ವರ್ಕ್‌ ಆರ್ಡರ್‌ ಇಲ್ಲದೇ 4 ಕೋಟಿ ಕಾಮಗಾರಿ ಮಾಡಿದ್ದ ಸಂತೋಷ್‌ – ಆತ್ಮಹತ್ಯೆಗೆ ಕಾರಣ ಏನು?

Public TV
2 Min Read

ಬೆಂಗಳೂರು: ನಾನು 14 ಲಕ್ಷ ರೂ. ಹಣವನ್ನು ಈಶ್ವರಪ್ಪನವರಿಗೆ ತಲುಪಿಸಿದ್ದೆ. ಆದರೂ ಬಿಲ್‌ ಪಾವತಿ ಆಗಿಲ್ಲ. ಹೀಗಾಗಿ ಸಾಯುವುದು ಮಾತ್ರ ಬಾಕಿ ಎಂದು ಸಂತೋಷ್‌ ಪಾಟೀಲ್‌ ಈ ಹಿಂದೆ ತಿಳಿಸಿದ್ದರು.

ದೆಹಲಿಯಲ್ಲಿ ಮಾರ್ಚ್‌ 9 ರಂದು ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ್ದ ಅವರು ನಾನು ಮೋದಿಯ ಪರಮ ಭಕ್ತ. ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ನಾನು ಕೆಲಸ ಮಾಡಿದ್ದೇನೆ. ಗ್ರಾಮಗಳ ಅಭಿವೃದ್ಧಿ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ ಕಾಮಗಾರಿ ಮಾಡಿದರೂ ಬಿಲ್‌ ಪಾವತಿ ಇನ್ನೂ ಮಾಡಿಲ್ಲ. ಹೀಗೆ ಆದರೆ ನಾನು ಸಾಯುವುದೇ ಲೇಸು. ಈ ಕಾರಣಕ್ಕೆ ನಾನು ದೆಹಲಿಯಲ್ಲಿರುವ ಬಿಜೆಪಿ ನಾಯಕರನ್ನು ಭೇಟಿಯಾಗಲು ಬಂದಿದ್ದೇನೆ ಎಂದು ಹೇಳಿದ್ದರು.

ವರ್ಕ್‌ ಆರ್ಡರ್‌ಇಲ್ಲದೇ ಕಾಮಗಾರಿ:
ಈಶ್ವರಪ್ಪ ಅವರಿಂದ ನಂಬಿಕೆ ದ್ರೋಹ ಆರೋಪವನ್ನು ಸಂತೋಷ್‌ ಮಾಡಿದ್ದರು. ಹಿಂಡಲಗಾದಲ್ಲಿ ವರ್ಕ್ ಆರ್ಡರ್ ಇಲ್ಲದೇ ಸಂತೋಷ್ ಕಾಮಗಾರಿ ಮಾಡಿದ್ದರು. ಈಶ್ವರಪ್ಪರಿಂದ ಮೌಕಿಕ ಆದೇಶ ಪಡೆದು 4 ಕೋಟಿ ರಸ್ತೆ ನಿರ್ಮಿಸಿದ್ದರು. ಕಾಮಗಾರಿ ಮುಗಿಸಿ ಬಿಲ್ ಕ್ಲೈಮ್ ಮಾಡಲು ವರ್ಕ್ ಆರ್ಡರ್ ಮುಖ್ಯವಾಗುತ್ತದೆ. ಇದನ್ನೂ ಓದಿ: ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ – ಡೆತ್‍ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

ಕಾಮಗಾರಿ ಅಂತ್ಯವಾದ ಬಳಿಕ ವರ್ಕ್ ಆರ್ಡರ್‌ ನೀಡುವಂತೆ ಸಂತೋಷ್‌ ಈಶ್ವರಪ್ಪ ಬಳಿ ಮನವಿ ಮಾಡಿದ್ದರು. ಆದರೆ ವರ್ಕ್ ಆರ್ಡರ್ ಬಿಡುಗಡೆ ಆಗಿರಲ್ಲ. ಬಿಲ್ ಸಹ ಸರ್ಕಾರದಿಂದ ಬಿಡುಗಡೆ ಆಗಿರಲ್ಲ.

ಸಂತೋಷ್‌ ಹೇಳಿದ್ದೇನು?
ಬಿಲ್ ಬಿಡುಗಡೆಗೆ ಪಿಎಗಳ ಮೂಲಕ 40% ಕಮಿಷನ್‍ಗೆ ಈಶ್ವರಪ್ಪ ಬೇಡಿಕೆ ಇಟ್ಟಿದ್ದರು. ಈಗಾಗಲೇ 14 ಲಕ್ಷ ರೂ. ಹಣವನ್ನು ಲಂಚವಾಗಿ ನೀಡಿದ್ದೇನೆ. 4 ಕೋಟಿ ರೂ.ಗೆ ಬಡ್ಡಿ ಕಟ್ಟುತ್ತಿದ್ದೇನೆ. ಬಿಲ್ ಬಿಡುಗಡೆಯಾಗದಿದ್ದರೇ ವಿಷ ಸೇವಿಸುತ್ತೇನೆ. ಆತ್ಮಹತ್ಯೆ ಬಿಟ್ಟು ಬೇರೆ ಯಾವುದೇ ದಾರಿ ಇಲ್ಲ. ಕೇಂದ್ರ ನಾಯಕರನ್ನು ಭೇಟಿಯಾಗಲು ಬಂದಿದ್ದೇನೆ. ಪರಿಹಾರ ಸಿಗದಿದ್ದರೇ ಸಾವೊಂದೇ ದಾರಿ ಎಂದು ಸಂತೋಷ್‌ ಹೇಳಿದ್ದರು.

ಈಶ್ವರಪ್ಪ ಹೇಳೋದು ಏನು?
ಸಂತೋಷ್ ಪಾಟೀಲ್ ಯಾರೂ ಎಂಬುದು ಗೊತ್ತಿಲ್ಲ, ಯಾವತ್ತೂ ನೋಡಿರಲಿಲ್ಲ. ನನ್ನ ಮೇಲೆ ಕಮೀಷನ್‌ ಆರೋಪ ಮಾಡಿದ್ದಕ್ಕೆ ಮಾನನಷ್ಟ ಮೊಕದ್ದಮೆ ಹೂಡಿದ್ದೆ. ಕೋರ್ಟ್‍ನಿಂದ ಲೀಗಲ್‌ ನೋಟಿಸ್ ಬಂದಿತ್ತು. ಆ ನೋಟಿಸ್‍ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ನನಗೂ ಸಂಬಂಧ ಇಲ್ಲ. ನನಗೆ ಯಾಕೆ ಶಿಕ್ಷೆ ಆಗ್ಬೇಕು? ಶಿಕ್ಷೆ ಆಗುವಂತಹ ತಪ್ಪನ್ನು ನಾನು ಮಾಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *