ಡೇಂಜರ್ ಜೋನ್‍ನಲ್ಲಿ ನಂಜನಗೂಡು – ಒಳ ಹೋಗುವಂತಿಲ್ಲ, ಹೊರ ಬರುವಂತಿಲ್ಲ

Public TV
2 Min Read

– ಸಾರಾ ಮಹೇಶ್ ಏಕಾಂಗಿ ಸಂಚಾರ

ಮೈಸೂರು: ಕೊರೊನಾ ಸೋಂಕಿತರ ಸಂಖ್ಯೆ ಮೈಸೂರು ಜಿಲ್ಲೆಯಲ್ಲಿ 8ಕ್ಕೆ ಏರಿದೆ. ಕೊರೊನಾ 52ನೇ ಸೋಂಕಿತನಿಂದ ಇತರೆ 5 ಮಂದಿಗೆ ಸೊಂಕು ತಗುಲಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡಿನ  ಸಂಪರ್ಕವನ್ನು ಕಡಿತ ಮಾಡಲಾಗಿದೆ.

ಐದು ಮಂದಿಯು ನಂಜನಗೂಡು ಪಟ್ಟಣ, ಚಾಮುಂಡಿಪುರಂ, ರಾಮಸ್ವಾಮಿ ಲೇಔಟ್, ಗೋವಿಂದ ರಾಜ ಲೇಔಟ್ ಹಾಗೂ ಯರಗನಹಳ್ಳಿ ನಿವಾಸಿಗಳು. ಎಲ್ಲರು ನಂಜನಗೂಡು ಜ್ಯೂಬಿಲಿಯೇಟ್ ಫ್ಯಾಕ್ಟರಿ ನೌಕರರು. ಮೂರನೇ ಸೋಂಕಿತನಿಂದ ಈ ಐದು ಮಂದಿಗೆ ಸೋಂಕು ಬಂದಿದೆ. ಹೀಗಾಗಿ ಈಗ ನಂಜನಗೂಡು ಪಟ್ಟಣದ ಒಳಗೆ ಹೋಗುವುದಕ್ಕೆ ಮತ್ತು ಅಲ್ಲಿಂದ ಹೊರ ಬರುವವರ ಪ್ರವೇಶ ಕೂಡ ನಿಷೇಧಿಸಲಾಗಿದೆ.

ನಂಜನಗೂಡಿನಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ನಂಜನಗೂಡಿಗೆ ಯಾರು ಬರುವಂತಿಲ್ಲ, ಹೋಗುವಂತಿಲ್ಲ. ಆದರೂ ಜಿಲ್ಲಾಡಳಿತದ ಮಾತು ಮೀರಿ ಜನರು ಹೊರಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಯುವಕರೇ ಗ್ರಾಮಸ್ಥರಿಗೆ ಅರಿವು ಮೂಡಿಸಲು ಪಣ ತೊಟ್ಟಿದ್ದು, ಯುವಕರು ಗ್ರಾಮದ ನಿವಾಸಿಗಳಿಗೆ ಮಾಸ್ಕ್ ವಿತರಣೆ ಮಾಡಿದ್ದಾರೆ.

ನಂಜನಗೂಡಿನ ಶ್ರೀರಾಂಪುರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮಾಸ್ಕ್ ವಿತರಿಸಿದ್ದಾರೆ. ಈಗಲಾದರೂ ಎಚ್ಚರಿಕೆಯಿಂದ ಇರಿ ಎಂದು ಮನವಿ ಮಾಡುತ್ತಿದ್ದು, ಮಾಸ್ಕ್ ಕೊಟ್ಟು, ಈಗಲೇ ಧರಿಸಿಯೇ ಮನೆಯಲ್ಲಿರಬೇಕೆಂದು ಸೂಚಿಸಿದರು.

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 8ಕ್ಕೆ ಏರಿದರೂ ಜನಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಮೈಸೂರಿನ ಎಂಜಿ ರಸ್ತೆಯಲ್ಲಿನ ತರಕಾರಿ ಸಂತೆಯಲ್ಲಿ ಗಿಜಿಗಿಡುವಷ್ಟು ಜನ ಸೇರಿ ತರಕಾರಿ ಖರೀದಿ ಮಾಡುತ್ತಿದ್ದಾರೆ. ಜನರ ನಡುವೆ ಅಂತರ ಇಲ್ಲ. ಮಾಸ್ಕ್ ಕೂಡ ಹಾಕಿಕೊಂಡಿಲ್ಲ. ಅಲ್ಲಿಗೆ ಜನರಿಗೆ ಕೊರೊನಾ ಭಯವೂ ಇಲ್ಲದಂತಾಗಿದೆ.

ಇನ್ನೂ ಮೈಸೂರಿನಲ್ಲಿ ಇಂದಿನಿಂದ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಸೇವೆಗಳ ಅಡಿಯಲ್ಲಿ ಮಾಂಸ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಹಕ್ಕಿ ಜ್ವರದಿಂದ ಮಟನ್ ಮಾರಾಟ ನಿಲ್ಲಿಸಲಾಗಿತ್ತು. ಶಾಪ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಮಾಂಸ ಖಾಲಿಯಾಗಿದೆ. ಭಾನುವಾರವಾದ ಕಾರಣ ಜನ ಮುಗಿಬಿದ್ದು ಮಾಂಸ ಖರೀದಿ ಮಾಡಿದ್ದಾರೆ. ಕಳೆದ 1 ವಾರದಿಂದ ಮಾಂಸ ಖರೀದಿ ಮಾಡಿರಲಿಲ್ಲ. ಇಂದು ಓಪನ್ ಆಗುತ್ತಿದ್ದಂತೆ 8  ಗಂಟೆ ವೇಳೆಯಲ್ಲೇ ಮಟನ್ ಖಾಲಿಯಾಗಿದೆ.

ಸಾರಾ ಮಹೇಶ್ ಏಕಾಂಗಿ ಸಂಚಾರ:
ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ಶಾಸಕ ಸಾರಾ ಮಹೇಶ್ ಏಕಾಂಗಿ ಸಂಚಾರ ನಡೆಸಿದರು. ಕೆ.ಆರ್.ನಗರ ತಾಲೂಕಿನಲ್ಲಿ ಸ್ವತಃ ಶಾಸಕರು ಕಾರು ಚಲಾಯಿಸಿಕೊಂಡು ವೀಕ್ಷಣೆ ಮಾಡಿದರು. ಕೊರೊನಾ ಬಗ್ಗೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲಿಸಿದರು.

Share This Article
Leave a Comment

Leave a Reply

Your email address will not be published. Required fields are marked *