ಕಾಂಗ್ರೆಸ್ ರಾಜ್ಯಾಧ್ಯಕ್ಷನೇ ಒಬ್ಬ ರೌಡಿಶೀಟರ್: ರೇಣುಕಾಚಾರ್ಯ

Public TV
2 Min Read

ದಾವಣಗೆರೆ: ಬಿಜೆಪಿಗೆ (BJP) ರೌಡಿಗಳು ಸೇರ್ಪಡೆಯಾಗುತ್ತಿದ್ದಾರೆ, ಬಿಜೆಪಿ ರೌಡಿಗಳ ಪಕ್ಷ ಎಂದು ಕಾಂಗ್ರೆಸ್ (Congress) ಆರೋಪ ಮಾಡುತ್ತಿದೆ. ಆದರೆ ಕಾಂಗ್ರೆಸ್ ರಾಜ್ಯಾಧ್ಯಕ್ಷನೇ ಒಬ್ಬ ರೌಡಿಶೀಟರ್. ಕೊತ್ವಾಲ ರಾಮಚಂದ್ರನ ಶಿಷ್ಯ ಡಿ.ಕೆ ಶಿವಕುಮಾರ್ (DK Shivakumar) ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಕಾಂಗ್ರೆಸ್ ಗೂಂಡಾಗಳನ್ನು, ರೌಡಿಗಳನ್ನು ಪೋಷಿಸುವ ಸಂಸ್ಕೃತಿ ಹೊಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ಮ್ಯಾನ್‌ಪವರ್ ಮತ್ತು ಮನಿ ಪವರ್‌ನಿಂದ. ಅಲ್ಲದೆ ರೌಡಿಗಳ ಪಕ್ಷ ಎಂದರೆ ಕಾಂಗ್ರೆಸ್, ರೌಡಿ ಭಾಗ್ಯ ಕೊಟ್ಟಿದ್ದೇ ಕಾಂಗ್ರೆಸ್. ಎಲ್ಲಾ ರೌಡಿಗಳೂ ಕಾಂಗ್ರೆಸ್‌ನಲ್ಲೇ ಇರೋದು ಎಂದರು.

ಬಿಜೆಪಿ ಎಂದರೆ ದೇಶಭಕ್ತರಿರುವ ಪಕ್ಷ, ರೌಡಿಗಳನ್ನು ಮಟ್ಟ ಹಾಕಿದ್ದೇ ಬಿಜೆಪಿ. ಅದರಲ್ಲೂ ಬಿಜೆಪಿಯಲ್ಲಿ ಕೇವಲ ಸುಶಿಕ್ಷಿತರ ದೊಡ್ಡ ಪಡೆ ಇದೆ. ರೌಡಿಗಳನ್ನು ತಗೊಂಡು ನಾವೇನು ಮಾಡಬೇಕು ಹೇಳಿ? ರೌಡಿಗಳ ಮನಪರಿವರ್ತಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದೆ. ಅಂತಹ ಕೆಲವರಿಗೆ ಅವಕಾಶ ಕೊಟ್ಟಿದೆ. ಗೂಂಡಾ ಮನಸ್ಸನ್ನು ಪರಿವರ್ತನೆ ಮಾಡಿದ ಪಕ್ಷ ಇದ್ದರೆ ಅದು ಬಿಜೆಪಿ ಎಂದು ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ಗುಜರಾತ್ ಚುನಾವಣೆಯ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, ಗುಜರಾತ್ ಚುನಾವಣೆಯಲ್ಲಿ ನೂರಕ್ಕೆ ನೂರಷ್ಟು ಬಿಜೆಪಿ ಗೆಲ್ಲುತ್ತದೆ. ಗುಜರಾತ್ ಜನತೆ ಮನೆ ಮಗನನ್ನು ಗೆಲ್ಲಿಸಿಯೇ ಗೆಲ್ಲಿಸುತ್ತಾರೆ. ಗುಜರಾತ್‌ನಲ್ಲಿ 130ಕ್ಕೆ 120 ಸೀಟು ಗೆದ್ದು ಅಧಿಕಾರಕ್ಕೆ ಬರುತ್ತದೆ. ಈ ಗುಜರಾತ್ ಚುನಾವಣೆ ದೇಶದ ಎಲ್ಲಾ ರಾಜ್ಯಗಳ ಚುನಾವಣೆಯ ದಿಕ್ಸೂಚಿಯಾಗುತ್ತದೆ ಎಂದರು.

ಮಹಾರಾಷ್ಟ್ರ ಗಡಿ ವಿಚಾರವಾಗಿ ಮಾತನಾಡಿದ ಅವರು, ಕರ್ನಾಟಕದ ಒಂದಿಂಚು ಭೂಮಿಯನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ನಮ್ಮ ಸರ್ಕಾರ ಈಗಾಗಲೇ ಅವರಿಗೆ ಎಚ್ಚರಿಕೆಯನ್ನು ಕೊಟ್ಟಿದೆ. ಕರ್ನಾಟಕದ ನೆಲ ಜಲ ಭಾಷೆಗೆ ಧಕ್ಕೆ ಬಂದರೆ ಸಹಿಸುವುದಿಲ್ಲ. ಕರ್ನಾಟಕದ ಒಂದಿಂಚು ಭೂಮಿಯನ್ನು ತಗೊಳ್ಳಿ ನೋಡೋಣ ಎಂದು ರೇಣುಕಾಚಾರ್ಯ ಸವಾಲ್ ಹಾಕಿದರು. ಇದನ್ನೂ ಓದಿ: ನಮ್ಮ ಅಕ್ಕ ಲಕ್ಷ್ಮೀ ಹೆಬ್ಬಾಳ್ಕರ್ ಫುಲ್ ಟೈಮ್ ಪ್ಲೇಯರ್: MLC ಚನ್ನರಾಜ ಹಟ್ಟಿಹೊಳಿ

ಚಂದ್ರು ಸಾವಿನ ಪ್ರಕರಣದಲ್ಲಿ ಮತ್ತೆ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರೇಣುಕಾಚಾರ್ಯ, ಚಂದ್ರು ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಸಿಎಂಗೆ ಪತ್ರ ಬರೆದಿದ್ದೇನೆ. ಚಂದ್ರು ಸಾವು ಅಪಘಾತವಲ್ಲ, ಅದೊಂದು ಕೊಲೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಪ್ರಕರಣದ ತನಿಖೆಯಲ್ಲಿ ಕೆಲವರ ಮೇಲೆ ವಿಶ್ವಾಸ ಇಲ್ಲ. ಹೀಗಾಗಿ ಸಿಐಡಿ ಅಥವಾ ಸಿಒಡಿಗೆ ವಹಿಸುವಂತೆ ಮನವಿ ಮಾಡಿದ್ದೇನೆ ಎಂದು ಪರೋಕ್ಷವಾಗಿ ಪೊಲೀಸರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಈಗಾಗಲೇ ಡಿಐಜಿಗೆ ಪತ್ರ ಬರೆದಿದ್ದಾರೆ. ಸಿಎಂ ಮೇಲೆ ವಿಶ್ವಾಸ ಇದೆ. ಸತ್ಯಾಸತ್ಯತೆ ಪರಿಶೀಲನೆಯಾಗುತ್ತದೆ. ಪೊಲೀಸರ ಸಂಪೂರ್ಣ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ. ಪೊಲೀಸರ ವೈಫಲ್ಯದ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಡಿಕೆಶಿ ರೌಡಿಶೀಟರ್‌ಗಳ ಬಗ್ಗೆ ಬಿಜೆಪಿಯನ್ನ ತೆಗಳೋದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಹಾಗೆ – ಆರಗ ಜ್ಞಾನೇಂದ್ರ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *