ಹೈ.ಕ ಹಿರಿಯ ಕಾಂಗ್ರೆಸ್ ನಾಯಕ ಎ.ಬಿ.ಮಾಲಕರಡ್ಡಿ ಬಿಜೆಪಿ ಸೇರ್ಪಡೆ

Public TV
2 Min Read

– ಕೆಪಿಸಿಸಿ ಸಭೆಯಲ್ಲೇ ಪ್ರಧಾನಿ ಮೋದಿ ಉತ್ತಮ ಕಾರ್ಯಗಳನ್ನು ಪ್ರಶಂಸಿದ್ದೇನೆ: ಮಾಲಕರಡ್ಡಿ

ಬೆಂಗಳೂರು: ಹೈದರಾಬಾದ್ ಕರ್ನಾಟಕ ಹಿರಿಯ ನಾಯಕ ಡಾ.ಎ.ಬಿ.ಮಾಲಕರಡ್ಡಿ ಅವರು ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ನಗರದಲ್ಲಿ ಖಾಸಗಿ ಹೋಟೆಲ್‍ನಲ್ಲಿ ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟನೆ ಮಾಡಲಾಯಿತು. ಈ ವೇಳೆ ಡಾ.ಎ.ಬಿ.ಮಾಲಕರಡ್ಡಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಬಿ.ಎಸ್.ಯಡಿಯೂರಪ್ಪ, ಮಾಲಕರಡ್ಡಿ ಅವರಿಗೆ ಬಿಜೆಪಿ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಬಳಿಕ ಮಾತನಾಡಿದ ಎ.ಬಿ.ಮಾಲಕರಡ್ಡಿ ಅವರು, ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ಕೆಲಸ ಮಾಡುವುದು ಹೆಮ್ಮೆಯ ವಿಷಯ. ಅವರಿಗೆ ರಾಜಕಾರಣ ಫ್ಯಾಷನೇಟ್ (ಆಕರ್ಷಕವಾಗಿದೆ). ಆದರೆ ನಾನು ಕಾಂಗ್ರೆಸ್ಸನ್ನು ಟೀಕೆ ಮಾಡುವುದಿಲ್ಲ. ಇಲ್ಲಿ ನಾನು ಯಾವುದೇ ನಕಾರಾತ್ಮಕ ವಿಷಯಗಳ ಬಗ್ಗೆ ಹೇಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಕಾರ್ಯಗಳನ್ನು ಕೆಪಿಸಿಸಿ ಸಭೆಯಲ್ಲೇ ಪ್ರಶಂಸಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ ಎಂದರು.

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಹಿರಿಯ ನಾಯಕರು. ಆರು ಬಾರಿ ಗೆದ್ದ ನಮ್ಮಂತಹ ಹಿರಿಯರನ್ನು ಕಡೆಗಣಿಸಿ ತಮ್ಮ ಮಗ ಪ್ರಿಯಾಂಕ್ ಖರ್ಗೆ ಅವರನ್ನು ಮಂತ್ರಿ ಮಾಡಿದ್ದಾರೆ. ಅಂತಹ ಚಿಕ್ಕ ಹುಡುಗನನ್ನು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡಿ, ನಮ್ಮಂತಹವರು ಆತನ ಕೈಕೆಳಗೆ ಕೆಲಸ ಮಾಡುವಂತೆ ಮಾಡಿದರು. ಕಾಂಗ್ರೆಸ್‍ನಲ್ಲಿ ಶಾಸಕರು, ಜನಪ್ರತಿನಿಧಿಗಳು ಲೆಕ್ಕಕ್ಕೆ ಇಲ್ಲದಂತಾಗಿದ್ದು, ಸ್ವಾರ್ಥ ಹೆಚ್ಚಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ರಾಜ್ಯದಿಂದ ಸ್ಪರ್ಧಿಸಲ್ಲ. ಆ ಆಲೋಚನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು ಸಂಜೆಯೊಳಗೆ ಬಿಡುಗಡೆಯಾಗಲಿದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮ ಅಭಿಪ್ರಾಯವನ್ನು ಹೈಕಮಾಂಡ್ ನಾಯಕರಿಗೆ ತಿಳಿಸಿದ್ದೇವೆ ಎಂದರು.

ಬಿಜೆಪಿಯವರಿಗೆ ಒಂದಂಕಿ ದಾಟಲು ಬಿಡೋದಿಲ್ಲ ಎಂಬ ಎಚ್.ಡಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿ.ಎಸ್.ಯಡಿಯೂರಪ್ಪ ಅವರು, ದೇವೇಗೌಡರು ಬಾಯಿ ತಪ್ಪಿ ಹೇಳಿರಬೇಕು. ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಸ್ಥಿತಿಗಳನ್ನು ನೀವು ನೋಡಿರಬೇಕು. ದೇವೇಗೌಡ ಅವರು ಎಲ್ಲಿಂದ ನಿಲ್ಲಬೇಕು ಎನ್ನುವುದೇ ಇನ್ನೂ ತೀರ್ಮಾನವಾಗಿಲ್ಲ. ಈ ಬಾರಿ ನಾವು 22 ಸ್ಥಾನ ಗೆದ್ದ ಮೇಲೆ ಎಲ್ಲ ಗೊತ್ತಾಗುತ್ತದೆ. ಅವರು ಎರಡು ಅಂಕಿ ದಾಟಲ್ಲ ಎಂದು ತಿರುಗೇಟು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *