ಚಿಲ್ರೇ ಮಾತುಗಳನ್ನು ಆಡಿ ನಿಮ್ಮ ಮರ್ಯಾದೆಯನ್ನು ನೀವೇ ಕಳ್ಕೊಬೇಡಿ: ಸಿದ್ದರಾಮಯ್ಯ ವಿರುದ್ಧ ದೊರೆಸ್ವಾಮಿ ಗರಂ

Public TV
1 Min Read

ಬೆಂಗಳೂರು: ಚುನಾವಣೆಗೂ ಮುನ್ನ ದೇವೇಗೌಡರ ನಿವಾಸಕ್ಕೆ ತೆರಳಿ ಕೋಮುವಾದಿಗಳ ಜೊತೆ ಕೈ ಜೋಡಿಸಬೇಡಿ ಎಂದು ಮನವಿ ಮಾಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ಈಗ ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಗುಡುಗಿದ್ದಾರೆ.

ಸಿದ್ದರಾಮಯ್ಯನವರ ಹೇಳಿಕೆಯನ್ನು ಖಂಡಿಸಿರುವ ದೊರೆಸ್ವಾಮಿಯವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಸಿದ್ದರಾಮಯ್ಯ ನವರೇ ಚಿಲ್ರೇ ಮಾತುಗಳನ್ನು ಆಡಿ ನಿಮ್ಮ ಮರ್ಯಾದೆಯನ್ನು ನೀವೆ ಕಳ್ಕೊಬೇಡಿ. ಮಾಜಿ ಮುಖ್ಯಮಂತ್ರಿಗಳಾಗಿ ಈ ರೀತಿ ಹೇಳಿಕೆ ನೀಡಬಾರದು, ಸ್ವಲ್ಪ ವಿವೇಕ ಇರಿಸಿಕೊಳ್ಳಬೇಕು.  ಹಾದಿ ಬೀದಿಯಲ್ಲಿ ಹೋಗುವವರ ರೀತಿ ಮಾತನಾಡಬಾರದು, ತಾಳ್ಮೆಯಿಂದ ಇರೋದನ್ನು ಕಲಿಯಿರಿ ಎಂದು ಗುಡುಗಿದರು.

ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾದ ನೀವೇ ಹೀಗೆ ಉಡಾಫೆಯಿಂದ ಮಾತನಾಡಿದರೇ, ನಿಮ್ಮ ಶಾಸಕರು ಕುಣಿದು ಕುಪ್ಪಳಿಸಿ ಇನ್ನಷ್ಟು ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು. ಮೈತ್ರಿ ಸರ್ಕಾರ ಅಂದ ಮೇಲೆ ಅಸಮಧಾನ ಇರುತ್ತೆ. ಇದನ್ನು ಕೂತು ಮಾತನಾಡಿ ಬಗೆಹರಿಸಿಕೊಳ್ಳಬೇಕೇ ಹೊರತು ಈ ರೀತಿ ರಂಪಾಟ ಮಾಡಬಾರದು ಎಂದು ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಚುನಾವಣಾ ಪ್ರಚಾರದ ವೇಳೇ ಅಧಿಕಾರಕ್ಕೆ ಬರಲ್ಲ ಅನ್ನೋ ಧೈರ್ಯದಿಂದ ರೈತರ ಸಾಲಮನ್ನಾ ಮಾಡ್ತಿನಿ ಅಂತ ಭರವಸೆ ಕೊಟ್ಟಿದ್ರು, ಆದ್ರೇ ಈಗ ಅವ್ರೇ ಮುಖ್ಯಮಂತ್ರಿಯಾಗಿದ್ದಾರೆ. ಮಾತಿಗೆ ತಪ್ಪಿದ್ರೇ ಮರ್ಯಾದೆ ಪ್ರಶ್ನೆ ಅಂತಾ ಸಾಲಮನ್ನಾ ನಿರ್ಧಾರ ಕೈಗೊಂಡಿದ್ದಾರೆ. ಆದ್ದರಿಂದ ಅವರು ಬಜೆಟ್ ಮಂಡನೆ ಮಾಡಲೇಕು, ಇದನ್ನು ನೀವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಪ್ರಕಾಶ್ ರೈ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ವೇಳೆ ಯಾವುದೇ ಕಾರಣಕ್ಕೂ ಕೋಮುವಾದಿಗಳ ಜೊತೆ ಕೈ ಜೋಡಿಸಬೇಡಿ ಎಂದು ಮನವಿ ಮಾಡಿದ್ದರು.

ಮೈತ್ರಿ ಸರ್ಕಾರದಲ್ಲಿ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ಉಜಿರೆಯ ಶಾಂತಿವನದಲ್ಲಿ ದಿನಕ್ಕೊಂದು ನೀಡುತ್ತಿರುವ ಹೇಳಿಕೆಗಳು ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿವೆ.

https://www.youtube.com/watch?v=boGqlmT4_ok

Share This Article
Leave a Comment

Leave a Reply

Your email address will not be published. Required fields are marked *