ಕಾಫಿ ಉದ್ಯಮದ ಮೇಲೆ ಕೊರೊನಾ ಕಾರ್ಮೋಡ

Public TV
1 Min Read

– ಕಾಫಿಗೆ ಬೆಲೆನೂ ಇಲ್ಲ, ಕೊಳ್ಳೋರೂ ಇಲ್ಲ

ಹಾಸನ: ಕೊರೊನಾ ಮಹಾಮಾರಿ ಹೊಡೆತಕ್ಕೆ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿಗೆ ಒಳ್ಳೆ ಬೆಲೆನೂ ಸಿಗುತ್ತಿಲ್ಲ. ಇತ್ತ ಕಾಫಿಯನ್ನು ಕೊಳ್ಳುವವರು ಇಲ್ಲದಂತಾಗಿದೆ. ಇದನ್ನೂ ಓದಿ: ಖಡಕ್ ರೊಟ್ಟಿ ಮೇಲೂ ಕೊರೊನಾ ಕರಿನೆರಳು

ಪ್ರತಿ ವರ್ಷ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದ ಕಾಫಿತೋಟದ ಮಾಲೀಕರು ಈ ಬಾರಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಇದ್ದಕ್ಕಿದ್ದಂತೆ ವಕ್ಕರಿಸಿದ ಕೊರೊನಾ ಮಹಾಮಾರಿಯಿಂದಾಗಿ ಕಾಫಿ ಬೆಳೆಗೆ ಬೇಡಿಕೆ ಕುಸಿದಿದೆ. ಕಾಫಿ ಕೊಳ್ಳುವವರು ಕೂಡ ಮುಂದೆ ಬರುತ್ತಿಲ್ಲ. ಇದರಿಂದ ಸರಿಯಾದ ಬೆಲೆ ಕೂಡ ಸಿಗದಂತಾಗಿದೆ. ಇದೇ ರೀತಿ ಮುಂದುವರಿದರೆ ಮುಂದಿನ ವರ್ಷ ಕಾಫಿ ತೋಟ ಮಾಡುವುದೇ ಕಷ್ಟ ಆಗುತ್ತೆ ಎಂದು ಕಾಫಿ ತೋಟದ ಮಾಲೀಕರಾದ ಜಗನ್ನಾಥ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಒಂದು ಕಡೆ ಕೊರೊನಾ ಮಹಾಮಾರಿಗೆ ಹೆದರಿದ ಹೊರರಾಜ್ಯ, ಜಿಲ್ಲೆಯಿಂದ ಬಂದಿದ್ದ ಕೂಲಿ ಕಾರ್ಮಿಕರು ಲಾಕ್‍ಡೌನ್ ಸಡಿಲಿಕೆ ಆಗುತ್ತಿದ್ದಂತೆ ತಮ್ಮ ಊರಿನತ್ತ ವಾಪಸ್ಸಾಗುತ್ತಿದ್ದಾರೆ. ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಅಂತರ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ ಮಾಲೀಕರು ಕೂಡ ಕೆಲಸಕ್ಕೆ ಕರೆಯುತ್ತಿಲ್ಲ. ಆದ್ದರಿಂದ ಜೀವನ ನಿರ್ವಹಣೆಯೇ ಕಷ್ಟವಾಗಿದೆ ಎಂದು ಕಾರ್ಮಿಕರು ಹೇಳುತ್ತಿದ್ದಾರೆ.

ಲಾಕ್‍ಡೌನ್ ವೇಳೆ ರೈತರಂತೆ ಕಾಫಿಬೆಳೆಗಾರರೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಉತ್ತಮ ಬೆಲೆ ಸಿಗುವಂತೆ ವ್ಯವಸ್ಥೆ ಮಾಡಬೇಕು ಅನ್ನೋದು ಕಾಫಿಬೆಳೆಗಾರರ ಒತ್ತಾಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *