ಬೆಂಗಳೂರು: ಸಿಎಂ, ಡಿಸಿಎಂ ಫುಟ್ಪಾತ್ ಗಿರಾಕಿಗಳು, ಅದಕ್ಕೆ ರಾಹುಲ್ ಗಾಂಧಿ (Rahul Gandhi) ಫುಟ್ಪಾತ್ನಲ್ಲಿ ನಿಲ್ಲಿಸಿ ಮಾತಾಡಿಸಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೊಪ್ಪಳ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಲಿತ ಪರ ಸಂಘಟನೆ, ಮೊದಲ ಟಾರ್ಗೆಟ್ ದಲಿತ, ರೈತರು ಮತ್ತು ಕನ್ನಡ ಪರ ಹೋರಾಟದ ಜೊತೆಗೆ ವಿರೋಧ ಪಕ್ಷದ ಧ್ವನಿ ಹತ್ತಿಕ್ಕಲು ರಾಜ್ಯ ಸರ್ಕಾರ ದ್ವೇಷ ಭಾಷಣ ವಿರೋಧಿ ಕಾಯ್ದೆ ಜಾರಿಗೆ ಮುಂದಾಗಿದೆ. ಇದು ಗೂಂಡಾ ಮತ್ತು ಹಿಟ್ಲರ್ ಸರ್ಕಾರ. ಹೋರಾಟಗಾರರು ಮತ್ತು ವಿರೋದ ಪಕ್ಷಗಳನ್ನು ಹದ್ದುಬಸ್ತಿನಲ್ಲಿ ಇಡುವುದು ಸರ್ಕಾರದ ಮುಖ್ಯ ಉದ್ದೇಶ. ಈ ಮೂಲಕ ಸಂವಿಧಾನದ ಕಲಂ 19ರಡಿ ನೀಡಿರುವ ವಾಕ್ ಸ್ವಾತಂತ್ರ್ಯಕ್ಕೆ ನೇರವಾಗಿ ಪೆಟ್ಟು ಕೊಡುತ್ತಿರುವ ರಾಜ್ಯ ಸರ್ಕಾರ ಹಿಟ್ಲರ್ ಸರ್ಕಾರದಂತೆ ವರ್ತನೆ ಮಾಡುತ್ತಿದೆ. ವಿರೋಧ ಪಕ್ಷದ ಕಾರ್ಯಕರ್ತರು ಒಂದು ಟ್ವೀಟ್ ಮಾಡಿದರೆ, ಯಾವುದಾದರೂ ಅಭಿಪ್ರಾಯ ಫಾರ್ವರ್ಡ್ ಮಾಡಿದರೂ ಜೈಲಿಗೆ ಹಾಕುತ್ತಿದ್ದಾರೆ. ಆದರೆ, ಅದೇ ತಮ್ಮ ಪಕ್ಷದ ಕಾರ್ಯಕರ್ತರು ಸರ್ಕಾರಿ ಅಧಿಕಾರಿಗಳ ಮೇಲೆ ದೌರ್ಜನ್ಯ, ಗೂಂಡಾಗಿರಿ ಮಾಡಿದರೂ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಶಿಡ್ಲಘಟ್ಟದಲ್ಲಿ ರಾಜೀವ್ ಗೌಡ ಎಂಬಾತ ಒಬ್ಬ ಮಹಿಳಾ ಅಧಿಕಾರಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಬೀದರ್ ನಲ್ಲಿ ಎಂಎಲ್ಸಿ ಒಬ್ಬ ಬಿಜೆಪಿ ಶಾಸಕನ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲೇ ಹಲ್ಲೆ ಮಾಡಿದ್ದಾನೆ. ಬಳ್ಳಾರಿಯಲ್ಲಿ ನಡೆದಿದ್ದು ಏನು? ಭರತ್ ರೆಡ್ಡಿ ಒಬ್ಬ ಶಾಸಕನಾಗಿ, ಐದು ನಿಮಿಷದಲ್ಲಿ ಜನಾರ್ದನ ರೆಡ್ಡಿ ಮನೆ ಸುಟ್ಟು ಹಾಕುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾನೆ. ಇದನ್ನೆಲ್ಲ ನೋಡಿದರೆ ಇದು ಗೂಂಡಾಗಿರಿ ಸರ್ಕಾರ ಎಂದು ಹೇಳಬಹುದು ಎಂದಿದ್ದಾರೆ.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ನಾವು ಸಂವಿಧಾನಿಕ ಹೋರಾಟ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್ ನವರು ಗೂಂಡಾಗಿರಿ ಮಾಡುತ್ತಿದ್ದಾರೆ. ಗೂಂಡಾ ಸಂಸ್ಕೃತಿ ನಮ್ಮಲ್ಲಿ ಇದೆ ಅಂತಾ ತೋರಿಸುತ್ತಿದ್ದಾರೆ. ಕೊಪ್ಪಳದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಮೇಲೆ ಕುರ್ಚಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಐಜಿಗೆ ದೂರು ಕೊಟ್ಟಿದ್ದೇವೆ. ಕೊಪ್ಪಳ ಎಸ್ಪಿಗೂ ದೂರು ನೀಡಿದ್ದೇವೆ. ಆದರೂ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದಾದರೆ ಇದು ಎಂಥ ಬಂಡ ಸರ್ಕಾರ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಮಾತನಾಡಿ, ಡಿಕೆಶಿಗೆ ಕೈಕೊಡೋದಿಕ್ಕೆ ಸಿದ್ದರಾಮಯ್ಯ ವಿಶೇಷ ಅಧಿವೇಶನ ಕರೆದು ಚಾಣಾಕ್ಷ ನಡೆ ಅನುಸರಿಸ್ತಿದ್ದಾರೆ ಅಂತ ಲೇವಡಿ ಮಾಡಿದ್ದಾರೆ. ಇನ್ನು, ಸಿಎಂ ಸಿದ್ದರಾಮಯ್ಯಗೆ `ಲೀಸ್ಡ್ ಸಿಎಂ’ ಎಂಬ ಟೀಕೆಯನ್ನು ಕುಮಾರಸ್ವಾಮಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಇರೋ ಮಂತ್ರಿಗಳು ಎಷ್ಟು ಜನ ಜೆಡಿಎಸ್ನಿಂದ ಲೀಸ್ ಮೇಲೆ ಪಡೆದ್ರಿ. ಸಿಎಂರಿಂದ ಹಿಡಿದು ಎಷ್ಟು ಜನ ಮಂತ್ರಿಗಳನ್ನ ಲೀಸ್ ಬೇಸ್ ಮೇಲೆ ನಿಮ್ಮ ಪಾರ್ಟಿಗೆ ತಗೊಂಡು ಇದ್ದೀರಾ. ಎಷ್ಟು ಜನ ಮಂತ್ರಿ ಮಾಡಿಕೊಂಡಿದ್ದೀರಾ ಅಂತ ಕಿಡಿಕಾರಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಜಯಭೇರಿ – ಬೆಂಗಳೂರಲ್ಲಿ ವಿಜಯೋತ್ಸವ ಆಚರಣೆ
ಕುಮಾರಸ್ವಾಮಿ ವಿರುದ್ಧ ಸಚಿವ ಮಹದೇವಪ್ಪ ಹಾಗೂ ಶಾಸಕ ಬಿಆರ್ ಪಾಟೀಲ್ ಕಿಡಿಕಾರಿದ್ದಾರೆ. ಈ ಮಧ್ಯೆ, ಕುಮಾರಸ್ವಾಮಿ ರಾಜ್ಯ ರಾಜ್ಯಕಾರಣಕ್ಕೆ ಬಂದರೆ ತಪ್ಪೇನು? ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೇಳಿದ್ದಾರೆ.

