ಬಳ್ಳಾರಿ ಗೆಲುವಿಗಾಗಿ 52 ಜನರ ವಿಶೇಷ ತಂಡ ರಚಿಸಿದ ಕಾಂಗ್ರೆಸ್!

Public TV
1 Min Read

ಬೆಂಗಳೂರು: ಬಳ್ಳಾರಿ ಲೋಕಸಭಾ ಉಪಚುನಾವಣೆಯು ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಕಣವಾಗಿದ್ದು, ಶತಾಯಗತಾಯ ಈ ಕ್ಷೇತ್ರದಲ್ಲಿ ವಿಜಯ ಸಾಧಿಸಲೇಬೇಕೆಂದು 52 ಜನರ ವಿಶೇಷ ತಂಡವನ್ನು ಕಾಂಗ್ರೆಸ್ ಸಿದ್ಧಪಡಿಸಿದೆ.

ಹೌದು, ಗಣಿಧಣಿಗಳ ವಿರುದ್ಧ ತೊಡೆ ತಟ್ಟಿರುವ ಕಾಂಗ್ರೆಸ್ ನಾಯಕರು, ಬಳ್ಳಾರಿಯಲ್ಲಿ ಕಾಂಗ್ರೆಸ್ಸಿನ ಪತಾಕೆಯನ್ನು ಹಾರಿಸಲೇಬೇಕೆಂದು ಪಣತೊಟ್ಟಿದ್ದಾರೆ. ಇದರ ಜೊತೆ ಜಲಸಂಪನ್ಮೂಲ, ವೈದ್ಯಕೀಯ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ವಿಶೇಷವಾಗಿ 52 ಜನರ ವಿಶೇಷ ತಂಡವನ್ನು ಕೆಪಿಸಿಸಿ ರಚಿಸಿದೆ. ಈ ತಂಡದಲ್ಲಿ ಮಾಜಿ ಸಚಿವರು, ಹಾಲಿ ಶಾಸಕರು ಹಾಗೂ ಸಂಸದರು ಸೇರಿದಂತೆ ಜಿಲ್ಲೆಗೆ ಕಾಂಗ್ರೆಸ್ ನಾಯಕರ ದಂಡೇ ಪ್ರಚಾರ ನಡೆಸಲಿದೆ.

ಸರ್ವ ಸನ್ನದ್ಧವಾಗಿ ಚುನಾವಣಾ ಅಖಾಡಕ್ಕೆ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಧುಮುಕಿದೆ. ಆದರೆ ಚುನಾವಣಾ ಉಸ್ತುವಾರಿಯಲ್ಲಿ ಮಾಜಿ ಶಾಸಕ ಎಂ.ಪಿ.ರವೀಂದ್ರ ಹಾಗೂ ಅನಿಲ್ ಲಾಡ್‍ರನ್ನು ಕೈಬಿಟ್ಟಿದೆ.

ಶ್ರೀರಾಮಲು ಶಾಸಕರಾಗಿ ಆಯ್ಕೆಯಾದ ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಬಳ್ಳಾರಿಯಲ್ಲಿ ಲೋಕಸಭೆ ಉಪ ಚುನಾವಣೆ ಘೋಷಣೆಯಾಗಿತ್ತು. ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದ ಬಗ್ಗೆ ಗೊಂದಲ ಸಹ ಏರ್ಪಟ್ಟಿತ್ತು. ಮೊದಲಿಗೆ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್’ಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಕೊನೆ ಕ್ಷಣದಲ್ಲಿ ವಿ.ಎಸ್.ಉಗ್ರಪ್ಪರನ್ನು ಲೋಕಸಭಾ  ಅಭ್ಯರ್ಥಿಯೆಂದು ಘೋಷಣೆಮಾಡಿ ಎಲ್ಲಾ ಗೊಂದಲಗಳಿಗೆ ಕಾಂಗ್ರೆಸ್ ತೆರೆ ಎಳೆದಿತ್ತು.

ಸಚಿವರಾದ ಕೃಷ್ಣಭೈರೈಗೌಡ-ಬಳ್ಳಾರಿ ಗ್ರಾಮೀಣ, ಎನ್.ಎಚ್.ಶಿವಶಂಕರ ರೆಡ್ಡಿ-ಹಗರಿಬೊಮ್ಮನಹಳ್ಳಿ, ರಮೇಶ್ ಜಾರಕಿಹೊಳಿ-ಕೂಡ್ಲಿಗಿ, ಪ್ರಿಯಾಂಕ್ ಖರ್ಗೆ-ಸಂಡೂರು, ಯು.ಟಿ.ಖಾದರ್-ಬಳ್ಳಾರಿ ನಗರ, ರಾಜಶೇಖರ್ ಬಿ ಪಾಟೀಲ್-ಹೂವಿನ ಹಡಗಲಿ, ಡಾ.ಶರಣಪ್ರಕಾಶ್ ಪಾಟೀಲ್-ವಿಜಯನಗರ ಹಾಗೂ ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ- ಕಂಪ್ಲಿ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ನೀಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *