ರೆಡ್ಡಿ ಬ್ರದರ್ಸ್ ಜನರನ್ನ ಬಿಟ್ಟು ನನ್ನ ಹೊಡಿಸೋಕೆ ನೋಡಿದ್ರು: ಸಿದ್ದರಾಮಯ್ಯ ಆರೋಪ

Public TV
2 Min Read

– ಈಶ್ವರಪ್ಪ ಒಬ್ಬ ಪೆದ್ದ

ಬಳ್ಳಾರಿ: ರೆಡ್ಡಿ ಬ್ರದರ್ಸ್ ಬಹಳ ಎಗರಾಡಿದ್ದರು. ಜನರನ್ನ ಬಿಟ್ಟು ನನ್ನನ್ನು ಹೊಡಿಸುವುದಕ್ಕೆ ನೋಡಿದ್ದರು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕ ಆನಂದ್ ಸಿಂಗ್ ಹೇಗೆ ಶ್ರೀಮಂತರಾದರು ಗೊತ್ತಾ ನಿಮಗೆ? ಈ ಮನೆ ಕಟ್ಟಿದ್ದು ಯಾರ ದುಡ್ಡಿನಿಂದ ಗೊತ್ತಾ ಎಂದು ಸಭೆಯಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದರು. ಬಳಿಕ ಉತ್ತರಿಸಿ, ಅಕ್ರಮ ಗಣಿಗಾರಿಕೆ ಮಾಡಿ ಆನಂದ್ ಸಿಂಗ್ ದುಡ್ಡು ಸಂಪಾದನೆ ಮಾಡಿದ್ದಾರೆ ಎಂದು ಹೇಳಿದರು.

ನಾನು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದೆ. ಆಗ ರೆಡ್ಡಿ ಬ್ರದರ್ಸ್ ನನ್ನ ಮೇಲೆ ಜನರನ್ನು ಛೂ ಬಿಟ್ಟಿದ್ದರು. ಆದರೆ ನಾನು ಅವರ ಹೆದರಿಕೆಗೆ ಜಗ್ಗಲಿಲ್ಲ. ಅಂದು ನಾನು ಕೈಗೊಂಡ ಪಾದಯಾತ್ರೆಯಿಂದ ಜನಾರ್ದನ ರೆಡ್ಡಿ, ಆನಂದ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೈಲು ಸೇರಿದ್ದರು ಎಂದು ವಾಗ್ದಾಳಿ ನಡೆಸಿದರು.

ಜೈಲಿಗೆ ಹೋಗಿ ಬಂದವರಿಗೆ ನೀವು ವೋಟ್ ಹಾಕುತ್ತೀರಾ? ಇವರೇನು ಜೈಲಿನಲ್ಲಿ ಸಂಬಂಧ ಬೆಳೆಸುವುದಕ್ಕೆ ಹೋಗಿದ್ರಾ? ಸಾಲಮನ್ನಾ ಅನ್ನಭಾಗ್ಯ ಯೋಜನೆ ಕೊಟ್ಟಿದ್ದು ನಾವು. ಆದರೆ ಈ ಮಿಸ್ಟರ್ ಯಡಿಯೂರಪ್ಪ ಬಡವರ ಹೊಟ್ಟೆ ಮೇಲೆ ಹೊಡಿಯುತ್ತಿದ್ದಾರೆ. 17 ಜನ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದರು, ಸುಪ್ರೀಂಕೋರ್ಟ್ ಕೂಡ ಅನರ್ಹರು ಎಂದು ತೀರ್ಪು ನೀಡಿದೆ. ಆದರೂ ನಾಜಿಕೆ ಇಲ್ಲದೆ ಜನತಾ ನಾಯಾಲಯವಾದ ನಿಮ್ಮ ಮುಂದೆ ಬಂದಿದ್ದಾರೆ. ನೀವು ಅವರನ್ನು ಅನರ್ಹ ಮಾಡಿ ಮನಗೆ ಕಳಿಸಿ ಎಂದು ಮತದಾರರಿಗೆ ಮನವಿ ಮಾಡಿಕೊಂಡರು.

ಗ್ರಾಮೀಣಾಭಿವೃದ್ಧಿ ಪಂಚಾಯತ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅವರು, ಈಶ್ವರಪ್ಪ ಒಬ್ಬ ಪೆದ್ದ. ಅವನ ನಾಲಿಗೆಗೂ ಮೆದುಳಿಗು ಲಿಂಕ್ ತಪ್ಪಿದೆ. ತಾನು ಏನು ಮಾತನಾಡುತ್ತಿದ್ದಾನೆ ಎನ್ನುವುದು ಅವನಿಗೆ ಗೊತ್ತಾಗಲ್ಲ ಎಂದು ಹೇಳಿದರು.

ಆನಂದ್ ಸಿಂಗ್ ಜಿಲ್ಲೆ ವಿಭಜನೆ ಗಿಮಿಕ್ ಮಾಡುತ್ತಿದ್ದಾರೆ. ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ಸಚಿವ ಶ್ರೀರಾಮುಲು ಪ್ರಾಣ ಹೋದರು ಜಿಲ್ಲೆ ವಿಭಜನೆ ಮಾಡುವುದಕ್ಕೆ ಬಿಡಲ್ಲ ಎನ್ನುತ್ತಿದ್ದಾರೆ. ಇವರನ್ನು ನೀವು ನಂಬುತ್ತೀರಾ? ಆನಂದ್ ಸಿಂಗ್ ಶಾಸಕರಾಗಿದ್ದಾಗ ಹಾಗೂ ಮಂತ್ರಿಯಾಗಿದ್ದಾಗ ವಿಭಜನೆ ಬಗ್ಗೆ ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *