ಬಿರಿಯಾನಿಗಾಗಿ ಬಡಿದಾಡಿಕೊಂಡ ಕೈ ಕಾರ್ಯಕರ್ತರು- 9 ಮಂದಿ ಅರೆಸ್ಟ್

Public TV
1 Min Read

ಲಕ್ನೋ: ಬಿರಿಯಾನಿ ಹಂಚುವ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡ ಘಟನೆ ಉತ್ತರ ಪ್ರದೇಶದ ಮುಜಾಫುರ್ ನಗರದಲ್ಲಿ ನಡೆದಿದೆ.

ಬಿಜ್ನೋರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಾಸಿರ್ ಉದ್ದಿನ್ ಸಿದ್ದಿಕಿ ಅವರ ಪರ ಪ್ರಚಾರ ಮಾಡುವ ನಿಟ್ಟಿನಲ್ಲಿ ನಡೆದಿದ್ದ ಸಭೆಯಲ್ಲಿ ಈ ಘಟನೆ ನಡೆದಿದೆ. ಕಾರ್ಯಕರ್ತರ ಮಧ್ಯೆ ಮಾರಾಮಾರಿ ಆಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಘಟನೆಯ ಸಂಬಂಧ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಆಗಿದ್ದೇನು?:
ಮಾಜಿ ಶಾಸಕ ಮೌಲಾನ ಜಮೀಲ್ ಅವರು, ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಹೀಗಾಗಿ ಬಿಜ್ನೋರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಾಸಿರ್ ಉದ್ದಿನ್ ಸಿದ್ದಿಕಿ ಪರ ಪ್ರಚಾರ ಮಾಡುವ ಕುರಿತಾಗಿ ಕಾರ್ಯಕರ್ತರ ಸಭೆ ಕರೆದಿದ್ದರು. ಸಭೆಯ ಬಳಿಕ ಬಿರಿಯಾನಿ ವ್ಯವಸ್ಥೆ ಕೂಡ ಮಾಡಿದ್ದರು.

ಬಿರಿಯಾನಿ ಹಂಚುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಾಗ್ದಾಳಿ ನಡೆದಿದೆ. ಬಳಿಕ ಪರಸ್ಪರ ಕೈ ಕೈ ಮಿಲಾಯಿಸಿದ್ದು, ಪರಿಸ್ಥಿತಿ ಕೈಮಿರಿತ್ತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ವರದಿಯಾಗಿದೆ.

ಮಾಜಿ ಶಾಸಕ ಮೌಲಾನ ಜಮೀಲ್ ಹಾಗೂ ಪುತ್ರ ಸೇರಿದಂತೆ 34 ಜನರ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಈ ಸಂಬಂಧ 9 ಜನರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಮೀರಾಪುರ ವಿಧಾನಸಭಾ ಕ್ಷೇತ್ರದಿಂದ 2012ರ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಆದರೆ ಕಳೆದ ವಾರ ಬಿಎಸ್‍ಪಿ ತೊರೆದು ಕಾಂಗ್ರೆಸ್ ಸೇರಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *