ಧಾರವಾಡದ ಮತ್ತೋರ್ವ ಕೊರೊನಾ ಸೋಂಕಿನಿಂದ ಗುಣಮುಖ- ಆಸ್ಪತ್ರೆಯಿಂದ ಡಿಸ್ಚಾರ್ಜ್

Public TV
1 Min Read

ಧಾರವಾಡ: ಜಿಲ್ಲೆಯಲ್ಲಿ ಮತ್ತೊಬ್ಬ ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯ ಇಬ್ಬರು ಕೊರೊನಾದಿಂದ ಗುಣಮುಖರಾದಂತಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿ ಗುಣಮುಖನಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿರುವ ಕುರಿತು ಜಿಲ್ಲಾಧಿಕಾರಿ ದೀಪಾ ಚೋಳನ್ ಮಾಹಿತಿ ನೀಡಿದ್ದಾರೆ. ದೆಹಲಿ ಪ್ರವಾಸದಿಂದ ಮರಳಿ ಬಂದಿದ್ದ ಹುಬ್ಬಳ್ಳಿ ಮುಲ್ಲಾ ಓಣಿಯ 27 ವರ್ಷದ ವ್ಯಕ್ತಿಗೆ (ರೋಗಿ ನಂ.194) ಕೊರೊನಾ ಸೋಂಕು ತಗುಲಿರುವುದು ಏಪ್ರಿಲ್ 9 ರಂದು ದೃಢಪಟ್ಟಿತ್ತು.

ವ್ಯಕ್ತಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಉತ್ತಮ ಚಿಕಿತ್ಸೆ ದೊರೆತ ಪರಿಣಾಮ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಏಪ್ರಿಲ್ 20 ಹಾಗೂ 21 ರಂದು 24 ಗಂಟೆಗಳ ಅಂತರದಲ್ಲಿ ಎರಡು ಬಾರಿ ಅವರ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿದ್ದು, ಎರಡೂ ಬಾರಿಯು ನೆಗೆಟಿವ್ ವರದಿ ಬಂದಿದೆ. ಎಕ್ಸ್ ರೇ ಮೂಲಕ ಶ್ವಾಸಕೋಶದ ಆರೋಗ್ಯ ಸುಸ್ಥಿತಿಯಲ್ಲಿರುವದನ್ನು ಖಚಿತಪಡಿಸಿಕೊಂಡು ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ರೋಗಿ ನಂ.194 ಯಿಂದ ಸಹೋದರ, ಸಹೋದರನ ಮೂವರು ಮಕ್ಕಳು, ಸಹೋದರಿ ಹಾಗೂ ಸಹೋದರಿಯ ಪುತ್ರಿಗೂ ಸೋಂಕು ಹರಡಿದೆ. ಅಲ್ಲದೆ ಇತನ ಸಹೋದರನಿಂದ ಸ್ಮಶಾನ ಕಾಯೋ ವ್ಯಕ್ತಿಗೂ ಸೋಂಕು ತಗುಲಿದ್ದು, ಇವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆದರೆ 8 ಜನರಿಗೆ ಸೋಂಕು ಹರಡಿಸಿದ ವ್ಯಕ್ತಿ ಇದೀಗ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 9 ಜನರಲ್ಲಿ ಸೋಂಕು ದೃಢಪಟ್ಟಿದೆ. ಅವರಲ್ಲಿ ಇಬ್ಬರು ಗುಣಮುಖರಾಗಿದ್ದಾರೆ. ಉಳಿದ 7 ಜನರಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *