ಶಾಸಕರ ರಾಜೀನಾಮೆಗೆ ದೋಸ್ತಿಗಳು ಕಂಗಾಲು – ಸರ್ಕಾರ ಉಳಿಸಿಕೊಳ್ಳಲು `ಕೈ’ ಪ್ಲಾನ್

Public TV
2 Min Read

ಬೆಂಗಳೂರು: ಶಾಸಕರ ಸರಣಿ ರಾಜೀನಾಮೆಯಿಂದ ಕಂಗಾಲಾಗಿರುವ ದೋಸ್ತಿ ನಾಯಕರು ಸರಕಾರ ಉಳಿಸಿಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಸಿಎಂ ಕೊನೆಯ ಪ್ರಯತ್ನ ಎಂಬಂತೆ ಸರ್ಕಾರ ಉಳಿಸಿಕೊಳ್ಳಲು 3 ಸೂತ್ರಗಳನ್ನು ಹೆಣೆದಿದ್ದಾರೆ. ಬಂಡೆದ್ದಿರುವವರನ್ನು ಮನವೊಲಿಸಿ ಮಂತ್ರಿಗಿರಿ ನೀಡೋ ಮೂಲಕ ಸಮಾಧಾನ ಮಾಡಲು, ಹಾಲಿ ಸಚಿವರಿಂದ ರಾಜೀನಾಮೆ ಕೊಡಿಸಲು ದೋಸ್ತಿಗಳು ಮುಂದಾಗಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಐದೈದು ಸಚಿವರು ಸ್ಥಾನ ತ್ಯಾಗಕ್ಕೆ ಸಿದ್ಧರಾಗಿದ್ದಾರೆ ಎನ್ನಲಾಗ್ತಿದೆ. ಸಿಎಂ ಬಂದ ಬಳಿಕ ಸೋಮವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, 10 ಸಚಿವರ ರಾಜೀನಾಮೆ ಪಡೆಯಲು ನಿರ್ಧಾರಿಸಿದ್ದಾರೆ ಎನ್ನಲಾಗ್ತಿದೆ. ಈ ನಡುವೆ ರಿವರ್ಸ್ ಆಪರೇಷನ್ ಮಾಡಲು ರಣತಂತ್ರಗಳು ರೂಪಿತವಾಗ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಮೂರು ಪ್ಲಾನ್ ಏನು?
ದೋಸ್ತಿ ಸರ್ಕಾರದಲ್ಲಿರುವ ಎಲ್ಲಾ ಕಾಂಗ್ರೆಸ್ ಸಚಿವರ ರಾಜೀನಾಮೆ ಕೊಡಿಸುವುದು. ಸರ್ಕಾರ ಸೇಫಾದ್ರೆ ಸಂಪುಟ ಪುನರಚನೆ ಆಗಲಿದೆ ಅನ್ನೋ ಮಾಹಿತಿ ರವಾನಿಸುವುದು. ಈ ಮೂಲಕ ಶಾಸಕರು ಕೈತಪ್ಪಿ ಹೋಗದಂತೆ ತಡೆಯುವುದು. ಅಲ್ಲದೆ ಶಾಸಕರಲ್ಲಿ ನಮಗೂ ಅವಕಾಶವಿದೆ ಎಂಬ ಭಾವನೆ ಮೂಡುವಂತೆ ಮಾಡುವುದು ಮೊದಲ ಪ್ಲಾನ್ ಆಗಿದೆ.

ಎರಡನೆಯದಾಗಿ, ಈಗಾಗಲೇ ರಾಜೀನಾಮೆ ಕೊಟ್ಟಿರುವ ಶಾಸಕರ ಮನವೊಲಿಕೆಗೆ ಪ್ರಯತ್ನ ಮಾಡುವುದು. ಇನ್ನೂ ರಾಜೀನಾಮೆ ಕೊಡಬಹುದು ಎನ್ನಲಾಗುತ್ತಿರುವ ಶಾಸಕರನ್ನೂ ಕೂಡ ಮನವೊಲಿಸುವುದು. ಅಲ್ಲದೆ ಅನುಮಾನ ಇರುವ ಶಾಸಕರ ಮನವೊಲಿಕೆಗೆ ಈಗಲೇ ಕಾರ್ಯಪ್ರವೃತ್ತರಾಗುವುದು. ಹಾಗೂ ಆದ ತಪ್ಪನ್ನ ಹೇಗೆ ಸರಿಪಡಿಸುತ್ತೇವೆ ಎಂಬುದನ್ನ ಶಾಸಕರಿಗೆ ಮನವರಿಕೆ ಮಾಡುವುದು.

ಈಗಿನ ಪರಿಸ್ಥಿತಿಯಲ್ಲಿ ರಿವರ್ಸ್ ಆಪರೇಷನ್ ಕಷ್ಟವಾಗಿದ್ದರೂ ಪ್ರಯತ್ನಿಸುವುದು. ಬಿಜೆಪಿ ಅಸಮಾಧಾನಿತ ಶಾಸಕರನ್ನ ಸೆಳೆದು ತಿರುಗೇಟು ನೀಡುವುದು. ಸರ್ಕಾರವನ್ನ ಕೆಡವದಂತೆ ತಡೆಯುವಷ್ಟು ಶಾಸಕರನ್ನ ಸೆಳೆಯುವುದು. ಜಾತಿ, ಪ್ರಾದೇಶಿಕ ಅನುಕೂಲಗಳನ್ನ ನೋಡಿ ಶಾಸಕರನ್ನ ಸೆಳೆಯುವ ಯತ್ನ ಮಾಡುವ ಮೂಲಕ ಸರ್ಕಾರವನ್ನು ಉಳಿಸುವ ಪ್ರಯತ್ನ ಮಾಡುವತ್ತ ಕಾಂಗ್ರೆಸ್ ತನ್ನ ದೃಷ್ಟಿ ನೆಟ್ಟಿದೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

ಇತ್ತ ಈ ಹಿಂದೆ ರೆಸಾರ್ಟ್ ರಾಜಕೀಯ ವಿರೋಧಿಸ್ತಿದ್ದವರೇ ಈಗ ರೆಸಾರ್ಟ್ ರಾಜಕೀಯದ ಮೊರೆ ಹೋಗಿದ್ದಾರೆ. ಶನಿವಾರ ಸಂಜೆ ಹೆಚ್‍ಎಎಲ್‍ನಿಂದ ಹೊರಟ ಅತೃಪ್ತ ಶಾಸಕರು, ಈಗ ಮುಂಬೈನ ಐಶಾರಾಮಿ ಹೋಟೆಲ್ ಸೋಫಿಟೆಲ್‍ನಲ್ಲಿ ಉಳಿದುಕೊಂಡಿದ್ದಾರೆ. ರಾಮಲಿಂಗಾರೆಡ್ಡಿ, ಮುನಿರತ್ನ, ಆನಂದ್ ಸಿಂಗ್ ಹೊರತುಪಡಿಸಿ ಉಳಿದ ಶಾಸಕರು ಮುಂಬೈ ಹೋಟೆಲ್‍ನಲ್ಲಿ ಬೀಡುಬಿಟ್ಟಿದ್ದಾರೆ.

ರಾಜೀನಾಮೆ ಕೊಟ್ಟ ಜೆಡಿಎಸ್ ಶಾಸಕರು:
* ಎಚ್ ವಿಶ್ವನಾಥ್- ಹುಣಸೂರು
* ಗೋಪಾಲಯ್ಯ- ಮಾಹಾಲಕ್ಷ್ಮಿ ಲೇ ಔಟ್
* ನಾರಾಯಣ ಗೌಡ- ಕೆ. ಆರ್ ಪೇಟೆ

ರಾಜೀನಾಮೆ ಕೊಟ್ಟ ಕೈ ಶಾಸಕರು:
* ರಾಮಲಿಂಗಾ ರೆಡ್ಡಿ- ಬಿಟಿಎಂ ಲೇ ಔಟ್
* ರಮೇಶ್ ಜಾರಕಿಹೊಳಿ- ಗೋಕಾಕ್
* ಎಸ್.ಟಿ ಸೋಮಶೇಖರ್- ಯಶವಂತಪುರ
* ಪ್ರತಾಪ್ ಗೌಡ ಪಾಟೀಲ್- ಮಸ್ಕಿ
* ಬಿ.ಸಿ ಪಾಟೀಲ್- ಹಿರೇಕೆರೂರು
* ಮಹೇಶ್ ಕುಮಟಳ್ಳಿ- ಅಥಣಿ
* ಭೈರತಿ ಬಸವರಾಜ್- ಕೆ.ಆರ್ ಪುರಂ
* ಶಿವರಾಂ ಹೆಬ್ಬಾರ್- ಯಲ್ಲಾಪುರ
* ಮುನಿರತ್ನ- ರಾಜರಾಜೇಶ್ವರಿ ನಗರ

ರಾಜೀನಾಮೆ ನೀಡಬಹುದಾದ ಶಾಸಕರು:
* ನಾಗೇಂದ್ರ, ಬಳ್ಳಾರಿ ಗ್ರಾಮೀಣ
* ಅನಿಲ್ ಚಿಕ್ಕಮಾದು, ಎಚ್‍ಡಿ ಕೋಟೆ
* ಗಣೇಶ್ ಹುಕ್ಕೇರಿ, ಚಿಕ್ಕೋಡಿ
* ಅಂಜಲಿ ನಿಂಬಾಳ್ಕರ್, ಖಾನಾಪುರ
* ಶ್ರೀಮಂತ ಪಾಟೀಲ್, ಕಾಗವಾಡ
* ಸೌಮ್ಯ ರೆಡ್ಡಿ, ಜಯನಗರ
* ವಿ. ಮುನಿಯಪ್ಪ, ಶಿಡ್ಲಘಟ್ಟ

Share This Article
Leave a Comment

Leave a Reply

Your email address will not be published. Required fields are marked *