ಕೊರೊನಾ ಬಗ್ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ – ಕಿಚ್ಚನಿಗೆ ಚೇತನ್ ಟ್ವೀಟ್

Public TV
1 Min Read

ಬೆಂಗಳೂರು: ಕೊರೊನಾ ವೈರಸ್ ತಡೆಯುವ ಬಗ್ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ ಎಂದು ಆದಿನಗಳು ನಟ ಚೇತನ್ ಕುಮಾರ್ ಕಿಚ್ಚ ಸುದೀಪ್ ಅವರಿಗೆ ಟ್ವೀಟ್ ಮಾಡಿದ್ದಾರೆ.

ಸುದೀಪ್ ಅವರು ಭಾನುವಾರ ವಿಡಿಯೋ ಒಂದನ್ನು ಟ್ವೀಟ್ ಮಾಡಿ, ಸಂಜೆ 5 ಗಂಟೆಗೆ ಎಲ್ಲರೂ ಚಪ್ಪಾಳೆ ತಟ್ಟಲು ದಯವಿಟ್ಟು ಭಾಗವಹಿಸಿ. ಹೀಗೆ ಮಾಡಿದರೆ ನಾವು ಯಾವುದನ್ನಾದರೂ ಕಳೆದುಕೊಳ್ಳುತ್ತೇವೆಯೇ? ಇಲ್ಲವಲ್ಲ. ನಾವು ಗಳಿಸುತ್ತೇವೆಯೇ? ಬಹುಶಃ ಗಳಿಸಬಹುದು. ಆದರೆ ಕನಿಷ್ಠ ಪ್ರಯತ್ನಿಸೋಣ. ಎಲ್ಲವನ್ನೂ ಆಮೇಲೆ ಯೋಚಿಸೋಣ. ಇದು ನಮ್ಮ ಜೀವನಕ್ಕಾಗಿ ಎಂದು ಬರೆದುಕೊಂಡಿದ್ದರು.

ವಿಡಿಯೋದಲ್ಲಿ ಏನಿದೆ?
ಯುವತಿಯೊಬ್ಬರು ಮಾತನಾಡುತ್ತಾ, ‘ಚಪ್ಪಾಳೆ ತಟ್ಟುವುದನ್ನ ತುಂಬಾ ಲಘುವಾಗಿ ಪರಿಗಣಿಸಬೇಡಿ. ದಯವಿಟ್ಟು ಎಲ್ಲರೂ ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟಲು ಭಾಗವಹಿಸಿ. ಪ್ರಧಾನಿ ನರೇಂದ್ರ ಮೋದಿ ಅವರ ಈ ಸಂದೇಶದಿಂದ ಎನರ್ಜಿ ಮೆಡಿಸಿನ್ ಸೃಷ್ಟಿಯಾಗುತ್ತದೆ ಎಂದು ಎಲ್ಲರಿಗೂ ತಿಳಿಸೋಣ. ನಿಮ್ಮ ಬಾಲ್ಕನಿ, ಮನೆಯಲ್ಲಿ ಮಾತ್ರ ನೀವು ಸುರಕ್ಷಿತವಾಗಿರಲು ಸಾಧ್ಯ. ನಿಮಗಾಗಿ ಶ್ರಮಿಸುವವರಿಗೆ ಚಪ್ಪಾಳೆ ಮೂಲಕ ಧನ್ಯವಾದ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿತಿಯೆ ನೀಡಿರುವ ನಟ ಚೇತನ್, ಸುದೀಪ್ ಸರ್. ಸಿನಿಮಾ ಕ್ಷೇತ್ರದಲ್ಲಿ ನಿಮ್ಮ ಕೆಲಸವನ್ನು ನಾನು ಗೌರವಿಸುತ್ತೇನೆ. ವೈದ್ಯ ದಂಪತಿಯ ಮಗನಾಗಿ ನಮ್ಮ ವೈದ್ಯಕೀಯ ಸಿಬ್ಬಂದಿಯನ್ನು ಪ್ರಶಂಸಿಸಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಮೂಢನಂಬಿಕೆ ಮತ್ತು ತಪ್ಪು ಮಾಹಿತಿಯ ಹಾದಿಯಲ್ಲಿ ನಮ್ಮನ್ನು ಕೊಂಡೊಯ್ಯುವ ಇಂತಹ ಅವೈಜ್ಞಾನಿಕ ‘ಎನರ್ಜಿ ಮೆಡಿಸಿನ್’ ಸಿದ್ಧಾಂತಗಳನ್ನು ಹರಡುವುದರ ಮೂಲಕ ವೈದ್ಯರನ್ನು ಪ್ರಶಂಸಿಸುವುದು ಸರಿಯಲ್ಲ. ವಿಜ್ಞಾನದ ಮೂಲಕ ಕೊರೊನಾ ವೈರಸ್ ವಿರುದ್ಧ ಹೋರಾಡೋಣ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *