ರಂಗಿನ ಹಬ್ಬಕ್ಕೂ ಕೊರೊನಾ ಬ್ರೇಕ್ – ಬಣ್ಣದ ಹಬ್ಬದ ಬೆನ್ನಲ್ಲೇ ಸಿಎಂ ಸಂದೇಶ

Public TV
1 Min Read

– ಧಾರವಾಡದಲ್ಲಿ ಹೋಳಿಗೆ ಗುಡಬೈ

ಬೆಂಗಳೂರು: ಇಂದು ಬಣ್ಣಗಳ ಹಬ್ಬ ಹೋಳಿ. ಭಾರತೀಯರ ಪಾಲಿಗೆ ಅತ್ಯಂತ ವಿಶಿಷ್ಟವಾದ ದಿನ. ಆದರೆ ಕೊರೊನಾ ವೈರಸ್ ಹೋಳಿಯನ್ನೂ ಆವರಿಸಿಕೊಂಡಿದೆ. ಕೊರೊನಾ ವೈರಸ್ ಎಫೆಕ್ಟ್ ಹಿನ್ನೆಲೆಯಲ್ಲಿ ಹೋಳಿ ಹಬ್ಬದ ಆಚರಣೆಯ ಚಿತ್ರಣವೇ ಮಾಯವಾಗಿದೆ.

ಪ್ರತಿ ವರ್ಷ ಚಿಕ್ಕಪೇಟೆ ಮುಖ್ಯ ರಸ್ತೆಗಳಲ್ಲಿ ಸಂಭ್ರಮದಿಂದ ಹೋಳಿ ಆಚರಣೆ ಇರುತ್ತಿತ್ತು. ಈ ಬಾರಿ ಹೋಳಿ ಆಚರಿಸಿದರೆ ಕೊರೊನಾ ವೈರೆಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಆಚರಣೆಗೆ ಫುಲ್ ಬ್ರೇಕ್ ಬಿದ್ದಿದೆ. ಅಷ್ಟೇ ಅಲ್ಲದೇ ಸಿಎಂ ಯಡಿಯೂರಪ್ಪ ಕೂಡ ಹೋಳಿ ಹಬ್ಬದ ದಿನವೇ ಜನರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.

“ನಾಡಿನ ಸಮಸ್ತ ಜನರಿಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬಣ್ಣದ ಓಕುಳಿಯ ರಂಗು ನಮ್ಮೆಲ್ಲರ ಬಾಳನ್ನು ಅರ್ಥಪೂರ್ಣವಾಗಿ ತುಂಬಲಿ. ಬಣ್ಣ ಮೈಮೇಲಿರುವುದಕ್ಕಿಂತ ಮುಖ್ಯವಾಗಿ ಬದುಕಿನಲ್ಲಿರಲಿ. ಸುರಕ್ಷಿತ ಆಚರಣೆಗೆ ಮಹತ್ವ ಕೊಡೋಣ. ಸಾಂಕ್ರಾಮಿಕ ರೋಗದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಸಮೂಹ ಆಚರಣೆಗಳಿಂದ ದೂರವಿರೋಣ” ಎಂದು ಸಿಎಂ ಟ್ವೀಟ್ ಮಾಡುವ ಮೂಲಕ ಸಂದೇಶ ರವಾನಿಸಿದ್ದಾರೆ.

ಇತ್ತ ಚೀನಾದಿಂದ ಹೋಳಿ ಬಣ್ಣ ಆಮದು ಎಂಬ ವದಂತಿ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಹೋಳಿ ಸಂಭ್ರಮವ ಇಲ್ಲದಂತಾಗಿದೆ. ಕೊರೊನಾಗೆ ಬೆಚ್ಚಿ ಹೋಳಿಹಬ್ಬವನ್ನು ವಿದ್ಯಾರ್ಥಿನಿಯರು ಕೈ ಬಿಟ್ಟಿದ್ದಾರೆ. ಪ್ರತಿ ವರ್ಷ ಹೋಳಿಯಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಮಿಂದೇಳುತ್ತಿದ್ದರು. ಈ ಬಾರಿ ಕೊರೊನಾಗೆ ಹೆದರಿ ಹಬ್ಬ ಮಾಡದೆ ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿದ್ದಾರೆ.

ಇನ್ನೂ ಧಾರವಾಡ ಜಿಲ್ಲೆಯ ಕೆಲ ಗ್ರಾಮದವರು ಹೋಳಿ ಬಣ್ಣಕ್ಕೆ ಗುಡ್‍ಬೈ ಹೇಳಿದ್ದಾರೆ. ಧಾರವಾಡ ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಬಣ್ಣ ಆಡದಿರಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ಧಾರವಾಡ ಜಿಲ್ಲೆಯ ಕವಲಗೇರಿ ಗ್ರಾಮ ಪಂಚಾಯಿತಿಯಿಂದಲೇ ಗ್ರಾಮದಲ್ಲಿ ಡಂಗುರ ಹೊಡೆಸಿ ಹೋಳಿ ಹಬ್ಬದ ದಿನ ಬಣ್ಣ ಆಡಬಾರದು ಎಂದು ಸಾರಿದ್ದಾರೆ. ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಬಣ್ಣ ಆಡುವುದನ್ನು ನಿಷೇಧಿಸಿದ ಬಗ್ಗೆ ಡಂಗುರ ಸಾರಿ ಹೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *