ಚಾಮರಾಜನಗರದಲ್ಲೇ ಸೋಮಣ್ಣ ಕಟ್ಟಿ ಹಾಕಲು ʼಕೈʼ ರಣವ್ಯೂಹ! – ಬಿಜೆಪಿ ಬಂಡಾಯವನ್ನೇ ಬಂಡವಾಳ ಮಾಡಿಕೊಳ್ಳಲು‌ ಪ್ಲಾನ್

Public TV
1 Min Read

ಚಾಮರಾಜನಗರ: ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ‌ಮಾಡಿ ಪ್ರತಿಷ್ಠೆ ಪಣಕ್ಕಿಡಲು ಹೊರಟಿರುವ ಮಾಜಿ ಸಚಿವ ವಿ.ಸೋಮಣ್ಣ (V.Somanna) ಅವರನ್ನು ಕಟ್ಟಿ ಹಾಕಲು ಕಾಂಗ್ರೆಸ್ (Congress) ರಣತಂತ್ರ ಹೆಣೆಯುತ್ತಿದೆ. ವರುಣಾದಲ್ಲಿ ಹೆಚ್ಚು ಕೇಂದ್ರೀಕರಿಸದಂತೆ ಚಾಮರಾಜನಗರದಲ್ಲಿ (Chamarajanagara) ಕಟ್ಟಿ ಹಾಕಲು ರಣವ್ಯೂಹ ರಚಿಸಿದೆ.

ಸಿದ್ದರಾಮಯ್ಯ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡಲು ಬಿಜೆಪಿ ಸೋಮಣ್ಣಗೆ ಟಿಕೆಟ್ ಕೊಟ್ಟಿದೆ. ಆದರೆ, ವರುಣಾಗೆ ಸೋಮಣ್ಣ ಹೋಗದಂತೆ ಚಾಮರಾಜನಗರದಲ್ಲೇ ಕಟ್ಟಿ ಹಾಕಲು ಕಾಂಗ್ರೆಸ್ ಮುಂದಾಗಿದ್ದು ಇದಕ್ಕೇ ಬಿಜೆಪಿ ಬಂಡಾಯವೇ ಬಂಡವಾಳವಾಗಿದೆ. ಸೋಮಣ್ಣಗೆ ಚಾಮರಾಜನಗರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಭಿನ್ನಮತ ಸ್ಫೋಟವಾಗಿದೆ. ಟಿಕೆಟ್ ವಂಚಿತ ನಾಗಶ್ರೀ ಪ್ರತಾಪ್ ಅವರ ಬೆಂಬಲಿಗರು ಈಗಾಗಲೇ ಕೆರಳಿ ಕೆಂಡವಾಗಿದ್ದು, ಸಾಲು ಸಾಲು ಸಭೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಬಹಿರಂಗವಾಗಿಯೇ ಸೋಮಣ್ಣ ವಿರುದ್ಧ ಹರಿಹಾಯ್ದಿದ್ದು, ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದನ್ನೂ ಓದಿ: ಟಿಕೆಟ್ ಕೊಟ್ಟಿಲ್ಲವೆಂದ್ರೆ ಅವರಿಗೆ ಬೇರೆ ಜವಾಬ್ದಾರಿ ನೀಡಲಿದೆ ಎಂದರ್ಥ: ಅಣ್ಣಾಮಲೈ

ಹೇಳಿ ಕೇಳಿ ಚಾಮರಾಜನಗರ ಹಾಗೂ ವರುಣಾದಲ್ಲಿ ಲಿಂಗಾಯತ ಪ್ರಾಬಲ್ಯ ಇದ್ದು, ಸೋಮಣ್ಣ ಅವರು ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ. ಯಡಿಯೂರಪ್ಪ ಬಗ್ಗೆ ಇಲ್ಲಸಲ್ಲದ ಮಾತು ಆಡುತ್ತಾರೆ ಎಂಬ ಆರೋಪ ಈಗಾಗಲೇ ಸಮುದಾಯದ ಜನರಲ್ಲಿ ಕಿಚ್ಚು ಹೊತ್ತಿಸಿದೆ. ಇದು ಚುನಾವಣೆ ಹೊತ್ತಲ್ಲಿ ಅಂಡರ್ ಕರೆಂಟಾಗಿ ಕೆಲಸ ಮಾಡಲಿದೆ ಎಂಬುದು ಸೋಮಣ್ಣ ಆದಿಯಾಗಿ ಎಲ್ಲರಿಗೂ ತಿಳಿದಿದ್ದು, ಇದನ್ನು ಶಮನ ಮಾಡುವುದರಲ್ಲೇ ಸೋಮಣ್ಣ ಕಾಲ ಕಳೆಯಬೇಕಾಗುತ್ತದೆ. ವರುಣಾದತ್ತ ಗಮನ ಹರಿಸುವುದು ಅಸಾಧ್ಯವಾಗಲಿದೆ ಎಂಬುದು ಕೈ ಪಡೆ ರಣತಂತ್ರವಾಗಿದೆ.

ವರುಣಾದಲ್ಲಿ ಸೋಮಣ್ಣ ಗಮನ ಕಡಿಮೆಯಾದಷ್ಟು ಕಾಂಗ್ರೆಸ್‌ಗೆ ವರವಾಗಲಿದೆ ಎಂಬ ಒಂದಂಶದ ಮೇಲೆ ಚಾಮರಾಜನಗರದಲ್ಲಿನ ಬಂಡಾಯವನ್ನು ಹಾಗೇ ಉಳಿಸಲು ಕಾಂಗ್ರೆಸ್ ಈಗ ಮುಂದಾಗಿದೆ. ಚಾಮರಾಜನಗರದ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲೂ ಅಸಮಾಧಾನ ಇದ್ದು, ಇದನ್ನು ಪರಿಹರಿಸುವ ಜವಾಬ್ದಾರಿ ಸೋಮಣ್ಣ ಮೇಲಿದೆ. ಬಂಡಾಯ ಶಮನ ಮಾಡುವುದೋ ಅಥವಾ ವರುಣಾದಲ್ಲಿ ಯುದ್ಧ ಮಾಡುವುದೋ ಎಂಬ ಸಂದಿಗ್ಧತೆಗೆ ಸೋಮಣ್ಣರನ್ನು ದೂಡುವುದೇ ಕಾಂಗ್ರೆಸ್‌ನ ಸದ್ಯದ ರಣನೀತಿಯಾಗಿದೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್ ನಾಮಪತ್ರ ಸಲ್ಲಿಕೆ

Share This Article