ತಬ್ಲಿಘಿಗಳ ನೆಗೆಟಿವ್ ವರದಿ ಬಗ್ಗೆ ಡಿಸಿ ಅನುಮಾನ- ನಕಲಿ ದಾಖಲೆ ಸೃಷ್ಟಿ ಸಾಧ್ಯತೆ

Public TV
1 Min Read

ತುಮಕೂರು: ಗುಜರಾತಿನಿಂದ ಬಂದ ತಬ್ಲಿಘಿಗಳ ನೆಗೆಟಿವ್ ವರದಿ ಬಗ್ಗೆ ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅನುಮಾನ ವ್ಯಕ್ತಪಡಿಸಿದ್ದು, ನಕಲಿ ದಾಖಲೆ ಸೃಷ್ಟಿಸಿ ರಾಜ್ಯಕ್ಕೆ ಪ್ರವೇಶಿಸಿದ್ದಾರಾ ಎಂಬ ಅನುಮಾನವನ್ನು ಹೊರ ಹಾಕಿದ್ದಾರೆ.

ಗುಜರಾತ್‍ನ ಅಹಮದಾಬಾದ್ ನಿಂದ ಬಂದ ತಬ್ಲಿಘಿಗಳ ಬಳಿ ಕೊರೊನಾ ನೆಗೆಟಿವ್ ಡಾಕ್ಯುಮೆಂಟ್ ಇತ್ತಾ ಅಥವಾ ನಕಲಿ ದಾಖಲೆ ಸೃಷ್ಟಿಸಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದಾರಾ ಎಂಬ ಚರ್ಚೆ ಇದೀಗ ನಡೆಯುತ್ತಿದೆ. ಈ ಕುರಿತು ಸ್ವತಃ ಜಿಲ್ಲಾಧಿಕಾರಿಗಳೇ ಅನುಮಾನ ವ್ಯಕ್ತಪಡಿಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಅಹಮದಾಬಾದ್ ನಿಂದ ಬಂದವರು ನಕಲಿ ದಾಖಲೆ ಹೊಂದಿರುವ ಸಾಧ್ಯತೆ ಇದೆ. ಈ ಕುರಿತು ಪರಿಶೀಲನೆ ನಡೆಯುತ್ತಿದೆ. ಅಹಮದಾಬಾದ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. 13 ಜನರಲ್ಲಿ 3 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಮಾಹಿತಿಯನ್ನು ಅಹಮದಾಬಾದ್ ನ ಕಲೆಕ್ಟರ್ ಗೂ ಕಳುಹಿಸಲಾಗಿದೆ. ರಾಜ್ಯ ಸರ್ಕಾರಕ್ಕೂ ಇವರ ಮಾಹಿತಿ ಕಳುಹಿಸಿದ್ದೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಹಮದಾಬಾದ್ ಕಲೆಕ್ಟರ್ ನಿಂದ ತರಿಸಿಕೊಳ್ಳಲಾಗುತ್ತಿದೆ. ತಬ್ಲಿಘಿಗಳು ನೀಡಿದ ಮಾಹಿತಿ ತಪ್ಪಿದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪಾವಗಡದಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದ ರಾಜ್ಯದ 13 ಜನರ ವರದಿ ನೆಗೆಟಿವ್ ಎಂದು ಹೇಳಲಾಗಿತ್ತು. ಇವರಿಗೆ ಅಹಮದಾಬಾದ್ ನಲ್ಲೇ ಪರೀಕ್ಷೆ ಮಾಡಿದ ವರದಿ ಇತ್ತು. ಈಗ ಕರ್ನಾಟಕದಲ್ಲಿ ಪರೀಕ್ಷೆ ಮಾಡಿದಾಗ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ನಕಲಿ ದಾಖಲೆ ಸೃಸ್ಟಿಸಿ ಇಲ್ಲಿಗೆ ಬಂದಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಈ ಮೂಲಕ ತುಮಕೂರು ಜಿಲ್ಲಾಧಿಕಾರಿ ಮಹತ್ವದ ಸುಳಿವು ನೀಡಿದ್ದಾರೆ.

ತುಮಕೂರಿನಲ್ಲಿ ಶನಿವಾರ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 11 ಪ್ರಕರಣಗಳು ದೃಢಪಟ್ಟಿವೆ. ಅಹಮದಾಬಾದ್‍ನಿಂದ ಒಟ್ಟು 33 ಜನ ಚಿತ್ರದುರ್ಗ ಹಾಗೂ ತುಮಕೂರಿಗೆ ಆಗಮಿಸಿದ್ದಾರೆ. ಇವರೆಲ್ಲರನ್ನೂ ಟ್ವಾರಂಟೈನ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *