ಕಾರು, ಹೂವು ಭಟ್ಟರ ಸಾಲುಗಳು

Public TV
2 Min Read

ಬೆಂಗಳೂರು: ಯೋಗರಾಜ್ ಭಟ್ರು ಸಿನಿಮಾ, ಸಾಹಿತ್ಯದ ಜೊತೆಗೆ ಸಮಾಜದ ಆಗುಹೋಗುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬರಹಗಳ ಮೂಲಕ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಭಿಪ್ರಾಯ ಹಂಚಿಕೊಳ್ಳುವುದು ಮಾತ್ರವಲ್ಲ, ತಮ್ಮ ಸಾಲುಗಳ ಮೂಲಕ ಅಭಿಮಾನಿಗಳು ತಲೆ ಕೆಡಿಸಿಕೊಂಡು ಸ್ವಲ್ಪ ಹೊತ್ತು ಯೋಚಿಸುವಂತೆಯೂ ಮಾಡುತ್ತಾರೆ.

ಇದೇ ಮೊದಲಲ್ಲ ಹಲವು ಬಾರಿ ಹಲವು ಸಂಗತಿಗಳು ಕುರಿತು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುತ್ತಿರುತ್ತಾರೆ. ಗಾಳಿಪಟ-2 ಚಿತ್ರದ ಶೂಟಿಂಗ್‍ನಲ್ಲಿ ಭಟ್ಟರು ಬ್ಯುಸಿಯಾಗಿದ್ದರು. ಆದರೆ ಇದೀಗ ಕೊರೊನಾ ಭೀತಿ ಇರುವ ಕಾರಣ ಚಿತ್ರೀಕರಣವನ್ನು ನಿಲ್ಲಿಸಲಾಗಿದ್ದು, ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಇದರ ನಡುವೆಯೇ ಕೆಲ ಫೋಟೋಗಳು ಹಾಗೂ ಸಾಲುಗಳನ್ನು ಬರೆದಿರುವ ಪೋಸ್ಟ್‍ಗಳನ್ನು ಹಾಕುವ ಮೂಲಕ ತಲೆಯಲ್ಲಿ ಹುಳ ಬಿಡುತ್ತಿರುತ್ತಾರೆ.

ಯೋಗರಾಜ್ ಭಟ್ ನಿರ್ದೇಶನದ ಚಿತ್ರಗಳು ಡಿಫರೆಂಟ್ ಆಗಿರುತ್ತವೆ, ಯುವಕರಿಗೆ ಅಚ್ಚು ಮೆಚ್ಚು ಹಾಗೂ ಹುಚ್ಚು ಹಿಡಿಸುವಂತಿರುತ್ತವೆ. ಅವರ ಸಾಹಿತ್ಯದ ಹಾಡುಗಳೂ ಅಷ್ಟೇ ಯುವಕರಿಗೆ ತೀರಾ ಅಪ್ಯಾಯಮಾನವಾಗುತ್ತವೆ. ಹೀಗಾಗಿ ಭಟ್ಟರ ಸಾಹಿತ್ಯಕ್ಕೆ ಭಾರೀ ಬೇಡಿಕೆ ಇದೆ.

ಇದೀಗ ಕೊರೊನಾ ಭೀತಿಯಿಂದ ಉಂಟಾಗಿರುವ ತುರ್ತು ಪರಿಸ್ಥಿತಿ ಕುರಿತು ಇನ್‍ಸ್ಟಾಗ್ರಾಂನಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದು, ಕಾರಿನ ಮೇಲೆಲ್ಲ ಮರದ ಹೂವುಗಳು ಬಿದ್ದಿರುವ ಎರಡ್ಮೂರು ಫೋಟೋಗಳನ್ನು ಹಾಕಿದ್ದು, ಇದಕ್ಕೆ ‘ಆಯುಧ ಪೂಜೆ ದಿನ ಕಾರಿಗೆ ಅಂಗಡಿ ಹೂವು ಕೊರೊನಾ ಭಯಕ್ಕೆ ಈಗ ಒರಿಜಿನಲ್ ಹೂವು’ ಎಂದು ಬರೆದಿದ್ದಾರೆ. ಬಟ್ಟರು ಇಷ್ಟೇ ಬರೆದಿರುವುದು ಆದರೆ ಇದರ ಅರ್ಥ ಬಹುದೊಡ್ಡದು.

ಸರಿ ಇದ್ದಾಗ ಎಲ್ಲವೂ ಸರಿ ಇರುತ್ತದೆ, ಆದರೆ ಪರಿಸ್ಥಿತಿ ಕೆಟ್ಟರೆ ಎಲ್ಲವೂ ಕೆಡುತ್ತದೆ ಎಂಬುದನ್ನು ಹೇಳಿದ್ದಾರೆ. ಜನ ಹೊರಗೆ ಬಾರದ ಕಾರಣ ಕಾರುಗಳೂ ಸಹ ಅನಾಥವಾಗಿವೆ ಎಂಬುದು ಒಂದು ಬದಿಯಾದರೆ, ಇನ್ನೊಂದು ಬದಿಯಲ್ಲಿ ಪ್ರಕೃತಿಯೇ ಕಾರುಗಳಿಗೆ ಹೂವು ಹಾಕಿದೆ ಎಂಬುದಾಗಿದೆ.

ಈ ಹಿಂದೆ ಸಹ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಯೋಗರಾಜ್ ಭಟ್ ಅವರು ಕೊರೊನಾ ವೈರಸ್ ಬಗ್ಗೆ ಪೋಸ್ಟ್‍ವೊಂದನ್ನು ಅಪ್ಲೋಡ್ ಮಾಡಿದ್ದರು. ಪೋಸ್ಟ್‍ನಲ್ಲಿ, ‘ಅಕಸ್ಮಾತ್, ನರಮನುಷ್ಯರೆಲ್ಲಾ ಭೂಲೋಕಕ್ಕೆ ವೈರಸ್‍ಗಳಾಗಿದ್ದು, ಈ ಕೊರೊನಾ ಮನುಷ್ಯರನ್ನು ತೆಗೆಯಲು ಪ್ರಕೃತಿ ಸಿಡಿಸಿರುವ ‘ಔಷಧ’ ಆಗಿದ್ದರೆ ಏನು ಮಾಡುವುದು? ಎಂದು ಪ್ರಶ್ನೆ ಕೇಳಿ ನೆಟ್ಟಿಗರ ತಲೆಗೆ ಭಟ್ಟರು ಹುಳ ಬಿಟ್ಟಿದ್ದರು. ಅಲ್ಲದೇ ಇದು ನಾನು ಹೇಳಿದ್ದಲ್ಲ, ಯಾರೋ ಹೇಳಿದ್ದು ಎಂದು ಕೆಳಗೆ ಸೂಚನೆ ಬರೆಯುವ ಮೂಲಕ ಜಾಣತನ ಮೆರೆದಿದ್ದರು.

ಇದನ್ನು ಓದಿದವರಿಗೆ ಭಟ್ರು ಹೇಳುತ್ತಿರೋದು ನಿಜವಿರಬಹುದಾ ಎಂಬ ಪ್ರಶ್ನೆ ಕಾಡುತ್ತಿತ್ತು. ಮೇಲ್ನೋಟಕ್ಕೆ ಭಟ್ರು ಮಾತು ಉಡಾಫೆ, ತಮಾಷೆ ಮಾತಿನಂತೆ ಕಂಡರೂ ಇದರಲ್ಲಿ ಅರ್ಥಪೂರ್ಣವಾದ ಸಂದೇಶವಿತ್ತು. ಮನುಷ್ಯರು ಪ್ರಕೃತಿಯ ಮೇಲೆ ಎಸಗುತ್ತಿರುವ ದೌರ್ಜನ್ಯ ಅಂತ್ಯವಾಗುವುದು ಮಾನವನ ಅಂತ್ಯದೊಂದಿಗೆ, ಹೀಗಾಗಿ ಪ್ರಕೃತಿಯೇ ಮಾನವನ ಬಲಿ ಪಡೆಯುತ್ತದೆ ಎಂಬ ಗೂಡಾರ್ಥ ಯೋಗರಾಜ್ ಭಟ್ ಅವರ ಮಾತಿನಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *