ಪತ್ರಕರ್ತೆಯ ಕೆನ್ನೆ ಸವರಿ ಕ್ಷಮೆ ಕೇಳಿದ ತಮಿಳುನಾಡು ರಾಜ್ಯಪಾಲ

Public TV
1 Min Read

ಚೆನ್ನೈ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆಯ ಕೆನ್ನೆ ಸವರಿ ವಿವಾದಕ್ಕೆ ಒಳಗಾಗಿದ್ದ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಘಟನೆಯ ಕುರಿತು ಕ್ಷಮೆ ಕೇಳಿದ್ದಾರೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ (78), ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತೆ ಉತ್ತಮ ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಈ ವೇಳೆ ಅವರನ್ನು ಪ್ರಶಂಸಿಸುವ ಮನೋಭಾವದಿಂದ ಅಭಿನಂದನೆ ಸಲ್ಲಿಸಿದ್ದೇನೆ. ಆಕೆ ನನ್ನ ಮೊಮ್ಮಗಳ ಸಮಾನ ಎಂದು ತಿಳಿಸಿದ್ದಾರೆ.

ಈ ಹಿಂದೆ 40 ವರ್ಷಗಳ ಕಾಲ ನಾನು ಸಹ ಪತ್ರಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಪತ್ರಕರ್ತರ ಕಾರ್ಯಶೈಲಿ ಉತ್ತಮವಾಗಿತ್ತು. ಅದ್ದರಿಂದ ಅವರಿಗೆ ತಮ್ಮ ಅಭಿನಂದನೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ತಮಿಳುನಾಡಿನ ಖಾಸಗಿ ಮಾಧ್ಯಮದ ಪತ್ರಕರ್ತೆಯಾಗಿರುವ ಲಕ್ಷ್ಮಿ ಸುಬ್ರಮಣ್ಯಂ ಅವರು ರಾಜ್ಯಪಾಲರ ಕ್ಷಮಾಪಣೆಯನ್ನು ಸ್ವೀಕರಿಸುವುದಾಗಿ ತಿಳಿಸಿದ್ದಾರೆ. ಆದರೆ ಅಭಿನಂದನೆ ಸಲ್ಲಿಸಲು ಈ ರೀತಿ ನಡೆದುಕೊಂಡಿರುವ ಕುರಿತು ತಮಗೇ ಪೂರ್ಣ ಪ್ರಮಾಣದಲ್ಲಿ ಮನವರಿಕೆಯಾಗಿಲ್ಲ ಎಂದು ಹೇಳಿದ್ದಾರೆ.

ಚೆನ್ನೈನ ರಾಜಭವನದಲ್ಲಿ ಮಂಗಳವಾರ ಸಂಜೆ ಸಂವಾದ ಕಾರ್ಯಕ್ರಮ ನಡೆದಿತ್ತು. ಸಂವಾದ ಮುಗಿದ ನಂತರ ಪತ್ರಕರ್ತೆ ಲಕ್ಷ್ಮಿ ಸುಬ್ರಮಣ್ಯಂ ಅವರು ಕೇಳಿದ ಪ್ರಶ್ನೆಗೆ ರಾಜ್ಯಪಾಲ ಬನ್ವಾರಿಯಾ ಲಾಲ್ ಉತ್ತರ ನೀಡದೇ ಅವರ ಕೆನ್ನೆ ಸವರಿದ್ದರು. ಘಟನೆ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದ್ದ ಲಕ್ಷ್ಮಿ ಅವರು, ಈ ಕುರಿತ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಫೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ತಮ್ಮ ಟ್ವೀಟ್ ನಲ್ಲಿ ಘಟನೆ ಬಗ್ಗೆ ವಿವರಿಸಿರುವ ಅವರು, ಸಂವಾದ ಮುಗಿದ ಬಳಿಕ ಅವರು ಹೋಗುತ್ತಿದ್ದ ಸಮಯದಲ್ಲಿ ನಾನು ರಾಜ್ಯಪಾಲರನ್ನು ಒಂದು ಪ್ರಶ್ನೆ ಕೇಳಿದೆ. ಅದಕ್ಕೆ ಅವರು ಉತ್ತರಿಸದೆ ನನ್ನ ಅನುಮತಿ ಇಲ್ಲದೆ ಕೆನ್ನೆ ಮುಟ್ಟಿದರು. ಯಾವುದೇ ವ್ಯಕ್ತಿ ಅನುಮತಿ ಇಲ್ಲದೆ ಅವರನ್ನು ಸ್ಪರ್ಶಿಸುವುದು ಸರಿಯಲ್ಲ. ಅದರಲ್ಲೂ ಒಬ್ಬ ಮಹಿಳೆಯ ಬಳಿ ಸಾರ್ವಜನಿಕವಾಗಿ ಈ ರೀತಿ ನಡೆದುಕೊಂಡಿದ್ದು ಸರಿ ಅಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

ರಾಜ್ಯಪಾಲರ ಈ ನಡೆಗೆ ದೇಶಾದ್ಯಂತ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ತಮಿಳುನಾಡಿನ ಹಲವು ರಾಜಕೀಯ ನಾಯಕರು ಸಹ ಈ ಕುರಿತು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತ ಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *