ಸಂಸದ ಮುನಿಯಪ್ಪ ವಿರುದ್ಧ ಎದ್ದಿದೆ ಬೃಹತ್ ಆಂದೋಲನ

Public TV
2 Min Read

ಕೋಲಾರ: ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಬೃಹತ್ ಆಂದೋಲನಗಳೇ ಶುರುವಾಗಿದೆ. ಒಂದು ಕಡೆ ಟಿಕೆಟ್ ತಪ್ಪಿಸಲು ಸ್ವಪಕ್ಷೀಯರೇ ಹೈಕಮಾಂಡ್‍ಗೆ ಒತ್ತಡ ಹಾಕುತ್ತಿದ್ರೆ, ಸರ್ಕಾರಿ ಭೂಮಿ ಕಬಳಿಕೆ ಹಾಗೂ ಬೇನಾಮಿ ಉರುಳು ಸುತ್ತಿಕೊಂಡಿದೆ. ಮತ್ತೆ ಕೆ.ಎಚ್.ಹಠಾವೋ ಕೋಲಾರ ಬಚಾವೋ ಆಂದೋಲನ ಜೀವ ಪಡೆದುಕೊಂಡಿದೆ.

ಈಗಾಗಲೇ ಶತಾಯಗತಾಯ ಸಂಸದ ಮುನಿಯಪ್ಪಗೆ ಟಿಕೆಟ್ ನೀಡಬಾರದೆಂದು ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಕಳೆದ ಅಕ್ಟೋಬರ್ ನಿಂದಲೆ ಕೆ.ಎಚ್.ಹಠಾವೋ ಆಂದೋಲನ ಶುರುವಾಗಿದೆ. ಈ ಮಧ್ಯೆ ಮೀಸಲಾತಿ ಬಳಸಿಕೊಂಡು ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಕೋಟ್ಯಂತರ ರೂಪಾಯಿ ಸರ್ಕಾರಿ ಜಮೀನು ಕಬಳಿಕೆ ಹಾಗೂ ಬೇನಾಮಿ ಆಸ್ತಿ ಮಾಡಿರುವ ದಾಖಲೆಗಳನ್ನ ದಲಿತ ಮುಖಂಡರು ಬಿಡುಗಡೆ ಮಾಡಿದ್ರು. ತಮ್ಮ ಕಟುಂಬದ ಏಳಿಗೆಗಾಗಿ ಹಾಗೂ ದಲಿತರ ಮೀಸಲಾತಿಯನ್ನ ಬಳಸಿಕೊಂಡು ದಲಿತರನ್ನ ವಂಚಿಸಲು ಕಳೆದ 28 ವರ್ಷಗಳ ಅಧಿಕಾರವಧಿಯನ್ನು ಮಿಸಲಿಟ್ಟಿದ್ದಾರೆಂದು ಆರೋಪಿಸಿದ್ರು.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗೊರಮಿಲ್ಲಹಳ್ಳಿಯಲ್ಲಿ ನಿರ್ಗತಿಕರು ಎಂದು ನಾಲ್ಕು ಎಕರೆ ಜಮೀನನ್ನ ಮಂಜೂರು ಮಾಡಿಸಿಕೊಂಡು ನಂತರ ತಮ್ಮ ಅಧಿಕಾರ ಬಳಸಿಕೊಂಡು ಸುಮಾರು 410 ಎಕರೆ ಸರ್ಕಾರಿ ಗೋಮಾಳ ಹಾಗೂ ಖರಾಬ್ ಜಮೀನನ್ನ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ದಲಿತ ವಿರೋಧಿ ಹಾಗೂ ದಲಿತರಿಗೆ ಮೋಸ ಮಾಡಿದ ಸಂಸದ ಮುನಿಯಪ್ಪ ವಿರುದ್ಧ ಪ್ರತಿ ಹಳ್ಳಿಯಲ್ಲೂ ಜನಾಂದೋಲನವನ್ನ ಮಾಡುವ ಮೂಲಕ ಸೋಲಿಸುವಂತೆ ಮನವಿ ಮಾಡಲಾಗುವುದು ಎಂದು ಎಚ್ಚರಿಸಿದ್ರು.

ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಮಂಜೇನಹಳ್ಳಿ ಹಾಗೂ ವೆಂಕಟಾಲ ಗ್ರಾಮದ ಬಳಿ 9 ರಿಂದ 56 ಸರ್ವೆ ನಂ.33 ದಲಿತರಿಗೆ ಸರ್ಕಾರ ಮಂಜೂರು ಮಾಡಿರುವ ಜಮೀನನ್ನ ಕಬಳಿಸಿದ್ದಾರೆ ಎನ್ನಲಾಗಿದೆ. ದಲಿತರನ್ನ ಯಾಮಾರಿಸಿ ಸಂಸದ ಕೆ.ಎಚ್. ಬಂಟ ಮುಳಬಾಗಿಲಿನ ರಾಮಪ್ರಸಾದ್ ಎಂಬವರ ಹೆಸರಿಗೆ 20 ಎಕರೆಯನ್ನ ಮಂಜೂರು ಮಾಡಿಸಿ ಬೇನಾಮಿ ಮಾಡಿದ್ದಾರೆ. ಯಾರಿಗೂ ಪರಭಾರೆ ಮಾಡಬಾರದು ಎಂದು ಎಸಿ ಆದೇಶವನ್ನ ಲೆಕ್ಕಿಸದೆ ಜಗಜೀವನ್ ರಾಂ ಹೆಸರಿನಲ್ಲಿ ಮೆಡಿಕಲ್ ಸಂಸ್ಥೆಯನ್ನ ಸ್ಥಾಪನೆ ಮಾಡೋಣ ಎಂದು ಅಲ್ಲಿನ ದಲಿತರನ್ನ ನಂಬಿಸಿ ಇನ್ನುಳಿದ ಮೂವತ್ತು ಎಕರೆಯನ್ನ ಅಗ್ರಿಮೆಂಟ್ ಹಾಕಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಂಸದರ ಸರ್ಕಾರಿ ಭೂಕಬಳಿಕೆಯನ್ನ ವಿರೋಧಿಸಿ ಕೋಲಾರದ ಸರ್ಕಾರಿ ಬಸ್ ನಿಲ್ದಾಣದ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟಮುನಿಯಪ್ಪ ನೇತೃತ್ವದಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡಿದ್ರು. ಸಂಸದ ಮುನಿಯಪ್ಪ ಪ್ರತಿಕೃತಿ ದಹಿಸಿ ಸಿಬಿಐ ತನಿಖೆಯಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯ ಮಾಡಿದ್ರು. ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಸಂಸದರ ವಿರುದ್ಧ ದೂರು ನೀಡಲು ಮುಂದಾಗಿದ್ದು, ಸರ್ಕಾರ ಹಾಗೂ ಶಿಡ್ಲಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಒಟ್ಟಿನಲ್ಲಿ ಸೋಲಿಲ್ಲದ ಸರದಾರ ಏಳು ಬಾರಿ ಸಂಸದರಾಗಿರುವ ಕೆ.ಎಚ್.ಮುನಿಯಪ್ಪಗೆ ಬಂಡಾಯ, ಬೇನಾಮಿ, ಸರ್ಕಾರಿ ಭೂ ಕಬಳಿಕೆ ನುಂಗಲಾರದ ತುತ್ತಾಗಿದೆ. ಇದು ಮುನಿಯಪ್ಪ ಎಂಟನೇ ಗೆಲುವಿಗೆ ಕಂಟಕವಾಗುತ್ತಾ, ಇಲ್ಲ ಎಂದಿನಂತೆ ಡ್ಯಾಮೇಜ್ ಕಂಟ್ರೋಲ್ ಮಾಡಿ ಸಂಸತ್ ಪ್ರವೇಶ ಮಾಡ್ತಾರ ಅನ್ನೋದನ್ನ ಕಾದು ನೋಡಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *