ಕರೆಂಟ್ ಬಿಲ್ ಕೇಳಲು ಬಂದ ಲೈನ್‍ಮ್ಯಾನ್ ಮೇಲೆ ಖಾದರ್ ಆಪ್ತನ ಗೂಂಡಾಗಿರಿ

Public TV
2 Min Read

-ಸಿಎಎ, ಎನ್‌ಆರ್‌ಸಿ ದಾಖಲೆ ಕೇಳಲು ಬಂದಿದ್ದೀರಾ ಎಂದು ಹಲ್ಲೆ

ಮಂಗಳೂರು: ಮಾಜಿ ಸಚಿವ ಯು.ಟಿ ಖಾದರ್ ಆಪ್ತ ವಿದ್ಯುತ್ ಬಿಲ್ ಪಾವತಿಸದೇ, ಮೀಟರ್‍ನಲ್ಲೂ ಗೋಲ್ ಮಾಲ್ ಮಾಡಿದ್ದಾನೆಂದು ಮಾಹಿತಿ ತಿಳಿದಿದ್ದ ಮೆಸ್ಕಾಂ ಸಿಬ್ಬಂದಿ ಪರಿಶೀಲಿಸಲು ಮನೆಗೆ ಹೋದಾಗ ಲೈನ್‍ಮ್ಯಾನ್ ಮೇಲೆಯೇ ಆತ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆದಿದೆ.

ಯು.ಟಿ ಖಾದರ್ ಆಪ್ತ, ಕಾಂಗ್ರೆಸ್ ಮುಖಂಡ ಅಮೀರ್ ಹಸನ್ ತುಂಬೆ ಲೈನ್‍ಮ್ಯಾನ್ ಮೇಲೆ ಹಲ್ಲೆ ನಡೆಸಿದ್ದಾನೆ. ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿ ಅಮೀರ್ ತುಂಬೆ ಮನೆಯಿದ್ದು, ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದಕ್ಕೆ ಹಾಗೂ ಮೀಟರ್ ನಲ್ಲೂ ಗೋಲ್ ಮಾಲ್ ನಡೆಸಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಮೀಟರ್ ಪರಿಶೀಲಿಸಲು ಮೆಸ್ಕಾಂ ಲೈನ್ ಮ್ಯಾನ್ ಅಮೀರ್ ಮನೆಗೆ ಬಂದಿದ್ದರು. ಅಲ್ಲದೆ ಬಿಲ್ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಫ್ಯೂಸ್ ತೆಗೆಯಲು ಮುಂದಾಗಿದ್ದರು. ಇದರಿಂದ ರೊಚ್ಚಿಗೆದ್ದ ಅಮೀರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೆಸ್ಕಾಂ ಸಿಬ್ಬಂದಿ ರಂಗನಾಥ್ ಮುಖಕ್ಕೆ ಉಗುಳಿದ್ದು, ಸಂದೇಶ್ ಕುಮಾರ್ ಹಾಗೂ ಮಧುನಾಯ್ಕ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ.

ಮನೆಗೆ ಬಂದಿದ್ದ ಮೂರು ಸಿಬ್ಬಂದಿಗೂ ಕುತ್ತಿಗೆ ಹಿಡಿದು ಹೊರಕ್ಕೆ ದೂಡಿದ್ದಾನೆ. ಕಾಂಗ್ರೆಸ್ ಮುಖಂಡನ ರೌಡಿಸಂ ಬಗ್ಗೆ ಹಲ್ಲೆಗೊಳಗಾದ ಸಿಬ್ಬಂದಿ ಮಧು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಜಾಮೀನು ರಹಿತ ಎಫ್‍ಐಆರ್ ದಾಖಲಾಗಿದೆ. ಸಚಿವರ ಆಪ್ತನೆಂಬ ಕಾರಣಕ್ಕೆ ಅಮೀರ್ ರೌಡಿಸಂ ತೋರಿದ್ದಾನೆ ಎನ್ನಲಾಗುತ್ತಿದ್ದು, ಅಮೀರ್ ತುಂಬೆ ಹಲ್ಲೆ ಮಾಡಿದ ದೃಶ್ಯವನ್ನು ಹಲ್ಲೆಗೊಳಗಾದ ಮೆಸ್ಕಾಂ ಸಿಬ್ಬಂದಿ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

ಇತ್ತೀಚೆಗೆ ಮಂಗಳೂರಿನ ಅಡ್ಯಾರ್ ನಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಆಯೋಜಿಸಿದ್ದ ಸಿಎಎ ವಿರೋಧಿಸಿ ನಡೆದ ಪ್ರತಿಭಟನಾ ಗುಂಪಿನಲ್ಲಿ ಮುಂಚೂಣಿಯಲ್ಲಿದ್ದ ಅಮೀರ್, ಇನ್ನೂ ಅದೇ ಗುಂಗಿನಲ್ಲಿದ್ದು ಮುಸ್ಲಿಂ ಅನ್ನುವ ಕಾರಣಕ್ಕೆ ಮೆಸ್ಕಾಂ ಲೈನ್‍ಮ್ಯಾನ್ ತನ್ನನ್ನು ಟಾರ್ಗೆಟ್ ಮಾಡಿದ್ದಾರೆಂದು ಹೇಳಿಕೊಂಡು ಹಲ್ಲೆ ನಡೆಸಿದ್ದಾನೆ. ಸಿಎಎ ಹಾಗೂ ಎನ್‌ಆರ್‌ಸಿಯ ದಾಖಲೀಕರಣಕ್ಕೆ ಬಂದು ಮುಸ್ಲಿಂಮರನ್ನು ಟಾರ್ಗೆಟ್ ಮಾಡುತ್ತಿದ್ದೀರಾ ಎಂದು ಹೇಳಿಕೊಂಡು ಹಲ್ಲೆ ನಡೆಸಿದ್ದಾನೆ.

ಇದೀಗ ಈತ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಮೀರ್ ತುಂಬೆ ಬಂಧನಕ್ಕೆ ಬಲೆ ಬೀಸಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *