ಮಹಾಮಾರಿ ಕೊರೊನಾ ಭೀತಿ- ಮಣಿಪಾಲ ವಿವಿಗೆ 15 ದಿನ ರಜೆ

Public TV
1 Min Read

ಉಡುಪಿ: ಕರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಒಂದು ವಾರ ಹೈ ಅಲರ್ಟ್ ಘೋಷಿಸಿದೆ. ಇದೀಗ ಜಿಲ್ಲೆಯ ಮಣಿಪಾಲ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಎರಡು ವಾರಗಳ ಕಾಲ ರಜೆ ಘೋಷಿಸಿದೆ.

ವಿವಿಯ ಸಾವಿರಾರು ವಿದ್ಯಾರ್ಥಿಗಳು ವಿದೇಶದ ಸಂಪರ್ಕ ಹೊಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಆದೇಶವನ್ನು ಹೊರಡಿಸಿದೆ. ಹೊರ ರಾಜ್ಯದ ವಿದ್ಯಾರ್ಥಿಗಳು ಮಣಿಪಾಲದಿಂದ ತಮ್ಮ ರಾಜ್ಯಗಳಿಗೆ ತೆರಳಿದ್ದು, ವಿದೇಶದ ವಿದ್ಯಾರ್ಥಿಗಳು ಮಣಿಪಾಲದಲ್ಲೇ ಉಳಿದುಕೊಳ್ಳುವ ಸೂಚನೆಯನ್ನು ವಿವಿ ಕೊಟ್ಟಿದೆ. ಇಂಗ್ಲಿಷ್ ಮಾತನಾಡುವ ಐವತ್ನಾಲ್ಕು ದೇಶದ ವಿದ್ಯಾರ್ಥಿಗಳು ಶಿಕ್ಷಣವನ್ನು ಅರಸಿ ಮಣಿಪಾಲಕ್ಕೆ ಬಂದಿದ್ದಾರೆ. ವಿಶ್ವದ ಒಟ್ಟು 60 ದೇಶಗಳ ವಿದ್ಯಾರ್ಥಿಗಳು ಮಣಿಪಾಲದ ಮಾಹೆ ವಿವಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲದೆ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಈಶಾನ್ಯ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಎಂಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಕೂಡ ಸಾಕಷ್ಟು ಜನ ಇದ್ದಾರೆ. ಮಣಿಪಾಲ ವಿವಿಯ ವಿದ್ಯಾರ್ಥಿಗಳು ಇಂಟರ್ನ್‍ಶಿಪ್, ಪೇಪರ್ ಪ್ರಸೆಂಟೇಷನ್ ಗಾಗಿ ವಿದೇಶ ಪ್ರವಾಸ ಮಾಡುತ್ತಿರುತ್ತಾರೆ. ವಿದೇಶಿ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ ತಮ್ಮ ದೇಶಗಳಿಗೆ ತೆರಳುತ್ತಾರೆ. ಕಾನ್ವೊಕೇಷನ್, ವಾರ್ಷಿಕೋತ್ಸವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆತ್ತವರು ವಿದೇಶದಿಂದ ಮಣಿಪಾಲಕ್ಕೆ ಆಗಮಿಸುತ್ತಾರೆ. ಹೀಗಾಗಿ ವಿವಿ ಎಚ್ಚರಿಕೆ ಕ್ರಮ ವಹಿಸಿದೆ.

ವಿದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ರಜೆಯಲ್ಲಿ ವಿದೇಶ ಪ್ರವಾಸ ಮಾಡುವುದಕ್ಕೆ ವಿವಿ ತಡೆಯೊಡ್ಡಿದೆ. ಹದಿನೈದು ದಿನಗಳ ಕಾಲ ರಜೆ ನೀಡಿದ್ದು, ಹೊರ ರಾಜ್ಯದ ವಿದ್ಯಾರ್ಥಿಗಳನ್ನು ತಮ್ಮ ರಾಜ್ಯಗಳಿಗೆ ವಾಪಸ್ ಕಳುಹಿಸಿದೆ. ಕರೊನಾ ವೈರಸ್ ಹತೋಟಿಗೆ ಬಂದ ನಂತರ ಅಂದರೆ ಮಾರ್ಚ್ ಮೂವತ್ತರ ನಂತರ ವಾಪಸ್ ಮಣಿಪಾಲಕ್ಕೆ ಬರುವಂತೆ ಆದೇಶ ಹೊರಡಿಸಿದೆ. ಮಣಿಪಾಲ ವಿವಿಯ ಎಲ್ಲ ಬ್ರಾಂಚ್ ಗಳಿಗೂ ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ.

ವಿದ್ಯಾರ್ಥಿನಿಲಯ, ತರಗತಿ, ಜಿಮ್, ಕ್ಯಾಂಟೀನ್ ಮುಂತಾದ ಸ್ಥಳಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೇರುವುದರಿಂದ ಆರೋಗ್ಯ ಸಮಸ್ಯೆ ಬಾಧಿಸದಿರಲಿ ಎಂಬ ಉದ್ದೇಶದಿಂದ ವಿವಿ ಈ ಕ್ರಮ ವಹಿಸಿ, ರಜೆ ಘೋಷಿಸಿದೆ.

Share This Article
Leave a Comment

Leave a Reply

Your email address will not be published. Required fields are marked *