ನಿರ್ಬಂಧಿತ ಬೆಟ್ಟದಲ್ಲಿ ಭಕ್ತನಿಂದ ರಾತ್ರೋರಾತ್ರಿ ರಸ್ತೆ ನಿರ್ಮಾಣ

Public TV
1 Min Read

ರಾಯಚೂರು: ಮಸ್ಕಿ ಪಟ್ಟಣದಲ್ಲಿ ರಾತ್ರೋ ರಾತ್ರಿ ನಿರ್ಬಂಧಿತ ಐತಿಹಾಸಿಕ ಬೆಟ್ಟ ಅಗೆದು ರಸ್ತೆ ನಿರ್ಮಾಣ ಮಾಡಲಾಗಿದೆ.

ಪುರಾತತ್ವ ಇಲಾಖೆಗೆ ಸೇರಿದ ಬೆಟ್ಟದಲ್ಲಿ ಸುಮಾರು 6 ಕಿಮೀ ಅಕ್ರಮವಾಗಿ ರಸ್ತೆ ನಿರ್ಮಾಣವಾಗಿದೆ. ಇಲ್ಲಿನ ಐತಿಹಾಸಿಕ ಮಲ್ಲಿಕಾರ್ಜುನ ದೇವಸ್ಥಾನದ ಪಕ್ಕದಲ್ಲೆ ಬೆಟ್ಟ ಅಗೆದು ಅಪರಿಚಿತರು ರಸ್ತೆ ನಿರ್ಮಿಸಿದ್ದಾರೆ.

ಪರವಾನಿಗೆ ಇಲ್ಲದೇ ರಾತ್ರಿ ವೇಳೆ ಹಿಟಾಚಿ, ಲಾರಿ ತಂದು ಬೆಟ್ಟ ಕೊರೆದಿದ್ದಾರೆ. ವಿಷಯ ತಿಳಿದು ಸ್ಥಳೀಯರು ಬೆಟ್ಟಕ್ಕೆ ಬಂದಾಗ ಜೆ.ಸಿ.ಬಿ ಹಾಗೂ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಅಲ್ಲಿದ್ದವರು ಪರಾರಿಯಾಗಿದ್ದಾರೆ. ಸುಮಾರು ಆರು ಕಿ.ಮೀ ರಸ್ತೆ ನಿರ್ಮಾಣವಾದರೂ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ದೂರಿನ ಮೇರೆಗೆ ಮಸ್ಕಿ ತಹಶೀಲ್ದಾರ್ ಬಲರಾಮ ಕಟ್ಟೀಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಂಧನೂರು ಮೂಲದ ಮಲ್ಲಿಕಾರ್ಜುನ ಸ್ವಾಮಿ ಭಕ್ತನೋರ್ವ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದ ಎನ್ನಲಾಗಿದೆ. ಆದರೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದವರ ವಿರುದ್ಧ ಇನ್ನೂ ಯಾವುದೇ ಕ್ರಮ ಜರುಗಿಸಿಲ್ಲ.

ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *