ಕಿಲ್ಲರ್ ಕೊರೊನಾಗೆ ಕಲಬುರಗಿ ಸ್ತಬ್ಧ-ಓರ್ವ ಬಲಿಯಾದ್ರು ಕಾಣಿಸ್ತಿಲ್ಲ ಉಸ್ತುವಾರಿ ಸಚಿವ?

Public TV
1 Min Read

-‘ಕ್ರೂರಿ’ಯ ಕೇಕೆಗೆ ಭಯಬಿದ್ರಾ ಗೋವಿಂದ ಕಾರಜೋಳ?

ಕಲಬುರಗಿ: ಮಹಾಮಾರಿ ಕೊರೊನಾ ಕಾಯಿಲೆಯಿಂದ ಕಲಬುರಗಿ ಜಿಲ್ಲೆಯ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಈ ವೇಳೆ ಜನತೆಯ ಹಿತ ಕಾಪಾಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕೊರೋನಾ ಕಾಯಿಲೆಗೆ ಹೆದರಿ ಕಲಬುರಗಿಗೇ ಬರುತ್ತಿಲ್ಲ. ಸಚಿವರ ಈ ನಡೆ ಇದೀಗ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಲಬುರಗಿ ಜಿಲ್ಲಾಡಳಿತ ಕೊರೊನಾ ತುರ್ತುಪರಿಸ್ಥಿತಿಯನ್ನೇ ಘೋಷಣೆ ಮಾಡಿದೆ. ಈ ಸಮಯದಲ್ಲಿ ಜಿಲ್ಲೆಯ ಜನರ ಜೊತೆ ನಿಂತು ಕೊರೊನಾ ಕಾಯಿಲೆ ತಡೆಗಟ್ಟಲು ಕ್ರಮ ಜರುಗಿಸಬೇಕಾಗಿದ್ದ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಒಮ್ಮೆಯೂ ಕಾಣಿಸಿಕೊಂಡಿಲ್ಲ. ಇದನ್ನ ನೋಡಿದ್ರೆ, ಉಸ್ತುವಾರಿ ಸಚಿವರು ಕೊರೋನಾಗೆ ಹೆದರಿದ್ದಾರಾ ಅನ್ನೋ ಪ್ರಶ್ನೆ ಮೂಡುತ್ತಿದೆ.

ಮಾರ್ಚ್ 10ರಂದು ಈ ಮಹಾಮಾರಿ ಕಾಯಿಲೆಯಿಂದ ನಗರದ ವೃದ್ಧ ಸಾವನಪ್ಪಿದ್ದರು. ಈಗ ಆತನ ಕುಟುಂಬದ ವ್ಯಕ್ತಿಗೂ ಕೊರೊನಾ ಸೋಂಕು ತಗಲಿರೋದು ದೃಢಪಟ್ಟಿದೆ. ಇಷ್ಟಾದರೂ ಜಿಲ್ಲೆಯ ಜನರಿಗೆ ಧೈರ್ಯನೀಡಿ ಮುಂಜಾಗೃತ ಕ್ರಮ ಜರುಗಿಸಬೇಕಾದ ಉಪಮುಖ್ಯಮಂತ್ರಿಗಳು ಕಲಬುರಗಿಗೆ ಬರಲೇ ಇಲ್ಲ. ಬದಲಿಗೆ ಬೆಳಗಾವಿಯಲ್ಲಿ ನಡೆದ ಎಂಎಲ್‍ಸಿ ಮಹಾಂತೇಶ್ ಕವಟಗಿಮಠ ಅವರ ಮಗಳ ಮದುವೆಗೆ ಹೋಗಿ ಸಮಯ ಕಳಿತಾರೆ ನಗರದ ನಿವಾಸಿ ನಾಗಲಿಂಗಯ್ಯ ಆಕ್ರೋಶ ಹೊರ ಹಾಕುತ್ತಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ, ಜಿಲ್ಲಾಡಳಿತವೇ ತನ್ನ ಇತಿ-ಮಿತಿಯಲ್ಲಿ ಚೀನಾ ಕಾಯಿಲೆಯನ್ನ ತಡೆಯಲು ಹರಸಾಹಸಪಡಿತ್ತಿದೆ. ಆದರೂ ಹತೋಟಿಗೆ ಬರಲು ಕಷ್ಟವಾಗ್ತಿದೆ. ಈ ಸಮಯದಲ್ಲಿ ಅಧಿಕಾರಿಗಳಿಗೆ ಸಾಥ್ ನೀಡಬೇಕಾದ ಜಿಲ್ಲಾ ಉಸ್ತುವರಿ ಸಚಿವರು, ತಮಗೆ ಯಾವುದೇ ಸಂಬಂಧವಿಲ್ಲವಂತೆ ದೂರ ಉಳಿದುಕೊಂಡಿದ್ದಾರೆ.

ಇಡೀ ವಿಶ್ವವೇ ಕೊರೊನಾ ವಿರುದ್ಧ ಸಮರಕ್ಕೆ ತಲೆಕೆಡೆಸಿಕೊಂಡು ನಿಂತಿದೆ. ಆದ್ರೆ ಗೋವಿಂದ ಕಾರಜೋಳ ಮಾತ್ರ ಡೋಂಟ್‍ಕೇರ್ ಧೋರಣೆ ತಾಳಿರೋದು ಜಿಲ್ಲೆಯ ಜನರನ್ನ ರೊಚ್ಚಿಗೇಳಿಸಿದೆ. ಸಾಹಿತ್ಯ ಸಮ್ಮೇಳನ ಬಳಿಕ ಒಮ್ಮೆಯೂ ಜಿಲ್ಲೆಯತ್ತ ಮುಖ ಮಾಡದ ಕಾರಜೋಳ ಅವರನ್ನು ಕೂಡಲೇ ಉಸ್ತುವಾರಿ ಸಚಿವ ಸ್ಥಾನದಿಂದ ತೆಗೆಯಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *