ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ಹೆಗಲ ಮೇಲೆ 4 ಕಿ.ಮೀ ಹೊತ್ತುಕೊಂಡು ಹೋದ ಪೇದೆ

Public TV
1 Min Read

ಹೈದರಾಬಾದ್: ಆಂಧ್ರ ಪ್ರದೇಶದ ಕಡಪದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ಪೇದೆ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಮಾನವೀಯತೆ ತೋರಿಸಿದ್ದಾರೆ.

ಮಾಜಿ ಶಾಸಕ ಅಕಪತಿ ಅಮರನಾಥ ರೆಡ್ಡಿ ಜೊತೆ ಹಲವು ಮಂದಿ ತಿರುಪತಿಗೆ ಹೋಗಿದ್ದರು. ಇದರಲ್ಲಿ ಒಬ್ಬ ಮಹಿಳೆ ಕೂಡ ಭಾಗಿಯಾಗಿದ್ದು, ನಡೆದುಕೊಂಡು ಹೋಗುವಾಗ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಯಾತ್ರಿಗಳಿಗೆ ಇಲ್ಲಿ ಯಾವುದೇ ವಾಹನ ಕೂಡ ಇರಲಿಲ್ಲ. ಹಾಗಾಗಿ ಎಲ್ಲರೂ ನಡೆದುಕೊಂಡು ಹೋಗುತ್ತಿದ್ದರು.

ಮಹಿಳೆಯ ಸ್ಥಿತಿ ನೋಡಿದ ಮಾಜಿ ಶಾಸಕರ ಭದ್ರತಾ ಸಿಬ್ಬಂದಿ ಕುಲ್ಲಯಪ್ಪ ಮಹಿಳೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು 4 ಕಿ.ಮೀ ನಡೆದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಸದ್ಯ ಮಹಿಳೆ ತಿರುಮಲದ ಅಶ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ಪೇದೆ ಅವರ ಈ ಕರ್ತವ್ಯಕ್ಕೆ ಎಸ್‍ಪಿ ಕೆಕೆಎನ್ ಅನ್ಬುರಾಜನ್ ಶ್ಲಾಘಿಸಿದ್ದಾರೆ. ಅಲ್ಲದೆ ಕುಲ್ಲಯಪ್ಪ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಎಲ್ಲರಿಗೂ ಸಹಾಯ ಮಾಡಬೇಕು ಎಂದು ತಮ್ಮ ಪೊಲೀಸ್ ಸಿಬ್ಬಂದಿಗೆ ಸಲಹೆ ನೀಡಿದ್ದರು.

ಪೇದೆ ಮಹಿಳೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಪೇದೆಯನ್ನು ಹೊಗಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *