ಗ್ರಾಮಕ್ಕೆ ಯಾರೂ ಬರಂಗಿಲ್ಲ, ದ್ವಾರಬಾಗಿಲಲ್ಲೇ ಕಾವಲು ಕುಳಿತ ಗ್ರಾಮಸ್ಥರು

Public TV
1 Min Read

– ಎಲ್ಲ ವ್ಯಾಪಾರಿಗಳಿಗೂ ನೋ ಎಂಟ್ರಿ
– ಬೇರೆ ಊರಲ್ಲಿರುವ ಗ್ರಾಮಸ್ಥರು ಅಲ್ಲೇ ಇರಿ, ಇಲ್ಲಿಗೆ ಬರಬೇಡಿ
– ಅಲ್ಲೇ ಹಬ್ಬ ಮಾಡಿ ಎಂದ ಗ್ರಾಮಸ್ಥರು

ಚಿಕ್ಕಮಗಳೂರು: ಕೊರೊನಾ ನಮ್ಮ ಊರಿಗೆ ಕಾಲಿಡೋದು ಬೇಡವೆಂದು ಗ್ರಾಮಸ್ಥರು ಆತಂಕದಿಂದ ಊರಿನ ದ್ವಾರಬಾಗಿಲಲ್ಲೇ ಕಾದು ಕೂತು ಗ್ರಾಮಕ್ಕೆ ಕಾಲಿಡುವ ವ್ಯಾಪಾರಿಗಳಿಗೆ ಗ್ರಾಮದ ಗಡಿಯಿಂದಲೇ ವಾಪಸ್ಸು ಕಳುಹಿಸುತ್ತಿದ್ದಾರೆ.

ತಾಲೂಕಿನ ಮತ್ತಾವರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಮುಖಂಡರ ತೀರ್ಮಾನದಂತೆ ನಾಲ್ಕೈದು ಜನ ಗ್ರಾಮದ ಮುಂಭಾಗದಲ್ಲಿರುವ ಹಳ್ಳಿಕಟ್ಟೆ ಮೇಲೆ ಕಾದು ಕೂತಿದ್ದಾರೆ. ಗ್ರಾಮಕ್ಕೆ ಯಾರೇ ಹೊಸಬರು ಕಾಲಿಟ್ಟರೂ ಅವರಿಗೆ ಕೊರೊನಾ ಬಗ್ಗೆ ತಿಳಿ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಐಸ್ ಕ್ರೀಂ ಮಾರುವವರು, ಪಾತ್ರೆ ವ್ಯಾಪಾರಿಗಳು, ಬಟ್ಟೆ, ಬಳೆ ಮಾರುವವರು ಸೇರಿದಂತೆ ಯಾರೊಬ್ಬರಿಗೂ ಗ್ರಾಮದೊಳಕ್ಕೆ ಬಿಡದಿರಲು ನಿರ್ಧರಿಸಿ ಕಾವಲು ಕಾಯುತ್ತಿದ್ದಾರೆ.

ಊರಿನ ಪ್ರತಿಯೊಬ್ಬರೂ ಗ್ರಾಮ ಬಿಟ್ಟು ಹೊರಗೆ ಹೋಗದಂತೆ ತೀರ್ಮಾನಿಸಿದ್ದಾರೆ. ನಾವು ಕೂಡ ಸ್ಥಳೀಯವಾಗಿ ಗ್ರಾಮದೊಳಗೆ ಓಡಾಡುತ್ತಿದ್ದೇವೆ. ಗ್ರಾಮ ಬಿಟ್ಟು ಹೊರಗೆ ಹೋಗುವುದಿಲ್ಲ. ದಿನ ಬಳಕೆಗೆ ಎಷ್ಟು ವಸ್ತುಗಳು ಬೇಕೋ ಅಷ್ಟು ವಸ್ತುಗಳನ್ನು ನಿನ್ನೆ-ಮೊನ್ನೆಯೇ ಖರೀದಿಸಿ ತಂದಿದ್ದೇವೆ. ಹಬ್ಬವನ್ನೂ ಸರಳವಾಗಿ ಮಾಡಲು ಗ್ರಾಮಸ್ಥರೆಲ್ಲಾ ತೀರ್ಮಾನಿಸಿದ್ದೇವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಈ ಕುರಿತು ಮಾಹಿತಿ ನೀಡಿದ್ದಾರೆ. ನೀವು ಇಲ್ಲಿಗೆ ಬರೋದು ಬೇಡ. ಎಲ್ಲಿದ್ದೀರೋ ಅಲ್ಲೆ ಇರಿ, ಹಬ್ಬಕ್ಕೂ ಬರುವುದು ಬೇಡ. ಇಲ್ಲಿಗೆ ಬಂದು ವ್ಯವಸ್ಥೆ ಹಾಳುಮಾಡೋದು ಬೇಡ ಎಂದಿದ್ದಾರೆ.

ಅಲ್ಲದೆ ಪಾಳಿ ವ್ಯವಸ್ಥೆಯಲ್ಲಿ ಗ್ರಾಮಸ್ಥರು ಗ್ರಾಮವನ್ನ ಕಾಯುತ್ತಿದ್ದಾರೆ. ಪ್ರತಿ ಎರಡ್ಮೂರು ಗಂಟೆಗೊಮ್ಮೆ ಬದಲಾಗುತ್ತಿದ್ದು, ಎರಡ್ಮೂರು ಗಂಟೆ ಬಳಿಕ ಮತ್ತೊಂದು ಟೀಂ ಕಾಯುತ್ತದೆ. ಕೊರೊನಾ ವೈರಸ್ ಒಂದು ಹಂತಕ್ಕೆ ಬರುವವರೆಗೂ ಪ್ರತಿ ದಿನ ಗ್ರಾಮವನ್ನು ಕಾಯ್ತೀವಿ ಎಂದು ತಮ್ಮ ಗ್ರಾಮವನ್ನ ಕೊರೊನಾದಿಂದ ರಕ್ಷಿಸಿಕೊಳ್ಳಲು ಗ್ರಾಮಸ್ಥರೇ ಟೊಂಕ ಕಟ್ಟಿ ನಿಂತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *