ಈಶ್ವರಪ್ಪ ರಾಜೀನಾಮೆಗೆ ಬಿಗಿಪಟ್ಟು- ಇಂದು ರಾಜ್ಯಪಾಲರಿಗೆ ಕಾಂಗ್ರೆಸ್ ದೂರು

Public TV
1 Min Read

– ಅಮಿತ್ ಶಾ ನಿವಾಸದ ಬಳಿ ಪ್ರತಿಭಟನೆಗೆ ಪ್ಲ್ಯಾನ್

ಬೆಂಗಳೂರು: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಸರ್ಕಾರದ ಮೇಲೆ ವಿಪಕ್ಷಗಳು ಮುಗಿಬಿದ್ದಿವೆ. ಕಮಿಷನ್ ಆರೋಪ, ಗುತ್ತಿಗೆದಾರರ ಸಾವು ಇಟ್ಟುಕೊಂಡು, ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಟಕ್ಕರ್ ನೀಡಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಇವತ್ತು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

ಗುತ್ತೆಗೆದಾರ ಸಂತೋಷ್ ಡೆತ್‍ನೋಟ್‍ನಲ್ಲಿ ಈಶ್ವರಪ್ಪ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದೆ, ಬೆಳಗ್ಗೆ 9 ಗಂಟೆಗೆ ರಾಜಭವನಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡಲಿದ್ದಾರೆ.

ಈಶ್ವರಪ್ಪ ತಲೆದಂಡ ಹಾಗೂ ಬಂಧನಕ್ಕೆ ಒತ್ತಾಯಿಸಿ ಬೆಂಗಳೂರಿನಲ್ಲಿನ ಈಶ್ವರಪ್ಪ ನಿವಾಸ ಹಾಗೂ ಮಂಗಳೂರಿನಲ್ಲಿ ಸಿಎಂ ಕಾರ್ಯಕ್ರಮ ನಡೆಯುತ್ತಿದ್ದ ಹೋಟೆಲ್‍ಗೂ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ರು. ಇಂದು ಕೂಡ ರಾಜ್ಯಾದ್ಯಂತ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಇದನ್ನೂ ಓದಿ: ನನ್ನ ಗಂಡನ ಸಾವಿಗೆ ಈಶ್ವರಪ್ಪನೇ ಕಾರಣ: ಸಂತೋಷ್ ಪತ್ನಿ ಕಣ್ಣೀರು

ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಹೋರಾಟಕ್ಕೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಪ್ರಕರಣದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಕರ್ನಾಟಕದಲ್ಲಿ ಬಿಜೆಪಿಯ 40% ಕಮಿಷನ್ ಸರ್ಕಾರ ತಮ್ಮದೇ ಕಾರ್ಯಕರ್ತನನ್ನು ಬಲಿ ಪಡೆದಿದೆ. ಸಂತ್ರಸ್ತ ಪ್ರಧಾನಿಗೆ ಸಲ್ಲಿಸಿದ ಮನವಿಗೆ ಉತ್ತರ ಸಿಕ್ಕಿಲ್ಲ. “ಬಿಜೆಪಿ ಕರಪ್ಷನ್ ಫೈಲ್ಸ್” ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಂತೋಷ್ ಪ್ರಕರಣ ಎಲ್ಲಾ ಆ್ಯಂಗಲ್‌ನಲ್ಲೂ ತನಿಖೆಯಾಗುತ್ತಿದೆ: ಆರಗ ಜ್ಞಾನೇಂದ್ರ

ಇಂದು ದೆಹಲಿಯಲ್ಲಿ ಯೂಥ್ ಕಾಂಗ್ರೆಸ್, ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ, ಗೃಹ ಸಚಿವ ಅಮಿತ್ ನಿವಾಸದ ಮುಂದೆ ಪ್ರತಿಭಟನೆಗೆ ನಿರ್ಧರಿಸಿದೆ. ಇದಷ್ಟೇ ಅಲ್ಲ, ಜೆ.ಪಿ ನಡ್ಡಾ, ಬಿ.ಎಲ್ ಸಂತೋಷ್ ಸೇರಿದಂತೆ ಹಲವು ಬಿಜೆಪಿ ನಾಯಕರ ಮನೆ ಮುಂದೆ ಪ್ರತಿಭಟನೆ ನಡೆಸಲು ಪ್ಲ್ಯಾನ್ ಮಾಡಿದೆ. ಒಟ್ಟಾರೆ ಧರ್ಮ ಸಂಕಟದಲ್ಲಿ ಸಿಲುಕಿದ್ದ ಕಾಂಗ್ರೆಸ್‍ಗೆ, ಇದೀಗ ಬ್ರಹ್ಮಾಸ್ತ್ರವೇ ಸಿಕ್ಕಿದೆ. ಈಶ್ವರಪ್ಪ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದ್ದು, ಬಿಜೆಪಿ ಹೈಕಮಾಂಡ್ ನಡೆ ಕುತೂಹಲ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *