ಮಡಿಕೇರಿ ಕೊರೊನಾ ಪೀಡಿತ ಯಾವ ಸಮಯದಲ್ಲಿ ಎಲ್ಲೆಲ್ಲಿ ಹೋಗಿದ್ದ? – ಟ್ರಾವೆಲ್ ಮ್ಯಾಪ್ ಓದಿ

Public TV
2 Min Read

ಮಡಿಕೇರಿ: ಕೊರೊನಾ ಪಾಸಿಟಿವ್ ಪ್ರಕರಣದ ಸೋಂಕಿತ ವ್ಯಕ್ತಿ ಪ್ರಯಾಣ ಬೆಳೆಸಿದ್ದ ಎನ್ನಲಾದ ರಾಜಹಂಸ ಬಸ್ಸಿನಲ್ಲಿದ್ದ 33 ಮಂದಿ ಪ್ರಯಾಣಿಕರಲ್ಲಿ ಒಬ್ಬರೂ ಕೂಡ ಆಸನಗಳನ್ನು ಕಾಯ್ದಿರಿಸಿರಲಿಲ್ಲ ಎನ್ನುವ ವಿಚಾರ ಈಗ ಲಭ್ಯವಾಗಿದೆ.

ಮುಂಗಡ ಬುಕ್ಕಿಂಗ್ ಮಾಡಿಸದೆ ಇರುವುದರಿಂದ ಇನ್ನುಳಿದ 32 ಮಂದಿಯನ್ನು ಗುರುತಿಸುವುದೇ ಸವಾಲಾಗಿದೆ. ಕೊರೊನಾ ಪೀಡಿತ ವ್ಯಕ್ತಿಯ ಜೊತೆಗೆ 33 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು. ರಾಜಹಂಸ ಬಸ್‍ನಲ್ಲಿ ಮಾರ್ಚ್ 16 ರಂದು ಕೆ.ಎ.19 ಎಫ್ 3170 ಸಂಖ್ಯೆಯ ಬಸ್ಸಿನಲ್ಲಿ ಬಂದವರು ಸಹಾಯವಾಣಿ ನಂಬರ್‌ಗೆ ಕರೆ ಮಾಡುವಂತೆ ಮನವಿ ಮಾಡಲಾಗಿದೆ. ಕರೆ ಮಾಡಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಮನವಿ ಮಾಡಲಾಗಿದೆ.

ಸೋಂಕಿತ ವ್ಯಕ್ತಿಯ ಪ್ರಯಾಣದ ಮಾಹಿತಿ:
* ಮಾರ್ಚ್ 15 ರಂದು ದುಬೈನಿಂದ ಸಂಜೆ 4.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ.
* ಅಂದೇ ವಿಮಾನ ನಿಲ್ದಾಣದಿಂದ ಬಿಎಂಟಿಸಿ ಬಸ್ ಮೂಲಕ ಮೈಸೂರು ರಸ್ತೆಯಲ್ಲಿರುವ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಸಂಜೆ 6.30ರ ವೇಳೆಗೆ ಆಗಮನ.
* ರಾತ್ರಿ 7ರ ಹೊತ್ತಿಗೆ ಬೆಂಗಳೂರಿನ ಮಲ್ಲೇಶ್ವರಂ ಆಲ್‍ಬೇಕ್ ಹೋಟೆಲ್‍ಗೆ ಭೇಟಿ. ಅಲ್ಲಿ ಊಟ.
* ರಾತ್ರಿ 10ಕ್ಕೆ ಆಟೋದಲ್ಲಿ ಸ್ಯಾಟಲೈಟ್ ನಿಲ್ದಾಣಕ್ಕೆ ಆಗಮನ.
* ನಿಲ್ದಾಣದಲ್ಲಿ ರಾತ್ರಿ 11.30ರ ತನಕ ಕಾದು, ರಾಜಹಂಸ ಮೂಲಕ ಕೊಡಗಿನ ಮೂರ್ನಾಡಿಗೆ ಪ್ರಯಾಣ.
* ರಾತ್ರಿ 2.30ರ ಸುಮಾರಿಗೆ ಬಸ್ ನಿಲ್ದಾಣಕ್ಕೆ ಆಗಮನ.
* ಮಾರ್ಚ್ 16ರಂದು ಬೆಳಗ್ಗೆ ಮೂರ್ನಾಡಿಗೆ ಬಂದಿಳಿದ ವ್ಯಕ್ತಿ.

* ಅಂದೇ ಬೆಳಗ್ಗೆ 6ರಿಂದ 11ರ ತನಕ ಮನೆಯಲ್ಲಿ ವಾಸ್ತವ್ಯ.
* ಬೆಳಗ್ಗೆ 11.30ಕ್ಕೆ ಕುಂಜಿಲ ಗ್ರಾಮದಲ್ಲಿರುವ ಸಹೋದರಿಯ ಮನೆಗೆ ಕುಟುಂಬಸ್ಥರೊಂದಿಗೆ ಸ್ವಂತ ಕಾರಿನಲ್ಲಿ ಪ್ರಯಾಣ.
* ಮಧ್ಯಾಹ್ನ 2ರಿಂದ 3ರ ತನಕ ಕುಂಜಿಲ ಮಸೀದಿಗೆ ಭೇಟಿ.
* ಮಧ್ಯಾಹ್ನ 3ರಿಂದ ಸಂಜೆ 6ರ ನಡುವೆ ಗ್ರಾಮದ ಮತ್ತೊಬ್ಬರ ಮನೆಗೆ ಭೇಟಿ.
* ರಾತ್ರಿ 8ಕ್ಕೆ ಕೊಂಡಂಗೇರಿ ಮನೆಗೆ ಭೇಟಿ.
* ಮಾರ್ಚ್ 17ರಂದು ಸ್ವಂತ ಕಾರಿನಲ್ಲಿ ಸ್ನೇಹಿತನ ಜೊತೆಗೆ ಮಡಿಕೇರಿ ಜನರಲ್ ತಿಮ್ಮಯ್ಯ ವೃತ್ತಕ್ಕೆ ಆಗಮನ. ನಂತರ ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು.

ಸದ್ಯಕ್ಕೆ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಕೊಡಗಿನಲ್ಲಿ ಕೊರೊನಾ ವೈರಸ್ ಪತ್ತೆಯಾದ ವ್ಯಕ್ತಿಯ ಗ್ರಾಮದ 500 ಮೀಟರ್ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಿಸಲಾಗಿದ್ದು, ಗ್ರಾಮದ 306 ಜನರ ಜನರ ಮೇಲೆ ನಿಗಾ ವಹಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *