ ಧ್ವಂಸಗೊಳಿಸಿದ್ದ ಈ ಪಾಪಿಗಳು ತಮಗೆ ಕೊರೊನಾದ ಲಕ್ಷಣ ಇದ್ದರೂ ಮುಚ್ಚಿಟ್ಟಿದ್ರಾ ಎಂಬ ಅನುಮಾನ ಮೂಡಿದೆ. ಜ್ವರ, ಶೀತ ಮತ್ತು ಕೆಮ್ಮಿನ ಮಾತ್ರೆಗಳನ್ನು ಸೇವಿಸಿ ಯಾರಿಗೂ ಕೊರೊನಾ ಬಗ್ಗೆ ಅನುಮಾನ ಬರದಂತೆ ಊರೆಲ್ಲ ಓಡಾಡಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗುತ್ತಿದೆ.

ಕೈಕೊಟ್ಟ ರ‍್ಯಾಪಿಡ್ ಟೆಸ್ಟ್ ಕಿಟ್:
ಲಾಕ್‍ಡೌನ್ ಘೋಷಣೆಯಾಗಿ ಇಂದಿಗೆ 32ನೇ ದಿನ. ಹೀಗಿದ್ದರೂ ಇನ್ನೂ ಕರ್ನಾಟಕದಲ್ಲಿ ರ‍್ಯಾಪಿಡ್ ಟೆಸ್ಟ್ ಆರಂಭವಾಗಿಲ್ಲ. ರ‍್ಯಾಪಿಡ್ ಟೆಸ್ಟ್ ಮಾಡಿದ್ದರೆ ಆಗ ಈ ಪಾದರಾಯನಪುರದ ಪುಂಡರಲ್ಲಿ ಕೊರೊನಾ ಲಕ್ಷಣ ಇದ್ದಿದ್ದರ ಸುಳಿವು ಸಿಗುತ್ತಿತ್ತು ಎನ್ನಲಾಗಿದೆ.

ಯಾಕೆಂದರೆ ಗಲಭೆಗೂ ಮೊದಲೇ ಪಾದರಾಯನಪುರ ಕೊರೊನಾ ಹಾಟ್‍ಸ್ಪಾಟ್ ಏರಿಯಾ ಎಂದು ಘೋಷಣೆ ಆಗಿತ್ತು. ಸೀಲ್‍ಡೌನ್ ಕೂಡ ಮಾಡಲಾಗಿತ್ತು. ಸೀಲ್‍ಡೌನ್ ಏರಿಯಾದಲ್ಲಿ ರ‍್ಯಾಪಿಡ್ ಟೆಸ್ಟ್ ಗೆ ಸೂಚಿಸಲಾಗಿತ್ತು. ಆದರೆ ಚೀನಾದಿಂದ ತರಿಸಿದ ರ‍್ಯಾಪಿಡ್ ಟೆಸ್ಟ್ ಕಿಟ್‍ಗಳಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಪರೀಕ್ಷೆಯನ್ನ ಸ್ಥಗಿತಗೊಳಿಸಲಾಗಿತ್ತು. ಇವೆಲ್ಲವೂ ಪಾದರಾಯನಪುರದ ಕೊರೊನಾ ಪರಿಸ್ಥಿತಿಯನ್ನ ಇನ್ನಷ್ಟು ಬಿಗಡಾಯಿಸಿತಾ ಅನ್ನೋ ಪ್ರಶ್ನೆ ಕಾಡುತ್ತಿದೆ.

ಮಾಹಿತಿ ಕೊಡದೇ ಸತಾಯಿಸ್ತಿದ್ದಾರೆ ಪುಂಡರು:
ಈ ಪಾದರಾಯನಪುರ ಪುಂಡರ ಆಟಾಟೋಪ ಒಂದೆರಡಲ್ಲ. ಸೋಂಕು ಕಾಣಿಸಿಕೊಂಡವರು ತಾವು ಯಾರ ಜೊತೆಗೆ ಸಂಪರ್ಕಕ್ಕೆ ಮಾಡಿದ್ದೀವಿ, ಎಲ್ಲೆಲ್ಲಿ ಹೋಗಿದ್ದೀವಿ ಅನ್ನೋದರ ಮಾಹಿತಿ ಕೊಡಬೇಕು. ಆದರೆ ಅದ್ಯಾವುದನ್ನೂ ಈ ಪುಂಡರು ಕೊಡುತ್ತಿಲ್ಲ. ಹೀಗಾಗಿ ಇವರ ಕಾಲ್ ರೆಕಾರ್ಡ್ ಡೀಟೇಲ್ಸ್ ಹುಡುಕುವ ಮೂಲಕ ಟ್ರೇಸ್ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಟಿಪ್ಪು ನಗರದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ತನಗೆ ಎರಡನೇ ಪತ್ನಿ ಇದ್ದ ವಿಚಾರವನ್ನೇ ಮುಚ್ಟಿಟ್ಟಿದ್ದ. ಆತನ ಕಾಲ್‍ ಟ್ರೇಸ್ ಮಾಡಿದಾಗಲೇ ಸತ್ಯ ಬಯಲಾಗಿತ್ತು.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಬರೋಬ್ಬರಿ 30 ಕೊರೊನಾ ಪಾಸಿಟಿವ್ ಪ್ರಕರಣ ವರದಿ ಆಗಿದೆ. ಇದರಲ್ಲಿ ಪಾದರಾಯನಪುರದಲ್ಲಿ 23 ಕೇಸ್ ಮತ್ತು ಟಿಪ್ಪು ನಗರದಲ್ಲಿ 7 ಪ್ರಕರಣ ವರದಿ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *