ನೀನು 4 ಅಡಿ ನಾನು 6 ಅಡಿ ನೋಡೇ ಬಿಡೋಣ – ಜಮೀರ್ ಅಹ್ಮದ್‍ಗೆ ಅಲ್ತಾಫ್ ಪಂಥಾಹ್ವಾನ

Public TV
2 Min Read

– ಜೆಡಿಎಸ್ ಸೇರ್ಪಡೆ ಬೆನ್ನಲ್ಲೇ ಗುಡುಗು

ಬೆಂಗಳೂರು: ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿ ಮಾಜಿ ಪ್ರಧಾನಿ ದೇವೇಗೌಡ ಸಮ್ಮುಖದಲ್ಲಿ ಅಲ್ತಾಫ್ ಖಾನ್ ಜೆಡಿಎಸ್ ಕೈ ಹಿಡಿದ್ದಾರೆ.

ಅಲ್ತಾಫ್ ಖಾನ್ ಕಳೆದ 25 ವರ್ಷಗಳಿಂದ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್‍ನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಈಗ ಜಮೀರ್ ಅಹಮದ್ ವಿರುದ್ಧ ಜೆಡಿಎಸ್‍ನಿಂದ ಕಣಕ್ಕಿಳಿಯಲಿದ್ದಾರೆ. ಇಂದು ಮಾಜಿ ಪ್ರಧಾನಿ ದೇವೇಗೌಡ ಜೆಡಿಎಸ್ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದು, ಪಕ್ಷದ ಸದಸ್ಯತ್ವದ ಚೀಟಿಯನ್ನು ಕೂಡ ನೀಡಿದ್ದಾರೆ. ಅಷ್ಟೇ ಅಲ್ಲದೇ ಅಲ್ತಾಫ್ ಖಾನ್ ಜೊತೆ ಚಾಮರಾಜಪೇಟೆಯ ಅನೇಕ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ದೇವೇಗೌಡರು ನಮ್ಮ ತಂದೆ ಅಂತ ಹೇಳುತ್ತಾರೆ. ತಂದೆ ತಾಯಿಯನ್ನ ದೇವರು ರೀತಿ ನೋಡಿಕೊಳ್ಳಬೇಕು. ಆದರೆ ತಂದೆ ತಾಯಿ ಬಿಟ್ಟು ಹೋದ ನೀವು ನಮ್ಮ ಕ್ಷೇತ್ರವನ್ನು ಹೇಗೆ ನೋಡಿಕೊಳ್ಳುತ್ತೀರಿ. ಇಂಥವರಿಗೆ ನೀವು ಅವಮಾನ ಮಾಡಿದ್ದೀಯ. ನಿಮ್ಮನ್ನು ಇಡೀ ರಾಜ್ಯ ನೋಡುತ್ತಾ ಇದೆ. ನೀನು 4 ಅಡಿ ನಾನು 6 ಅಡಿ ನೋಡೇ ಬಿಡೋಣ ಎಂದು ಜಮೀರ್ ಅಹಮದ್ ಖಾನ್ ಗೆ ಅಲ್ತಾಫ್ ಖಾನ್ ಬಹಿರಂಗವಾಗಿಯೇ ಸವಾಲ್ ಎಸೆದರು. ಈ ಬಾರಿ ಜಮೀರ್ ಖಾನ್ ಗೆ ಠೇವಣಿ ಕಳೆದುಕೊಳ್ಳೋದು ಗ್ಯಾರೆಂಟಿ. ಪಕ್ಷ ಬಿಟ್ಟು ಹೋದವರೆಲ್ಲ ಠೇವಣಿ ಉಳಿಸಿಕೊಳ್ಳೊದಕ್ಕೆ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮದಲ್ಲಿ ಉರ್ದುವಿನಲ್ಲಿ ಮಾತನಾಡುವಂತೆ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಗೆ ಶರವಣ ಮನವಿ ಮಾಡಿದ್ದರು. ಆದರೆ ಇದಕ್ಕೆ ಪ್ರತಿಯಾಗಿ ಜಫ್ರುಲ್ಲಾ ಖಾನ್, ಕರ್ನಾಟಕದಲ್ಲಿ ಪ್ರತಿಯೊಬ್ಬ ಮುಸ್ಲಿಮರು ಮೊದಲು ಕನ್ನಡ ನಂತರ ಉರ್ದುವಿನಲ್ಲಿ ಮಾತನಾಡಬೇಕು ಎಂದು ಉತ್ತರಿಸಿದ್ದಾರೆ.

ಜಫ್ರುಲ್ಲಾ ಖಾನ್ ಆದರೆ ಕೊನೆಗೆ ಉರ್ದುವಿನಲ್ಲಿ ಭಾಷಣ ಮಾಡಿದ್ದಾರೆ. ಒಬ್ಬ ಖಾನ್ ಆಚೆ ಹೋದ ಕಾರಣ ನಮ್ಮ ಕೈ ಖಾಲಿ ಆಯ್ತು ಎಂದು ಬೇಸರವಾಗಿತ್ತು. ಈಗ ಆ ಜಾಗವನ್ನು ಮತ್ತೊಬ್ಬ ಖಾನ್ ತುಂಬಿದ್ದಾರೆ. ನಂಬಿದವರಿಗೆ ಮೋಸ ಮಾಡುವುದು ನೈಜ ಮುಸ್ಲಿಂ ಧರ್ಮವಲ್ಲ. ಈಗ ಪಕ್ಷ ಬಿಟ್ಟು ಹೋದವರು ಪಕ್ಷಕ್ಕೆ ಮಾತ್ರವಲ್ಲ ಧರ್ಮಕ್ಕೂ ದ್ರೋಹ ಮಾಡಿದ್ದಾರೆ ಎಂದು ಜಫ್ರುಲ್ಲಾ ಹೇಳಿದರು. ಇದನ್ನು ಓದಿ: ಜಮೀರ್ ಅಹಮದ್ ಗೆ ಸೆಡ್ಡು ಹೊಡೆಯಲು ದೇವೇಗೌಡರಿಂದ ಬಿಗ್ ಪ್ಲಾನ್

ನಾವು ಯುದ್ದಕ್ಕೆ ರೆಡಿಯಾಗಿದ್ದೇವೆ. ಬನ್ನಿ ನೋಡೋಣ ನಿಮ್ಮನ್ನು ಸಚಿವರು ಮಾಡಿದ್ದು ಜೆಡಿಎಸ್ ಪಕ್ಷ. ನಿಮಗೆ ಯಾವುದೇ ನೈತಿಕತೆ ಇಲ್ಲ. ಇದು ಬಕೆಟ್ ರಾಜಕಾರಣ ಅಲ್ಲ. ಕುಮಾರಣ್ಣ ನೀವು ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೀರಿ. ಆದ್ರೆ ನೀವು ಮಾಡಿದ್ದಾದರೂ ಏನು? ಹಣಕ್ಕೋಸ್ಕರ ನಿಮ್ಮ ಮತ ಮಾರಿಕೊಂಡಿದ್ದೀರಿ ಎಂದು ಶರವಣ ಹೇಳಿದ್ದಾರೆ.

ನನ್ನ ರಾಜಕೀಯ ಹೋರಾಟದಲ್ಲಿ ಇವತ್ತು ವಿಶೇಷ ದಿನ. ನಮ್ಮ ಪಕ್ಷದಿಂದ ಗೆದ್ದು ರಾಜ್ಯ ಆಳುತ್ತಿದ್ದಾರೆ. ಅವರಿಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಹಂಬಲ ಇತ್ತು. ನಾವು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದ್ದೀವೆ. ಆದರೆ ಅವರು ಪಕ್ಷ ಬಿಟ್ಟು ಹೋದರು. ಇವತ್ತು ಇಡೀ ಪಕ್ಷವನ್ನೇ ನಾಶ ಮಾಡಬೇಕೆಂದು ಹೊರಟ್ಟಿದ್ದಾರೆ. ನಮ್ಮ ಪಕ್ಷದ ಅನೇಕ ಶಾಸಕರನ್ನ ಹೊರಗಡೆ ಕರೆದುಕೊಂಡು ಹೋಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೇವೇಗೌಡ ಟೀಕಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *