ನವದೆಹಲಿ: ಕೊರೊನಾ ವೈರಸ್ ಪರಿಣಾಮ ಮುಂದಿನ ಎರಡು ವಾರಗಳಲ್ಲಿ ಗೋಧಿ ಉತ್ಪನ್ನಗಳಾದ ಹಿಟ್ಟು, ಮೈದಾ ಮತ್ತು ರವೆ ಖಾಲಿಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಕೊರೊನಾ ವೈರಸ್ ನಿಂದಾಗಿ ವಾಣಿಜ್ಯ ಚಟುವಟಿಕೆಗಳು ಸ್ತಬ್ಧವಾಗಿದೆ. ಹೀಗಾಗಿ ಗೋಧಿ ಉತ್ಪನ್ನಗಳಾದ ಹಿಟ್ಟು, ಮೈದಾ ಮತ್ತು ರವೆ ಉತ್ಪಾದನೆಯಲ್ಲಿ ಇಳಿಕೆಯಾಗಿದೆ. ಸಂಗ್ರಹಿಸಿದ್ದ ದಾಸ್ತಾನು ಸಹ ಖಾಲಿಯಾಗುವ ಹಂತ ತಲುಪಿದೆ. ಮುಂದಿನ ದಿನಗಳಲ್ಲಿ ಗೋಧಿ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು. ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಸರ್ಕಾರ ಮಧ್ಯಸ್ಥಿಕೆವಹಿಸಬೇಕಿದೆ.
ದೇಶದ 548 ಜಿಲ್ಲೆಗಳನ್ನು ಆಯಾ ರಾಜ್ಯ ಸರ್ಕಾರಗಳು ಲಾಕ್ಡೌನ್ ಮಾಡಿವೆ. ರೈತರು ಬೆಳೆದ ಉತ್ಪನ್ನ ಮಾರುಕಟ್ಟೆಗೆ ತಲುಪುವುದರಲ್ಲಿ ವಿಳಂಬವಾಗ್ತಿದೆ. ಮತ್ತೊಂದು ಕಡೆ ಅಕಾಲಿಕ ಮಳೆಯಿಂದಾಗಿ ಬೆಳೆ ಇನ್ನು ರೈತರ ಕೈಗೆ ಸೇರಿಲ್ಲ. ಈ ಕಾರಣಗಳಿಂದ ಗೋಡೌನ್ ಗಳಲ್ಲಿ ಸಂಗ್ರಹಿಸಿದ್ದ ದಾಸ್ತಾನು ಕಡಿಮೆ ಆಗುತ್ತಿದೆ ಎನ್ನಲಾಗಿದೆ.
ಈ ಸಂಬಂಧ ಭಾರತೀಯ ಆಹಾರ ನಿಗಮಕ್ಕೆ (ಎಫ್ಸಿಐ) ಪತ್ರ ಬರೆದಿರುವ ರೋಲರ್ ಫ್ಲೋರ್ ಮಿಲ್ಲರ್ಸ್ ಫೆಡೆರಷನ್ ಆಫ್ ಇಂಡಿಯಾ ವಾಸ್ತವದ ಸ್ಥಿತಿಯ ಬಗ್ಗೆ ಹೇಳಿದೆ. ಪ್ರಾದೇಶಿಕ ಆಹಾರ ನಿಗಮಗಳಿಗೆ ಬಂದ ಗೋಧಿಯನ್ನು ನೇರವಾಗಿ ಮುಕ್ತ ಮಾರಾಟ ಯೋಜನೆ (ಓಎಂಎಸ್ಎಸ್-ಡಿ) ಮೂಲಕ ಫ್ಲೌರ್ ಮಿಲ್ಲರ್ ಗಳಿಗೆ ನೀಡುವಂತೆ ನಿಮ್ಮ ನಿರ್ದೇಶಕರಿಗೆ ಸೂಚಿಸಬೇಕು. ಇದರಿಂದ ಗೋಧಿ ಉತ್ಪನ್ನಗಳ ಕೊರತೆಯನ್ನು ಕಡಿಮೆ ಮಾಡಬಹುದು ಎಂದು ಪತ್ರದಲ್ಲಿ ವಿವರವಾಗಿ ತಿಳಿಸಿದೆ.
ಓಎಂಎಸ್ಎಸ್ (ಡಿ) ಮೂಲಕ ಖರೀದಿಸಿದ ಗೋಧಿಗೆ ನೀಡುವ ಹಣಕ್ಕೆ ಎರಡು ವಾರಗಳ ಅವಕಾಶ ನೀಡಬೇಕು. ಹಾಗೆ ಕನಿಷ್ಠ ಬೆಲೆಗೆ ಗೋಧಿಯನ್ನು ತಮಗೆ ಓಎಂಎಸ್ಎಸ್ (ಡಿ) ಯೋಜನೆ ಅಡಿಯಲ್ಲಿ ನೀಡಬೇಕು ಎಂದು ರೋಲರ್ ಫ್ಲೋರ್ ಮಿಲ್ಲರ್ಸ್ ಫೆಡೆರಷನ್ ಆಫ್ ಇಂಡಿಯಾ ಪತ್ರದಲ್ಲಿ ಮನವಿ ಮಾಡಿಕೊಂಡಿದೆ.
ದೇಶದಲ್ಲಿ ಲಾಕ್ಡೌನ್ ಸ್ಥಿತಿ ನಿರ್ಮಾಣವಾಗಿದ್ದು, ಎಫ್ಸಿಐ ಸರ್ಕಾರಕ್ಕೆ ವಾಸ್ತವ ಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಅಂತರಾಜ್ಯಗಳ ಗಡಿ ಬಂದ್ ಆಗಿದ್ದು, ಆಹಾರ ಉತ್ಪನ್ನಗಳನ್ನು ಸಾಗಿಸುವ ವಾಹನಗಳಿಗೆ ಗಡಿ ಮುಕ್ತಗೊಳಿಸಬೇಕು. ರೈತರು ಉತ್ಪಾದಿಸಿದ ಗೋಧಿ ಫ್ಲೋರ್ ಮಿಲ್ಲರ್ಸ್ ಗಳಿಗೆ ತಲುಪಬೇಕಾದ್ರೆ ಸರಕು ವಾಹನಗಳಿಗೆ ದೇಶದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಮುಕ್ತವಾಗಬೇಕಿದೆ ಎಂದು ತಿಳಿಸಿದೆ.