ತುಮಕೂರಿನಲ್ಲಿ ಕೊರೊನಾಗೆ ಮೊದಲ ಸಾವು

Public TV
2 Min Read

– ರಾಜ್ಯದಲ್ಲಿ ಕೊರೊನಾಗೆ 3ನೇ ಬಲಿ

ತುಮಕೂರು: ಜಿಲ್ಲೆಯಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶಿರಾ ಮೂಲದ 65 ವರ್ಷದ ವೃದ್ಧ ಎಂದು ಗುರುತಿಸಲಾಗಿದೆ. ಮೃತರಿಗೆ ಸುಮಾರು ಐದು ದಿನದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತ ಎಂದು ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ  ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 10.45ಕ್ಕೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ್ಲೇ ಚಿಕ್ಕಬಳ್ಳಾಪುರದ ಮಹಿಳೆ ಸಾವು- ಶ್ರೀರಾಮುಲು ದೃಢ

ಮೃತ ವೃದ್ಧ ಮಾರ್ಚ್ 5ಕ್ಕೆ ದೆಹಲಿಗೆ ಹೋಗಿದ್ದರು. ಮಾರ್ಚ್ 18 ರಂದು ಜ್ವರ ಕಾಣಿಸಿಕೊಂಡಿದೆ. ತಕ್ಷಣ ಅವರು ಶಿರಾದಿಂದ ಬಸ್ಸಿನಲ್ಲಿ ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಲ್ಲಿಂದ 19 ಮತ್ತು 20 ರಂದು ಎಲ್ಲಾ ಕಡೆ ಓಡಾಡಿದ್ದರು. ಆದರೆ ಜ್ವರ ವಾಸಿಯಾಗಿರಲಿಲ್ಲ. ಕೊನೆಗೆ ಮಾರ್ಚ್ 23 ರಂದು ಜಿಲ್ಲಾಸ್ಪತ್ರೆಗೆ ಬಂದು ದಾಖಲಾಗಿದ್ದು. ಅಂದಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಗುರುವಾರದವರೆಗೂ ತುಮಕೂರಿನಲ್ಲಿ ಒಂದೇ ಒಂದು ಕೊರೊನಾ ವೈರಸ್ ಸೋಂಕಿತರು ಇರಲಿಲ್ಲ. ಕಳೆದ ದಿನ ಎರಡು ಕೊರೊನಾದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ತಡರಾತ್ರಿ ಕೊರೊನಾ ವರದಿ ಬಂದಿದ್ದು, ಅದರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಕೊರೊನಾ ಪಾಸಿಟಿವ್ ವರದಿ ಬಂದ ಮರುದಿನ ಬೆಳಗ್ಗೆಯೇ ವೃದ್ಧ ಮೃತಪಟ್ಟಿದ್ದಾರೆ.

ವೃದ್ಧನ ಕುಟುಂಬದಲ್ಲಿ ಮೂವರು ಪತ್ನಿಯರು ಮತ್ತು 16 ಮಕ್ಕಳು ಸೇರಿದಂತೆ 25 ಮಂದಿ ಇದ್ದು, ಅವರನ್ನು ಐಸೋಲೇಶನ್‍ನಲ್ಲಿ ಇರಿಸಲಾಗಿದೆ. ಅಲ್ಲದೇ ವೃದ್ಧ 33 ಮಂದಿ ಜೊತೆ ಸಂಪರ್ಕ ಹೊಂದಿದ್ದರು. ಅವರ ಮೇಲೂ ತೀವ್ರ ನಿಗಾ ವಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಟ್ರಾವೆಲ್ ಇಸ್ಟರಿ:
ಮಾರ್ಚ್ 5ಕ್ಕೆ ತುಮಕೂರಿನಿಂದ ದೆಹಲಿಗೆ ಪ್ರಯಾಣ ಮಾಡಿದ್ದು, ಸಂಪರ್ಕ ಕ್ರಾಂತಿ ರೈಲಿನಲ್ಲಿ 13 ಮಂದಿ ಜೊತೆ ಪ್ರಯಾಣ. ಎಸ್-6 ಬೋಗಿಯಲ್ಲಿ ವೃದ್ಧ ಪ್ರಯಾಣಿಸಿದ್ದ. ಮಾರ್ಚ್ 7 ದೆಹಲಿಗೆ ತಲುಪಿದ್ದು, ಜಾಮೀಯಾ ಮಸೀದಿಗೆ ಟ್ಯಾಕ್ಸಿಯಲ್ಲಿ ಹೋಗಿದ್ದರು. ಮಾರ್ಚ್ 11 ದೆಹಲಿಯಿಂದ ಕಾಂಗೋ ಎಕ್ಸ್ ಪ್ರೆಸ್ ಎಸ್ 9 ಮೂಲಕ ಬೆಂಗಳೂರಿಗೆ ವಾಪಸ್ ಆಗಿದ್ದರು. ಮಾರ್ಚ್ 14 ರಂದು ಬೆಳಗ್ಗೆ ಬೆಂಗಳೂರಿಂದ ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ತುಮಕೂರಿನ ಶಿರಾಗೆ ಹೋಗಿದ್ದರು. ಮಾ. 18ರಂದು ಕೆಮ್ಮು, ಜ್ವರ ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಲ್ಲದೇ ಮಾಚ್ 21 ರಂದು ಎಕ್ಸ್ ರೇ ಮಾಡಿಸಿದ್ದು, ಜಿಲ್ಲಾಸ್ಪತ್ರೆಗೆ ಬಂದು ದಾಖಲಾಗಿದ್ದರು.

ಕರ್ನಾಟಕದಲ್ಲಿ ಕೊರೊನಾ ವೈರಸ್‍ಗೆ ಮೊದಲು ಕಲಬುರಗಿಯಲ್ಲಿ ವೃದ್ಧನೊಬ್ಬ ಮೃತಪಟ್ಟಿದ್ದನು. ನಂತರ ಗೌರಿಬಿದನೂರು ಮಹಿಳೆ, ಇಂದು ತುಮಕೂರಿನ ಶಿರಾ ಮೂಲದ ವೃದ್ಧ ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾಗೆ ಕರ್ನಾಟಕದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *