ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ ಪೇದೆ ಆತ್ಮಹತ್ಯೆ

Public TV
1 Min Read

ಚೆನ್ನೈ: ಪೋಷಕರು ತನ್ನ ಪ್ರೀತಿಯನ್ನು ನಿರಾಕರಿಸಿದ್ದರೆಂದು ಮನನೊಂದು ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯ ಉಸಿಲಂಪಟ್ಟಿ ಗ್ರಾಮದ ಬಳಿ ನಡೆದಿದೆ.

27 ವರ್ಷದ ವಿ ಸತೀಶ್ ಆತ್ಮಹತ್ಯೆಗೆ ಶರಣಾದ ಪೇದೆಯಾಗಿದ್ದು, ಈತ ನಕ್ಕಲಪಟ್ಟಿ ಗ್ರಾಮದ ನಿವಾಸಿಯಾಗಿದ್ದು ಊಟಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ.

ಎರಡು ವಾರಗಳ ಹಿಂದೆ ಸತೀಶ್ ರಜೆಯ ಮೇಲೆ ಊರಿಗೆ ಬಂದಿದ್ದನು. ಸತೀಶ್ ತನ್ನದೇ ಸಮುದಾಯದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಈ ವಿಚಾರವನ್ನು ಇತ್ತೀಚೆಗಷ್ಟೇ ಸತೀಶ್ ತನ್ನ ಪೋಷಕರಲ್ಲಿ ಹೇಳಿಕೊಂಡಿದ್ದನು. ಅಲ್ಲದೇ ಆಕೆಯನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದನು. ಆದ್ರೆ ಹೆತ್ತವರು ಮಗನ ಪ್ರೀತಿಗೆ ಒಪ್ಪಿಗೆ ಸೂಚಿಸದೆ ಮದುವೆಯನ್ನು ನಿರಾಕರಿಸಿದ್ರು.

ಇತ್ತ ಯುವತಿ ಮನೆಯವರು ಬೇಗ ಮದುವೆಯಾಗು ಇಲ್ಲವೆಂದಲ್ಲಿ ಮಗಳಿಗೆ ಬೇರೆ ವರ ಹುಡುಕುವುದಾಗಿ ಒತ್ತಾಯಿಸುತ್ತಿದ್ದರು. ಇದರಿಂದ ಗೊಂದಲಕ್ಕೀಡಾದ ಯುವಕ ಆಕೆಯನ್ನೇ ಮದುವೆಯಾಗುವುದಾಗಿ ಹೇಳಿ ಪೋಷಕರನ್ನು ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಈತ ಏನೇ ಮಾಡಿದ್ರೂ ಪ್ರೀತಿಸುತ್ತಿರುವ ಯುವತಿ ಜೊತೆ ಮದುವೆ ಮಾಡಲು ಸತೀಶ್ ಪೋಷಕರು ಸುತಾರಾಂ ಒಪ್ಪಲಿಲ್ಲ. ಇದರಿಂದ ನೊಂದ ಸತೀಶ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ.

ಮಂಗಳವಾರ ರಾತ್ರಿ ತನ್ನ ಕೋಣೆಯೊಳಗೆ ತೆರಳಿ ಸತೀಶ್ ಬಾಗಿಲು ಹಾಕಿಕೊಂಡಿದ್ದಾನೆ. ಕೋಣೆಯೊಳಗೆ ತೆರಳಿ ಬಾಗಿಲು ಹಾಕಿಕೊಂಡ ಮಗ ಹೊರಗೆ ಬಾರದೇ ಇದ್ದರಿಂದ ಆತಂಕಗೊಂಡ ಪೋಷಕರು ಆತನ ಮೊಬೈಲ್ ಗೆ ಕರೆ ಮಾಡಿದ್ದಾರೆ. ಸತೀಶ್ ಕರೆ ಸ್ವೀಕರಿಸಲಿಲ್ಲ. ಇದರಿಂದ ಮತ್ತಷ್ಟು ಆತಂಕಗೊಂಡ ಪೋಷಕರು ಕೋಣೆಯ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಈ ವೇಳೆ ಸತೀಶ್ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಉಸಿಲಂಪಟ್ಟಿ ಜಿಲ್ಲಾಸ್ಪತ್ರೆಗೆ ಸತೀಶ್ ಮೃತದೇಹವನ್ನು ರವಾನಿಸಲಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *